ಮೈಸೂರು : 12ನೇ ಶತಮಾನದಲ್ಲಿ ಮಾನವಕುಲಕ್ಕೆ ಮಾರ್ಗದರ್ಶಕರಾಗಿದ್ದ ಬಸವಣ್ಣನವರ ತತ್ವಗಳು ಇಂದಿಗೂ ಕೂಡ ಪ್ರಸ್ತುತವಾಗಿವೆ. ದೂರ ದೃಷ್ಟಿಯ ಆಲೋಚನೆಗಳು ಮತ್ತು ಸಮಾಜವನ್ನು ಯಾವ ರೀತಿ ಕಟ್ಟಬೇಕು ಎನ್ನುವ ಪರಿಕಲ್ಪನೆಯನ್ನು ಹೊಂದುವಂತಹ ಬಸವಣ್ಣನವರ ತತ್ವದಲ್ಲಿ ಲಿಂಗಭೇದ ಜಾತಿಭೇದ ಅಸಮಾನತೆ ಇರಲಿಲ್ಲ. ಎಲ್ಲರನ್ನೂ ಸಮಾನವಾಗಿ ಕಾಣುವ ಒಂದು ಪ್ರವೃತ್ತಿ ಬಸವಣ್ಣವರಲ್ಲಿ ಇತ್ತು ಎಂದು ನರಸಿಂಹ ರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ತನ್ವೀರ್ ಸೇಠ್ ಅವರು ತಿಳಿಸಿದರು.
ಕರ್ನಾಟಕ ಕಲಾಮಂದಿರದಲ್ಲಿ ಬುಧವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಬಸವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಸವಣ್ಣನವರ ತತ್ವ ಆದರ್ಶಗಳನ್ನು ನಾವು ಕೂಡ ಅಳವಡಿಸಿಕೊಳ್ಳಬೇಕು. ಸಮಾಜದಲ್ಲಿ ಯಾವ ಜಾತಿ ಯಾವ ಅಂತಸ್ತು ಎನ್ನುವ ಭೇದವಿಲ್ಲದೆ ಅವರು ಜೀವಿಸಿದರು ಎಂದು ತಿಳಿಸಿದರು.
ದಾಸರು ಮತ್ತು ಶರಣರು ನಮಗೆ ನೀಡಿರುವ ಒಳ್ಳೆಯ ಉಪಯುಕ್ತವಾದಂತಹ ಮಾತುಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಬಸವಣ್ಣನವರು ಹೇಳಿರುವಂತಹ ವಚನಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು. ಕೇವಲ ಇವ ಯಾರವಾ ಇವ ಯಾರವ ಇವ ನಮ್ಮವ ನಮ್ಮವ ಎನ್ನುವ ವಚನಗಳಿಗೆ ಸೀಮಿತವಾಗದೆ, ಎಲ್ಲರನ್ನೂ ಅಪ್ಪಿಕೊಂಡು ಎಲ್ಲರನ್ನೂ ಜೊತೆಗೂಡಿಸಿ ಮೇಲು-ಕೀಳು ಎಂಬ ಭಾವನೆಯನ್ನು ತೊಡೆದು ಹಾಕಬೇಕು ಎಂದು ತಿಳಿಸಿದರು.
ಕೃಷ್ಣರಾಜ ಕ್ಷೇತ್ರದ ಶಾಸಕರಾದ ಟಿ.ಎಸ್ ಶ್ರೀವತ್ಸ ಮಾತನಾಡಿ, ಬಸವಣ್ಣನವರು ಮಾಡಿದಂತಹ ಅನೇಕ ಹೋರಾಟಗಳು, ಶ್ರಮಗಳು ಕಾರಣಕ್ಕೆ ಲಿಂಗ ಸಮಾಜ ಬಹಳ ಹಿಂದೆಯೇ ಸಮಾಜದಲ್ಲಿ ಇದ್ದ ಶೋಷಣೆಯ ವಿರುದ್ಧ ಧ್ವನಿಯನ್ನು ಎತ್ತಿತು. ಈಗಾಗಲೇ ಅವರೇ ಹೇಳಿರುವಂತೆ ಸ್ವಂತ ಸಹೋದರಿಗೆ ಲಿಂಗಧಾರಣೆಯನ್ನು ಮಾಡುವುದರ ಮುಖಾಂತರ ಸಮಾಜದಲ್ಲಿ ಸಮಾನತೆಯನ್ನು ತರಬೇಕು ಎಂಬುವ ನಿಟ್ಟಿನಲ್ಲಿ ಬಸವಣ್ಣನವರ ಪ್ರಯತ್ನ ಸಾಕಷ್ಟು ಇದೆ ಎಂದು ಹೇಳಿದರು.
ಇವತ್ತು ವಚನಗಳು ಎಂದರೆ ಸಮಾಜದಲ್ಲಿ ಅಂಕುಡೊಂಕನ್ನು ತುಂಬಾ ಸರಳ ಭಾಷೆಯಲ್ಲಿ ಸರಳವಾದ ಕನ್ನಡದಲ್ಲಿ ನಮ್ಮೆಲ್ಲರಿಗೂ ಅರ್ಥವಾಗುವಂತ ರೀತಿಯಲ್ಲಿ ಬಸವಣ್ಣನವರು ವಚನಗಳು ತಿಳಿಸುತ್ತವೆ. ಇವರ ವಚನಗಳು ನಮಗೆ ಅನೇಕ ಸಂದರ್ಭದಲ್ಲಿ ಪ್ರೇರಣೆ ನೀಡುತ್ತವೆ ಎಂದರು.
ವಿಧಾನ ಪರಿಷತ್ತಿನ ಶಾಸಕರಾದ ಡಿ. ತಿಮ್ಮಯ್ಯ ಮಾತನಾಡಿ, ಬಸವಣ್ಣನವರು ಈ ರಾಷ್ಟ್ರಕ್ಕೆ ಅಲ್ಲ ಇಡೀ ಪ್ರಪಂಚಕ್ಕೆ ಒಬ್ಬ ಮಹಾನ್ ಚೇತನ ಮತ್ತು ಮಾನವೀಯ ಮೌಲ್ಯಗಳನ್ನು ಸಮಾಜಕ್ಕೆ ನೀಡಿದ ವ್ಯಕ್ತಿ. ಸಮಾನತೆ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂದು ತಿಳಿಸಿಕೊಟ್ಟರು. ಸುಮಾರು 800 ವರ್ಷಗಳ ಹಿಂದೆ ಇದ್ದಂತಹ ಜಾತಿ ಪದ್ಧತಿಯನ್ನು ತೊಲಗಿಸಲು ಪಣತೊಟ್ಟು ಹೋರಾಡಿದವರು ಬಸವಣ್ಣನವರು ಎಂದು ಹೇಳಿದರು.





