Mysore
20
clear sky

Social Media

ಗುರುವಾರ, 12 ಫೆಬ್ರವರಿ 2026
Light
Dark

ಲಿಂಗಾಯಿತರಿಂದಲೇ ವಚನ ವಿರೋಧಿ ಕೆಲಸಕ್ಕೆ ಆರ್‌ಎಸ್‌ಎಸ್‌ ಸಂಚು: ಡಾ.ಶಿವಾನಂದ ಜಾಮದಾರ

ಮೈಸೂರು: ಲಿಂಗಾಯತ ಧರ್ಮದ ವಿರುದ್ಧ ಲಿಂಗಾಯತರನ್ನೇ ಎತ್ತಿಕಟ್ಟುವ, ಲಿಂಗಾಯತರಿಂದಲೇ ವಚನ ವಿರೋಧಿ ಕೃತಿಗಳನ್ನು ರಚಿಸುವ ಕೆಲಸಕ್ಕೆ ಆರ್‌ಎಸ್‌ಎಸ್ ಮುಂದಾಗಿದೆ ಎಂದು ಜಾಗತಿಕ ಲಿಂಗಾಯಿತ ಮಹಾಸಭಾದ ಮಹಾಪ್ರಧಾನ ಕಾರ್ಯದರ್ಶಿ ಡಾ.ಶಿವಾನಂದ ಜಾಮದಾರ ಆರೋಪಿಸಿದರು.

ಜಾಗತಿಕ ಲಿಂಗಾಯಿತ ಮಹಾಸಭಾ, ಅಖಿಲ ಭಾರತ ವೀರಶೈವ-ಲಿಂಗಾಯಿತ ಮಹಾಸಭಾ, ಮೈಸೂರು ನಗರ ಹಾಗೂ ಜಿಲ್ಲೆ ಲಿಂಗಾಯಿತ ಸಾಂಸ್ಕೃತಿಕ ಸಮಿತಿ, ರಾಷ್ಟ್ರೀಯ ಬಸವ ದಳ, ಬಸವ ಕೇಂದ್ರ, ಶರಣ ಸಾಹಿತ್ಯ ಪರಿಷತ್ತಿನ ನಗರ ಘಟಕ ಇವುಗಳ ಸಹಯೋಗದಲ್ಲಿ ಹೊಸಮಠದ ಆವರಣದಲಿರುವ ನಟರಾಜ ಸಭಾ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬಸವಣ್ಣ ಮತ್ತು ಶರಣರ ವಚನಗಳನ್ನು ವಿರೋಧಿಸಿ ಪುಸ್ತಕ, ಸಿನಿಮಾ ಸೇರಿದಂತೆ ಪ್ರಬಂಧ ಸ್ಪರ್ಧೆಗಳನ್ನು ಆರ್‌ಎಸ್‌ಎಸ್ ಏರ್ಪಡಿಸುತ್ತಿದೆ. ಇವರ ಸುಳ್ಳಿನ ಕಂತೆಗಳನ್ನು ನಾವು ಬಯಲಿಗೆಳೆಯುತ್ತೇವೆ. ಶರಣರ ಕುರಿತಾದ ಸತ್ಯ ದರ್ಶನದ ಆರಂಭದ ಭಾಗವೇ ‘ವಚನ ದರ್ಶನ ಮಿಥ್ಯ ಮತ್ತು ಸತ್ಯ’ ಕೃತಿಯಾಗಿದೆ ಎಂದರು.

ದೇಶದ ಎಲ್ಲಾ ಜನರು ತಮಗೆ ಇಷ್ಟವಾದ ಧರ್ಮ ಅನುಸರಿಸುವ ಸ್ವಾತಂತ್ರ್ಯವನ್ನು ಸಂವಿಧಾನ ನೀಡಿದೆ. ಸಂವಿಧಾನದ ಅನುಸಾರವಾಗಿಯೇ ನಾವು ಲಿಂಗಾಯತ ಧರ್ಮವನ್ನು ಉಳಿಸಿಕೊಳ್ಳಲು ಹೋರಾಡುತ್ತಿದ್ದೇವೆ ಎಂದು ತಿಳಿಸಿದರು.

ಬಸವ ಧರ್ಮದ ವಿರುದ್ಧ ಸನಾತನಿಗಳು ಯುದ್ಧ ಸಾರಿದ್ದಾರೆ. ಬಸವಣ್ಣ ಯಾವುದೇ ಧರ್ಮವನ್ನು ಸ್ಥಾಪಿಸಲಿಲ್ಲ, ಬಸವಣ್ಣ ಹಿಂದೂ ಧರ್ಮದ ಸುಧಾರಕ ಮತ್ತು ಪ್ರಚಾರಕರಾಗಿದ್ದರು. ವಚನಗಳು ಉಪನಿಷತ್‌ ಹಾಗೂ ವೇದಾಗಮಗಳ ಭಾಷಾಂತರಗಳಾಗಿವೆ ಎಂದು ಅಪಪ್ರಚಾರ ಮಾಡುತ್ತಾರೆ. ಆಧಾರವೇ ಅಲ್ಲದ ಕಟ್ಟಕಥೆಗಳು, ಸುಳ್ಳುಗಳನ್ನು ಸನಾತನಿಗಳು ಬಿತ್ತರಿಸುತ್ತಿದ್ದಾರೆ ಎಂದು ಅವರು ವಿಷಾದಿಸಿದರು.

ಸಾಹಿತಿ ಡಾ.ಟಿ.ಆರ್.ಚಂದ್ರಶೇಖರ್ ಮಾತನಾಡಿ, ಚಾತುರ್ವರ್ಣ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಯಾವುದೇ ಸ್ಥಾನವಾನವಿಲ್ಲ. ಲಿಂಗ ಅಸಮಾನತೆಯ ಪರಮೋಚ್ಛ ಸಿದ್ಧಾಂತ ಚಾತುರ್ವರ್ಣ ಸಿದ್ಧಾಂತವಾಗಿದೆ. ಅಕ್ಕ ಮಹಾದೇವಿ ಸೇರಿದಂತೆ ಅನೇಕ ಮಹಿಳಾ ಶರಣೆಯರು ವಚನಗಳನ್ನು ರಚಿಸುತ್ತಾರೆ. ಆದರೆ ಚಾತುರ್ವರ್ಣ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಓದುವುದಕ್ಕೆ ಮತ್ತು ಬರೆಯುವುದಕ್ಕೆ ಅವಕಾಶ ಇರಲಿಲ್ಲ ಎಂದು ತಿಳಿಸಿದರು.

ಅಲ್ಲಮಪ್ರಭು ಶೂನ್ಯಪೀಠದ ಶ್ರೀ ಗೌರಿಶಂಕರ ಸ್ವಾಮೀಜಿ, ಅಖಿಲ ಭಾರತ ವೀರಶೈವ-ಲಿಂಗಾಯಿತ ಮಹಾಸಭಾದ ರಾಷ್ಟ್ರೀಯ ಕಾರ್ಯದರ್ಶಿ ಎಚ್.ಎಂ.ರೇಣುಕಾ ಪ್ರಸನ್ನ, ವೀರಶೈವ-ಲಿಂಗಾಯಿತ ಮಹಾಸಭಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಶಿವಕುಮಾರ್ ದೂರ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Tags:
error: Content is protected !!