Mysore
25
scattered clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ನಿರಂತರ ಓದಿನಿಂದ ಯಶಸ್ಸು ಸಾಧ್ಯ: ಕಲ್ಯಾಣ್‌ ಕುಮಾರ್

ಮೈಸೂರು: ಪ್ರಸ್ತುತ ಬ್ಯಾಂಕಿಂಗ್ ಕ್ಷೇತ್ರದ ಉದ್ಯೋಗವು ಭ್ರಷ್ಟಾಚಾರ ಮುಕ್ತ ಮತ್ತು ಪಾರದರ್ಶಕ ಆಯ್ಕೆಗೆ ದೇಶದಲ್ಲೇ ಹೆಸರಾಗಿದೆ. ನಿರಂತರ ಓದಿದರೆ ವಿದ್ಯಾರ್ಥಿಗಳಿಗೆ ಯಶಸ್ಸು ಸಿದ್ಧವಾಗಲಿದೆ. ಹೀಗಾಗಿ,  ಯುವ ಜನತೆ ಬ್ಯಾಂಕಿಂಗ್‌ ಕ್ಷೇತ್ರಗಳತ್ತ ಗಮನಹರಿಸಿ ಉದ್ಯೋಗ ಗಿಟ್ಟಿಸಿಕೊಳ್ಳಬೇಕು  ಎಂದು ಭಾರತೀಯ ಸ್ಟೇಟ್ ಬ್ಯಾಂಕ್ ನ ಮುಖ್ಯ ವ್ಯವಸ್ಥಾಪಕ ಕಲ್ಯಾಣ್‌ ಕುಮಾರ್‌ ಸಲಹೆ ನೀಡಿದರು.

ಶುಕ್ರವಾರ ನಗರದ ಲಕ್ಷ್ಮಿಪುರಂ ಸರ್ಕಾರಿ ಪ್ರೌಢಶಾಲೆ ಮತ್ತು ಪದವಿಧರರ ಕಾಲೇಜಿನ ಆವರಣದಲ್ಲಿರುವ ಜ್ಞಾನಬುತ್ತಿ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ಎಸ್ಎಸ್ ಸಿ\ಬ್ಯಾಂಕಿಂಗ್ ಪರೀಕ್ಷೆಗಳ ಉಚಿತ ತರಬೇತಿ ಶಿಬಿರವನ್ನು ಗಿಡಕ್ಕೆ ನೀರು ಎರೆಯುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಸ್ತುತ ಸರ್ಕಾರಿ ಉದ್ಯೋಗಗಳ ಆಯ್ಕೆ ಪ್ರಕ್ರಿಯೆಯು ಹಲವಾರು ವಿವಾದಗಳಿಗೆ ಒಳಗಾಗಿ ನಾಲ್ಕೈದು ವರ್ಷಗಳು ಹಿಡಿಯುತ್ತಿವೆ. ಆದರೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೇವಲ ಆರು ತಿಂಗಳೊಳಗಾಗಿ ಅರ್ಜಿಯಿಂದ ಆಯ್ಕೆ ಪ್ರಕ್ರಿಯೆ ಮುಗಿದಿರುತ್ತದೆ. ಬ್ಯಾಂಕಿಂಗ್ ಹುದ್ದೆಗಳು ಅತ್ಯುತ್ತಮ ಸಂಬಳ ಮತ್ತು ಇತರೆ ಆರ‍್ಷಕ ಭತ್ಯೆಗಳಿರುವುದರಿಂದ ಗೌರವಯುತ ಜೀವನ ನಡೆಸಲು ಸಾಧ್ಯವಿದೆ ಎಂದು ಹೇಳಿದರು.

ಸಾಮಾನ್ಯವಾಗಿ ಇಂದು ಬಹುತೇಕ ಬ್ಯಾಂಕ್ ಗಳಲ್ಲಿ ಉತ್ತರ ಭಾರತದವರೇ ಹೆಚ್ಚಿನ ಸಂಖ್ಯೆಯಲ್ಲಿ ಇರುವುದನ್ನು ನಾವೆಲ್ಲಾ ನೋಡುತ್ತಿದ್ದೇವೆ. ನಮ್ಮ ಕನ್ನಡಿಗರಲ್ಲಿ ಈ ಕುರಿತು ತಿಳುವಳಿಕೆ ಇಲ್ಲ, ಜೊತೆಗೆ ಬ್ಯಾಂಕ್ ಪರೀಕ್ಷೆಗಳು ಕಷ್ಟ ಎನ್ನುವ ತಪ್ಪು ಮನೋಭಾವ ಇದಕ್ಕೆ ಕಾರಣ ಎಂದರು.

