Mysore
23
broken clouds
Light
Dark

ಇಂದು ಮತ್ತು ನಾಳೆ ಚಾಮುಂಡಿಬೆಟ್ಟಕ್ಕೆ ಖಾಸಗಿ ವಾಹನ ಪ್ರವೇಶ ನಿಷೇಧ

ಮೈಸೂರು : ಇಂದು ಮತ್ತು ನಾಳೆ  ಕೂಡ ಚಾಮುಂಡಿಬೆಟ್ಟಕ್ಕೆ ಸಾರ್ವಜನಿಕ ವಾಹನಗಳ ಪ್ರವೇಶಕ್ಕೆ ನಿರ್ಬಂಧಿಸಲಾಗಿದೆ.

ನಿನ್ನೆ ಮೊದಲ ಆಷಾಢ ಶುಕ್ರವಾರದ ಪ್ರಯುಕ್ತ ಬೆಟ್ಟಕ್ಕೆ ಸಾವಿರಾರು ಭಕ್ತರು ಆಗಮಿಸುವ ಕಾರಣ ಯಾವುದೇ ರೀತಿ ಪಾರ್ಕಿಂಗ್‌ ಸಮಸ್ಯೆ, ಟ್ರಾಫಿಕ್‌ ಸಮಸ್ಯೆ, ಹಾಗೂ ಭಕ್ತರಿಗೆ ಯಾವುದೇ ತೊಂದರೆ ಆಗಬಾರದು ಎನ್ನುವ ದೃಷ್ಠಿಯಿಂದ ಚಾಮುಂಡಿಬೆಟ್ಟಕ್ಕೆ ಖಾಸಗಿ ವಾಹನಗಳನ್ನ ನಿಷೇಧಿಸಲಾಗಿತ್ತು. ಅಲ್ಲದೆ ಉಚಿತ ಬಸ್‌ ಗಳ ಮೂಲಕವೇ ಲಲಿತ‌ ಮಹಲ್‌ ಪಾರ್ಕಿಂಗ್‌ ನಿಂದ ಭಕ್ತರನ್ನ ಚಾಮುಂಡಿಬೆಟ್ಟಕ್ಕೆ ಕರೆದುಕೊಂಡು ಹೋಗಲಾಗಿತ್ತು.

ಇನ್ನು ವೀಕೆಂಡ್‌ ಇರುವ ಕಾರಣ ಇಂದು ಮತ್ತು ನಾಳೆ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಚಾಮುಂಡಿಬೆಟ್ಟಕ್ಕೆ ಭೇಟಿ ಕೊಡುತ್ತಾರೆ. ಹೀಗಾಗಿ ಇಂದು ಮತ್ತು ನಾಳೆ ಖಾಸಗಿ ವಾಹನಗಳ ಪ್ರವೇಶಕ್ಕೆ ನಿರ್ಬಂಧವಿಧಿಸಲಾಗಿದೆ.

ನಿನ್ನೆ ಮೊದಲ ಅಷಾಢ ಶುಕ್ರವಾರ ಪ್ರಯುಕ್ತ ಎಲ್ಲಾ ಭಕ್ತರಿಗೂ ಉಚಿತವಾಗಿ ಬಸ್‌ ನಲ್ಲಿ ಪ್ರಯಾಣಿಸಲು ಅವಕಾಶ ನೀಡಲಾಗಿತ್ತು. ಆದರೆ ಇಂದು ಯಾವುದೇ ರೀತಿ ಉಚಿತ ಬಸ್‌ ವ್ಯವಸ್ಥೆ ಇಲ್ಲ. ಬದಲಾಗಿ ಬಸ್‌ ನಲ್ಲಿ ಟಿಕೆಟ್‌ ಪಡೆದು ಪ್ರಯಾಣಿಸಬೇಕು.

ಸಾರ್ವಜನಿಕರು ತಮ್ಮ ವಾಹನವನ್ನು ಲಲಿತಮಹಲ್‌ ಪಾರ್ಕಿಂಗ್‌ ನಲ್ಲೆ ನಿಲ್ಲಿಸಿ ಕೆ.ಎಸ್.ಆರ್‌.ಟಿ.ಸಿ ವಾಹನಗಳ ಮೂಲಕ ಹಣ ಪಾವತಿ ಮಾಡಿ ಟಿಕೆಟ್‌ ಪಡೆದು ಬೆಟ್ಟಕ್ಕೆ ಹೋಗಬೇಕು. ಮಹಿಳೆಯರಿಗೆ ಶಕ್ತಿಯೋಜನೆ ಅನ್ವಹಿಸುತ್ತದೆ.

ಇನ್ನು ಚಾಮುಂಡಿಬೆಟ್ಟದ ಗ್ರಾಮಸ್ಥರು ಈ ಸಮಯದಲ್ಲಿ ಚಾಮುಂಡಿಬೆಟ್ಟದ ಗ್ರಾಮದಲ್ಲಿ ವಿಳಾಸವಿರುವ ಆಧಾರ್‌ ಕಾರ್ಡ್‌ ಅನ್ನು ಹಾಜರು ಪಡಿಸಿ ಅಥವಾ ಪರಿಶೀಲನೆಗೆ ಒಳಪಡಿಸಿ ಪ್ರವೇಶವನ್ನು ಪಡೆಯಬಹುದು.