Mysore
23
broken clouds
Light
Dark

ನವೀಕರಿಸಿದ ಸರ್ಕಾರಿ ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಉದ್ಘಾಟಿಸಿದ ಶಾಸಕ ಕೆ. ಹರೀಶ್ ಗೌಡ

2 ಕೋಟಿ ರೂ. ವೆಚ್ಚದಲ್ಲಿ ನವೀಕರಿಸಿದ ಕಟ್ಟಡ

ಮೈಸೂರು: ನಗರದ ಕೆಜಿ ಕೊಪ್ಪಲಿನಲ್ಲಿ ಆಯುಷ್ ಇಲಾಖೆ ವತಿಯಿಂದ 2 ಕೋಟಿ ರೂ. ವೆಚ್ಚದಲ್ಲಿ ನವೀಕರಿಸಲಾದ ಸರ್ಕಾರಿ ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಕಟ್ಟಡವನ್ನು ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕ ಕೆ. ಹರೀಶ್ ಗೌಡ ಶುಕ್ರವಾರ ಉದ್ಘಾಟನೆ ಮಾಡಿದರು.

ಬಳಿಕ ಮಾತನಾಡಿದ ಅವರು, ಸಾವಿರಾರು ವರ್ಷಗಳ ಇತಿಹಾಸ ನಮ್ಮ ಆಯುರ್ವೇದ ಚಿಕಿತ್ಸೆಗೆ ಇದೆ. ಈಗ ಆಧುನಿಕತೆಯ ಚಿಕಿತ್ಸೆಯ ಜತೆಗೆ ಪ್ರಾಕೃತಿಕ ಚಿಕಿತ್ಸೆಗೂ ಜನತೆ  ಮೊರೆ ಹೋಗುತ್ತಿದ್ದಾರೆ. ಇದಕ್ಕೆ ನಿತ್ಯ ಸೈಕಲಿಂಗ್ ಹಾಗೂ ಚಾಮುಂಡಿ ಬೆಟ್ಟ ಹತ್ತುವುದು, ಯೋಗ ಅಭ್ಯಾಸ ಮಾಡುವವರ ಸಂಖ್ಯೆ ಹೆಚ್ಚಾಗಿರುವುದೇ ಉದಾಹರಣೆಯಾಗಿದೆ. 2 ಕೋಟಿ ರೂ.ವೆಚ್ಚದಲ್ಲಿ ಆಸ್ಪತ್ರೆ ನವೀಕರಿಸಿ ಲೋಕಾರ್ಪಣೆ ಗೊಳಿಸಲಾಗಿದೆ. ಜನತೆ ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಯೋಗ, ನೇಚರ್ ಪಿಯೋಥೆರಪಿ, ಪಿಜಿಯೋಥೆರಪಿ ಸೇರಿ 10 ಬಗೆಯ ಚಿಕಿತ್ಸೆಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ತಲೆನೋವು, ಮಂಡಿನೋವು ಸೇರಿ ಎಲ್ಲಾ ಬಗೆಯ ಕಾಯಿಲೆಗಳಿಗೂ ಇಲ್ಲಿ ಚಿಕಿತ್ಸಾ ಸೇವೆ ನೀಡಲಿದೆ. ಇಬ್ಬರೂ ವೈದ್ಯರು, ಇಬ್ಬರೂ ಥೆರೋಪಿಯಸ್ಟ್ ಸೇರಿ ಅನೇಕರು ಸೇವೆಗಿದ್ದು, ಪ್ರತಿದಿನ ಬೆಳಿಗ್ಗೆ 9.30 ರಿಂದ ಸಂಜೆ 5.00 ರವರೆಗೆ ತೆರೆದಿರುತ್ತದೆ ಎಂದು ಹೇಳಿದರು.

ಈ ಸರ್ಕಾರಿ ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯಲ್ಲಿ ಮುಂದಿನ ದಿನಗಳಲ್ಲಿ ಮಧುಮೇಹಿಗಳಿಗಾಗಿಯೇ ಮೈಸೂರಿನಲ್ಲಿ ಪ್ರಥಮವಾಗಿ ಮಧುಮೇಹಿ ಘಟಕವನ್ನು ಸ್ಥಾಪಿಸಲಾಗುವುದೆಂದು ಜಿಲ್ಲಾ ಆಯುಷ್ ಅಧಿಕಾರಿಯಾದ ಡಾ.ಪುಷ್ಪ ರವರು ತಿಳಿಸಿದರು.

ಈ ವೇಳೆ ಮುಡಾ ಅಧ್ಯಕ್ಷ ಮರೀಗೌಡ, ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್,  ಆಸ್ಪತ್ರೆಯ ವೈದ್ಯಾಧಿಕಾರಿಗಳು, ಸಿಬ್ಬಂದಿಗಳು ಹಾಗೂ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಾದ  ರವಿ, ಶ್ರೀನಿವಾಸ, ಕಾಂಗ್ರೆಸ್ ಮುಖಂಡರು ಸೇರಿ ಹಲವರು ಭಾಗಿಯಾಗಿದ್ದರು.