ಮೈಸೂರು: ಉಪಚುನಾವಣೆಯ ಫಲಿತಾಂಶಕ್ಕೂ ಸಿಎಂ ಕುರ್ಚಿ ವಿಚಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಉಪಚುನಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮದು ಹೈಕಮಾಂಡ್ ಪಕ್ಷ. ಹೈಕಮಾಂಡ್ ಹೇಳಿದರೆ ಇನ್ನೂ ಎರಡು ಬಜೆಟ್ ಮಂಡಿಸುತ್ತೇನೆ ಎಂದು ಅಧಿವೇಶನದಲ್ಲೇ ಹೇಳಿದ್ದೇನೆ. ಈಗಲೂ ಅದನ್ನೇ ಹೇಳುತ್ತೇನೆ. ಉಪಚುನಾವಣೆ ಫಲಿತಾಂಶಕ್ಕೂ ಅದಕ್ಕೂ ಸಂಬಂಧ ಇಲ್ಲ. ಎರಡು ಕ್ಷೇತ್ರಗಳಲ್ಲಿ ನಾವೇ ಗೆಲ್ಲುತ್ತೇವೆ. ದಾವಣಗೆರೆಯಲ್ಲಿ ಯಾವ ಗೊಂದಲವೂ ಇಲ್ಲ. ಕಳೆದ ಮೂರು ಉಪಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ನಾವೇ ಗೆದ್ದಿದ್ದೇವೆ. ಅದು ಜನರು ಸರ್ಕಾರಕ್ಕೆ ಮಾಡಿದ ಆಶೀರ್ವಾದ. ಈ ಫಲಿತಾಂಶವೂ ಕೂಡ ಜನರ ಸರ್ಕಾರ ಮಾಡುವ ಆಶೀರ್ವಾದ. ಇದನ್ನ ದಿಕ್ಸೂಚಿ ಅದು ಇದು ಎಂದು ಹೇಳುವುದಿಲ್ಲ. ನಾನು ಏಪ್ರಿಲ್ ಒಂದರಿಂದ ಚುನಾವಣೆ ಪ್ರಚಾರದಲ್ಲಿ ಭಾಗವಹಿಸುತ್ತೇನೆ. ಏಪ್ರಿಲ್.5ರಂದು ಕೇರಳಕ್ಕೆ ಪ್ರಚಾರಕ್ಕೆ ಹೋಗುತ್ತೇನೆ. ತಮಿಳುನಾಡು ಚುನಾವಣೆ ಪ್ರಚಾರಕ್ಕೆ ಹೋಗುವುದಿಲ್ಲ ಎಂದು ಹೇಳಿದರು.
ಇನ್ನು ಶಿಕ್ಷಣದಲ್ಲಿ ದ್ವಿಭಾಷಾ ನೀತಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಸರ್ಕಾರದ ಈ ನಿರ್ಧಾರವನ್ನ ಎಲ್ಲರೂ ಒಪ್ಪಿಕೊಳ್ಳಬೇಕು. ಯಾರೋ ಕೆಲವರು ವಿರೋಧ ಮಾಡಿದರು ಎಂದು ನಾವು ಹಿಂದೆ ಸರಿಯುವುದಿಲ್ಲ. ಎಲ್ಲಾ ದೃಷ್ಟಿಕೋನ ಪರಾಮರ್ಶಿಸಿ ಸರ್ಕಾರ ಈ ನಿರ್ಧಾರ ಮಾಡಿದೆ. ಎಲ್ಲರೂ ಈ ನಿರ್ಧಾರವನ್ನು ಒಪ್ಪಿಕೊಳ್ಳಬೇಕು. ಈ ವರ್ಷದಿಂದಲೇ ಪರೀಕ್ಷೆಯಲ್ಲಿ ಇದು ಜಾರಿ. ನಾನು ಹಿಂದಿ ಕಲಿಯಬಾರದು ಎಂದು ಹೇಳುತ್ತಿಲ್ಲ. ಕಡ್ಡಾಯ ಬೇಡ ಎಂದು ಹೇಳುತ್ತಿದ್ದೇನೆ. ನಾನು ಓದುವಾಗ ಕಡ್ಡಾಯ ಇರಲಿಲ್ಲ. ಹೀಗಾಗಿ ನಾನು ಹಿಂದಿ ಓದಲೇ ಇಲ್ಲ. ಸುಮ್ಮನೆ ಹೇರಿಕೆಯಾಗಬಾರದು ಎಂದರು.
ಇನ್ನು ಇಂದಿನಿಂದ ಐಪಿಎಲ್ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ನಾನು ಏನು ಕೆಲಸ ಇಲ್ಲ ಅಂದರೇ ಮಾತ್ರ ಕ್ರಿಕೆಟ್ ನೋಡಲು ಹೋಗುತ್ತೇನೆ. ಇಲ್ಲ ಅಂದ್ರೆ ಹೋಗುವುದಿಲ್ಲ. ನನಗೆ ಕ್ರಿಕೆಟ್ ಅಂದರೆ ಇಷ್ಟ. ಆದರೆ ಕೆಲಸ ಇದ್ದಾಗ ನೋಡುವುದಿಲ್ಲ. ನನಗೆ 9 ತಾರೀಖಿನವರೆಗೂ ಚುನಾವಣಾ ಕೆಲಸಗಳು ಇದೆ. ಅಲ್ಲಿವರೆಗೆ ಯಾವ ಮ್ಯಾಚ್ ಗಳನ್ನ ನೋಡಲು ಹೋಗುವುದಿಲ್ಲ. ಆಮೇಲೆ ಬೇಕಾದ್ರೆ ನೋಡೊಣಾ. ಶಾಸಕರು ಎರಡು ಟಿಕೆಟ್ ಕೇಳಿದ್ರು ಮೊದಲು ಒಂದು ಕೊಡುತ್ತಿದ್ದರು, ಈಗ ಎರಡು ಟಿಕೆಟ್ ಕೊಟ್ಟಿದ್ದಾರೆ. ಇಷ್ಟ ಇದ್ದವರು ಹೋಗಬಹುದು, ಬೇಡ ಎಂದರೆ ಬಿಡಬಹುದು.
ಇದರಲ್ಲಿ ತಪ್ಪು ಸರಿ ಪ್ರಶ್ನೆ ಬರುವುದಿಲ್ಲ ಎಂದು ಹೇಳಿದರು.