ಇತ್ತೀಚೆಗೆ ಕರ್ನಾಟಕ ಸರ್ಕಾರ ಬ್ಯಾಂಕಿಂಗ್ ಪರೀಕ್ಷೆಗಳನ್ನು ಕನ್ನಡದಲ್ಲೂ ಬರೆಯಲು ಕೇಂದ್ರಕ್ಕೆ ಒತ್ತಡ ಹಾಕುತ್ತಿರುವುದು ಸ್ವಾಗತಾರ್ಹ. ವಿದ್ಯಾರ್ಥಿ ಜೀವನದಲ್ಲಿ ಹದಿನೈದು ವರ್ಷ ಓದಿದವರು ಕೇವಲ ಆರು ತಿಂಗಳು ಛಲಬಿಡದೆ, ಇಷ್ಟಪಟ್ಟು, ನಿರಂತರ ಅಧ್ಯಯನ ಮಾಡಿದರೆ ನಿಮ್ಮ ಜೀವನ ಕಟ್ಟಿಕೊಳ್ಳುವುದಲ್ಲದೆ ನಿಮ್ಮ ಮನೆಮಂದಿ ಮತ್ತು ನೆಂಟರ ಬದುಕನ್ನು ಕಟ್ಟಿಕೊಳ್ಳಲು ನೆರವಾಗಬಹುದು ಎಂದರು.

ಪೋಷಕರು ಮಕ್ಕಳಿಗೆ ಕಷ್ಟಗಳನ್ನು ತೋರಿಸಿ ಮತ್ತು ಹೇಳಿ ಬೆಳೆಸಿದರೆ ಮಾತ್ರ ಅವರ ಅಭಿವೃದ್ಧಿ ಸಾಧ್ಯ. ಆದರೆ ಇಂದಿನ ಪೋಷಕರು ಇದನ್ನು ಮಾಡುತ್ತಿಲ್ಲ ಹೀಗಾಗಿ ಯುವ ಸಮುದಾಯ ದಾರಿತಪ್ಪುತ್ತಿದೆ ಎಂದು ವಿಷಾದಿಸಿದರು. ಹುದ್ದೆಗಳು ಕಡಿಮೆ ಇದೆ ಅರ್ಜಿಗಳು ಹೆಚ್ಚಿವೆ ಎಂದು ಗಾಬರಿ ಪಡಬೇಡಿ. ಕೇವಲ ಒಂದು ಹುದ್ದೆಯಿದ್ದರೂ ಪ್ರಯತ್ನಪಡಬೇಕೆಂಬ ಛಲ ನಿಮ್ಮದಾಗಲಿ ಎಂದರು. ಕೂಡು, ಕಳೆ, ಗುಣಿಸು ಮತ್ತು ಭಾಗಿಸು ಇಷ್ಟೇ ಬ್ಯಾಂಕಿಂಗ್ ಪರೀಕ್ಷೆಗಳ ವಸ್ತುವಿಷಯ ಎಂದರು.

 

ಜ್ಞಾನಬುತ್ತಿ ಸಂಸ್ಥೆಯ ಸೇವೆ ಸ್ಮರಿಸಿದ ನಿವೃತ್ತಾ ಬ್ಯಾಂಕ್‌ ಅಧಿಕಾರಿ

ನಿರಂತರ ಸತತ ಪ್ರಯತ್ನ ಮಾಡುವ ಮೂಲಕ ಯಾವುದೇ ಪರೀಕ್ಷೆಗಳನ್ನು ಅತ್ಯಂತ ಧರ್ಯವಾಗಿ ಎದುರಿಸಿ ಸಫಲರಾಗಬಹುದು  ಎಂದು ಹೇಳಿದ ಕೆನರಾ ಬ್ಯಾಂಕ್ ನಿವೃತ್ತ ಅಧಿಕಾರಿ ಎಸ್. ರಾಧಾಕೃಷ್ಣ ಅವರು  ಜ್ಞಾನಬುತ್ತಿ ಸಂಸ್ಥೆಯೊಡನೆ 30 ವರ್ಷಗಳ ತಮ್ಮ ಬ್ಯಾಂಕಿಂಗ್ ಪರೀಕ್ಷೆಗಳ ತರಬೇತಿ ಒಡನಾಟವನ್ನು ಸ್ಮರಿಸಿಕೊಂಡರು.

ಹಿಂದೆ ಮಾಹಿತಿ ಕೊರತೆ ಇತ್ತು. ಆದರೆ, ಈಗ ಎಲ್ಲಾ ಸೌಲಭ್ಯಗಳು ಇರುವುದರಿಂದ ಶ್ರಮಪಟ್ಟು ಅಧ್ಯಯನ ಮಾಡಿ ಎಂದು ಕರೆಕೊಟ್ಟರು.

ಹಿರಿಯ ಸಹಕಾರಿ ವೈ.ಎನ್. ಶಂಕರೇಗೌಡ, ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣ ಗೌಡ, ಕಾರ್ಯದರ್ಶಿ ಹೆಚ್.ಬಾಲಕೃಷ್ಣ, ಪ್ರೊ. ಕೃ.ಪ. ಗಣೇಶ, ಕೆ.ವೈ.ನಾಗೇಂದ್ರ, ಸಂಪನ್ಮೂಲ ವ್ಯಕ್ತಿಗಳಾದ ಡಾ. ಹೊನ್ನಯ್ಯ, ರೋಹನ್ ರವಿಕುಮಾರ್, ಸಿ.ಕೆ. ಕಿರಣ್ ಕೌಶಿಕ್ ಸೇರಿದಂತೆ ಶಿಬಿರಾರ್ಥಿಗಳು ಇದ್ದರು.

Tags: