ಮೈಸೂರು: ಡಾ.ಬಿ.ಆರ್.ಅಂಬೇಡ್ಕರ್ ಅವರು ಬರೆದಿರುವ ಭಾರತದ ಸಂವಿಧಾನವೇ ಭಾರತೀಯರ ನಿಜವಾದ ಧರ್ಮಗ್ರಂಥ ಎಂದು ಮಾಜಿ ಮಹಾಪೌರ ಪುರುಷೋತ್ತಮ್ ಹೇಳಿದರು.
ಸಂವಿಧಾನ ದಿನಾಚರಣೆಯ ಅಂಗವಾಗಿ ಪುರಭವನದಲ್ಲಿ ಏರ್ಪಡಿಸಿದ್ದ ʼಭೀಮ್ ರತ್ನ ಪ್ರಶಸ್ತಿʼ ಪ್ರಧಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸಂವಿಧಾನದ ಬಗ್ಗೆ ನಮಗೆ ಗೊತ್ತಿಲ್ಲ ಎಂದು ಹೇಳಿದರೆ ಅಂತಹವರು ಭಾರತೀಯರಾಗಲು ಸಾಧ್ಯವಿಲ್ಲ. ಸಂವಿಧಾನವನ್ನು ಪ್ರತಿಯೊಬ್ಬರು ಓದಿಕೊಳ್ಳಬೇಕು. ಎಲ್ಲರೂ ಸಂವಿಧಾನದ ಆಶಯಗಳನ್ನು ಗೌರವಿಸುವುದರ ಜೊತೆಗೆ, ಪಾಲೀಸಬೇಕು ಎಂದು ಸಲಹೆ ನೀಡಿದರು.
ಪ್ರಸ್ತುತ ಕಾಲಘಟ್ಟದಲ್ಲಿ ಮೂಲಭೂತವಾದಿಗಳು ಸಂವಿಧಾನ ವಿರೋಧಿ ಹೇಳಿಕೆಗಳನ್ನು ನೀಡುತ್ತಿದ್ದು, ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ಬದಲಾಯಿಸಿ ಜಾತಿ ಆಧಾರಿತ ಸಂವಿಧಾನ ಜಾರಿ ಮಾಡಲು ಸಂಚು ರೂಪಿಸುತ್ತಿದ್ದಾರೆ. ನಮ್ಮ ಸಂವಿಧಾನವನ್ನು ಯಾವುದೋ ಅರಮನೆಯಲ್ಲಿ, ಮಠದ ಮೂಲೆಯಲ್ಲಿ ಕುಳಿತು ಬರೆದ ಕೃತಿಯಲ್ಲ. ಆದ್ದರಿಂದ ಸಂವಿಧಾನ ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರು ದೇಶದ ಸರ್ವತೋಮುಖ ಪ್ರಗತಿ ಮತ್ತು ಸರ್ವಜನರ ಏಳಿಗೆಯನ್ನು ಸಾಧಿಸುವ ಸದುದ್ದೇಶದಿಂದ ಸಮಾನತೆ, ಸಹೋದರತೆ, ಸಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಆಧಾರವಾಗಿಟ್ಟುಕೊಂಡು ಸಂವಿಧಾನವನ್ನು ರಚಿಸಿದ್ದಾರೆ. ಆದ್ದರಿಂದ ನಮ್ಮ ಸಂವಿಧಾನ ವಿಶ್ವಶ್ರೇಷ್ಠ ಸಂವಿಧಾನವಾಗಿದೆ ಎಂದು ತಿಳಿಸಿದರು.
ಹಿರಿಯ ಸಾಹಿತಿ ಬನ್ನೂರು ಕೆ.ರಾಜು ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರು ಬದುಕಿದ್ದಾಗ ಮಾತ್ರವಲ್ಲದೆ ಕಾಲವಾದಗಲೂ ಶೋಷಣೆಗೆ ಒಳಗಾಗುತ್ತಿದ್ದಾರೆ. ಅಂಬೇಡ್ಕರ್ ಮತ್ತು ಅವರ ಆಶಯಗಳ ವಿರುದ್ಧ ಕೆಲವು ಜಾತಿವಾದಿ ಮನಸ್ಥಿತಿಗಳು, ಪಟ್ಟಭದ್ರ ಹಿತಾಸಕ್ತಿಗಳು ಇಂದಿಗೂ ಶೋಷಣೆಯ ಅಸ್ತ್ರಗಳನ್ನು ಝಳಪಿಸುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ಭೀಮ್ ಸೇನೆಯ ರಾಜ್ಯಾಧ್ಯಕ್ಷ ಎಸ್.ಸರ್ವೇಶ್, ಗೌರವಾಧ್ಯಕ್ಷ ಶಿವಕುಮಾರ್, ಉಸ್ತುವಾರಿ ಜಿ.ಎನ್.ದೇವದತ್ತ, ಯುವ ಘಟಕದ ಅಧ್ಯಕ್ಷ ಸಿ.ಮೋಹನ್ಕುಮಾರ್, ಉಪಾಧ್ಯಕ್ಷ ರಾದ ಎಂ.ಎಸ್.ವೈರಮುಡಿ, ಎಸ್.ಅಶೋಕ್ ಮತ್ತಿರರು ಕಾರ್ಯಕ್ರಮದಲ್ಲಿ ಉಪಸ್ಥತರಿದ್ದರು.





