ಮೈಸೂರು: ವೈಚಾರಿಕ ಕರ್ನಾಟಕ ಕಟ್ಟುವ ಕೆಲಸ ಕನ್ನಡಿಗರಿಂದ ಆಗಬೇಕಿದೆ ಎಂದು ಸಾಹಿತಿ ಸಿ.ಪಿ.ಕೃಷ್ಣಕುಮಾರ್ ಸಲಹೆ ನೀಡಿದರು.
ಇಂದು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ವತಿಯಿಂದ ಸುವರ್ಣ ಕರ್ನಾಟಕ ಅಂಗವಾಗಿ ಬಿ.ಎಂ.ಶ್ರೀ ಸಭಾಂಗಣದಲ್ಲಿ ಆಯೋಜಿಸಿದ್ದ ‘ಕನ್ನಡ-ಕರ್ನಾಟಕ-ಕನ್ನಡಿಗ’ ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸುವರ್ಣ ಕರ್ನಾಟಕದಲ್ಲಿ ಇಂದು ಹಿತ್ತಾಳೆ ಕರ್ನಾಟಕ ಆಗಿದೆ. ಹಿತ್ತಾಳೆಗೆ ಚಿನ್ನದ ಲೇಪನ ಮಾಡಲಾಗಿದೆ. ಕನ್ನಡ ಬೇರೆ ಅಲ್ಲ ಕುವೆಂಪು ಬೇರೆ ಅಲ್ಲ. ಕುವೆಂಪು ವೈಚಾರಿಕತೆಯ ಜೊತೆ ಕರ್ನಾಟಕವನ್ನು ಕಾಣಬೇಕು ಎಂದು ಅಭಿಪ್ರಾಯಪಟ್ಟರು.
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾದ ಲೋಲಾಕ್ಷಿ ಅವರು ಪ್ರಸ್ತಾವಿಕವಾಗಿ ಮಾತನಾಡಿ, ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರು ನಾಮಕರಣಗೊಂಡ 50 ವರ್ಷಗಳ ಸವಿನೆನಪಿಗಾಗಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ವರ್ಷ ಪೂರ್ತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಈ ಮೂಲಕ ಸುವರ್ಣ ಕರ್ನಾಟಕವನ್ನು ಸಂಭ್ರಮಿಸುತ್ತಾ, ಭವಿಷ್ಯದ ನಾಡಿಗೆ ತೆರೆದುಕೊಳ್ಳುತ್ತಿದ್ದೇವೆ ಎಂದು ತಿಳಿಸಿದರು.
ಮಧ್ಯಾಹ್ನ ನಡೆದ ‘ಕನ್ನಡ ಚಲನಚಿತ್ರ ಮತ್ತು ಶ್ರೀ ಸಾಮಾನ್ಯನ ಬದುಕು’ ಎಂಬ ವಿಷಯ ಕುರಿತು ಶಿವಮೊಗ್ಗ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಪ್ರೊ. ಪ್ರಶಾಂತ್ ನಾಯಕ್ ಮಾತನಾಡಿದರು. ಇನ್ನು ‘ಜಾಗತೀಕರಣ ಮತ್ತು ಜನಪದ ಭಾಷೆ’ ಕುರಿತು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಪ್ರೊ.ನಂಜಯ್ಯ ಹೊಂಗನೂರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಅಧ್ಯಾಪಕರು, ಬೋಧಕೇತರ ಸಿಬ್ಬಂದಿಗಳು, ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಹಾಜರಿದ್ದರು.





