‘ ಗ್ರೇಸ್’ ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ
ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ ಮಕ್ಕಳಿಗಿಂತ ಬದುಕಿನುದ್ದಕ್ಕೂ ಮಗುವಿನ ಮುಗ್ಧತೆಯನ್ನು ಉಳಿಸಿಕೊಳ್ಳುವ ವಿಶೇಷ ಚೇತನ ಮಕ್ಕಳು ಸರ್ವ ಶ್ರೇಷ್ಠರು ಎಂದು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್ ಅಭಿಪ್ರಾಯಪಟ್ಟರು.
ಮೈಸೂರಿನ ವಿಶೇಷ ಚೇತನ ಮಕ್ಕಳ ಮುಕ್ತ ಶಾಲೆ ಮತ್ತು ತರಬೇತಿ ಕೇಂದ್ರ ‘ ಗ್ರೇಸ್’ ವತಿಯಿಂದ ನಗರದ ಹೊರಹೊಲಯದ ಗೋಲ್ಡನ್ ರೆಸಾರ್ಟ್ನಲ್ಲಿ ಇಂದು ಆಯೋಜಿಸಿದ್ದ ಪೋಷಕರ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ಪೋಷಕರು ತಮ್ಮ ಮಕ್ಕಳ ಇಂದಿನ ಸ್ಥಿತಿಗೆ ಮರುಕ ಪಡೆದೆ ಗರ್ವ ಪಡಬೇಕೆಂದು ತಿಳಿಸಿದರು.
ಅನೇಕ ಬಾರಿ ಮಾನಸಿಕ ಮತ್ತು ದೈಹಿಕ ಸಾಮರ್ಥ್ಯವಿರುವವರು ದೇಶಕ್ಕೆ, ಸಮಾಜಕ್ಕೆ ಮತ್ತು ಕುಟುಂಬಕ್ಕೆ ಮಾರಕವಾಗಿರುವುದನ್ನು ಕಂಡಿದ್ದೇವೆ. ಆದರೆ, ವಿಶೇಷ ಚೇತನರು ಸಮಾಜಕ್ಕೆ ಕೆಡಕನ್ನು ಬಯಸಿದ್ದಿಲ್ಲ. ಪೋಷಕರನ್ನು ವೃದ್ಧಾಶ್ರಮಕ್ಕೆ ಕಳುಹಿಸಿದ ಉದಾಹರಣೆ ಇಲ್ಲ. ಆಸ್ತಿ ಹಣಕ್ಕಾಗಿ ಹೆತ್ತವರ ಉಸಿರು ತೆಗೆದಿಲ್ಲ. ಹೆತ್ತವರಿಗೆ ಕೆಟ್ಟ ಹೆಸರು ತಂದಿಲ್ಲ. ಆದ್ದರಿಂದ ಈ ಮಕ್ಕಳು ಸಮಾಜಕ್ಕೆ ವರದಾನವೇ ವಿನಃ ಶಾಪವಲ್ಲ ಎಂದು ಹೇಳಿದರು.
ಸಮಾಜದಲ್ಲಿ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ದುಃಖಿತರೇ. ಆದರೆ, ಒಬ್ಬರಿಗಿಂತ ಒಬ್ಬರ ದುಃಖದಲ್ಲಿ ಭಿನ್ನತೆ ಇರುತ್ತದೆ. ಆದ್ದರಿಂದ ತಾವು ಇರುವುದಲ್ಲೇ ಸಂತೋಷ ಕಂಡುಕೊಳ್ಳಬೇಕು ಎಂದರು.
ಮೈಸೂರು ಡಯೋಸೆಶನ್ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿ ರೆ. ಫಾ. ಎಡ್ವರ್ಡ್ ವಿಲಿಯಂ ಸಲ್ಡಾನಾ ಅವರು ಮಾತನಾಡಿ, ಬದುಕಿನಲ್ಲಿ ಸಂತೋಷವನ್ನು ಹುಡುಕುವುದಲ್ಲ. ಅದು ನಮ್ಮೊಳಗೇ ಇರುತ್ತದೆ. ಶಾಂತಿ ಮತ್ತು ಪ್ರೀತಿ ಎರಡನ್ನೂ ಅನುಸರಿಸಿದರೆ ನಮ್ಮೊಳಗೆ ಸಂತೋಷ ನೆರೆಸುತ್ತದೆ ಎಂದು ತಿಳಿಸಿದರು.
ಮೈಸೂರು ವಿವಿಯ ಕ್ರಿಶ್ಚಿಯಾನಿಟಿ ವಿಭಾಗದ ಮುಖ್ಯಸ್ಥರಾಗದ ರೆ. ಫಾ. ವೆಲಿಂಡಿನ್ ರಾಜೇಂದ್ರ ಕುಮಾರ್ ಅವರು ಕ್ರಿಸ್ ಮಸ್ ಸಂದೇಶ ತಿಳಿಸಿದರು.
ನಂತರ ವಿವಿಧ ವಯೋಮಿತಿಯ ವಿಶೇಷ ಚೇತನ ಮಕ್ಕಳಿಂದ ಮನಕಲಕುವ ನೃತ್ಯ ರೂಪಕಗಳು ಪ್ರದರ್ಶನಗೊಂಡಿತು. ಗ್ರೇಸ್ ಮುಕ್ತ ಶಾಲೆಯ ಪ್ರಾಂಶುಪಲರಾದ ಸ್ವಪ್ನ ಜೋಸೆಫ್, ಟ್ರಸ್ಟಿ ಶಿಬು ಜೋಸೆಫ್ ಹಾಜರಿದ್ದರು.