ಮೈಸೂರು: ಬುದ್ಧ, ಬಸವ, ಗಾಂಧಿ ಹಾಗೂ ಅಂಬೇಡ್ಕರ್ ಆಶಯಗಳಿಗೆ ಅನುಗುಣವಾಗಿ ಕರ್ನಾಟಕದ ಮೂಲ ಸೌಕರ್ಯ ಹಾಗೂ ಆರ್ಥಿಕ, ಸಾಮಾಜಿಕವಾಗಿ ಹಿನ್ನಡೆ ಅನುಭವಿಸುತ್ತಿರುವ ಕ್ಷೇತ್ರಗಳಿಗೆ ಪ್ರಾಮುಖ್ಯತೆ ನೀಡಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ 16ನೇ ಬಜೆಟ್ ಮಂಡಿಸಿದ್ದಾರೆ ಎಂದು ಮೈಸೂರು ಗ್ರಾಮಾಂತರ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಡಾ. ಬಿ.ಜೆ ಬಿಜಯ್ ಕುಮಾರ್ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ದೇಶದ ಇತಿಹಾಸದಲ್ಲಿ ಪ್ರಥಮವಾಗಿ ರಾಜ್ಯದ ದಲಿತ ಸಮಾಜ ಕಲ್ಯಾಣಕ್ಕಾಗಿ 42,000 ಕೋಟಿ, ಶಿಕ್ಷಣ ಕ್ಷೇತ್ರಕ್ಕೆ 45,286 ಕೋಟಿ, ಸಮಗ್ರ ಗ್ರಾಮೀಣ ಅಭಿವೃದ್ಧಿಗೆ 26,735 ಕೋಟಿ, ಕೃಷಿ ವಲಯದ ಮಹತ್ವದ ಉತ್ತೇಜನಕ್ಕೆ ರೂ.7,145 ಕೋಟಿ, ರಾಜ್ಯದ ನೀರಾವರಿ 22,181 ಕೋಟಿ, ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಉನ್ನತೀಕರಣಕ್ಕೆ 34, 955 ಕೋಟಿ ಸೇರಿದಂತೆ ಎಲ್ಲಾ ಕ್ಷೇತ್ರಗಳಿಗೂ ಪ್ರಾಮುಖ್ಯತೆ ನೀಡಿದ್ದಾರೆ.
ಗ್ಯಾರಂಟಿ ಯೋಜನೆಗಳ ಬಗ್ಗೆ ನಿರಂತರ ಟೀಕೆ ಮಾಡುತ್ತಿದ್ದ ರಾಜ್ಯದ ಹಾಗೂ ದೇಶದ ಬಿಜೆಪಿ ನಾಯಕರಿಗೆ ಈ ಬಜೆಟ್ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉತ್ತರ ನೀಡಿದ್ದಾರೆ ಎಂದರು.
ಹಾಗೆಯೇ, ತನ್ನ ತವರು ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಹಲವಾರು ನೂತನ ಯೋಜನೆಗಳನ್ನು ನೀಡುವ ಮೂಲಕ ತನ್ನ ತಾಯಿ ನೆಲದ ಋಣ ತೀರಿಸಿ ನಂಬಿಕಸ್ಥ ರಾಜಕಾರಣದ ರುಜುವಾತು ಸಾಕ್ಷಿಕರಿಸಿದ್ದಾರೆ ಎಂದರು.





