ಮೈಸೂರು: ರಾಜ್ಯದ ಜನರಿಗೆ ಪ್ರತಿನಿತ್ಯ ಟೋಪಿ ಹಾಕುವ ವ್ಯಕ್ತಿಗೆ ಪ್ರಧಾನಿ ನರೇಂದ್ರ ಮೋದಿ ಸಾಧನೆ ಅಳೆಯುವ ಅರ್ಹತೆ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಜಿ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ.
ಪ್ರಧಾನಿಯಾಗಿ ನರೇಂದ್ರ ಮೋದಿ 11 ವರ್ಷ ಆಡಳಿತ ಪೂರೈಸಿದ್ದು, ಮೋದಿ ಆಡಳಿತ ಶೂನ್ಯ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ ಕುರಿತು ಮಾತನಾಡಿದ ಮಾಜಿ ಸಂಸದ ಪ್ರತಾಪ್ ಸಿಂಹ ಅವರು, 2 ವರ್ಷದಿಂದ ರಾಜ್ಯದಲ್ಲಿ ಸಿಎಂ ಆಗಿದ್ದೀರಿ, ನಿಮ್ಮ ಸಾಧನೆ ಏನು? ರಾಜ್ಯದ ಜನರ ಮೇಲೆ ಸಾಲ ಏರಿರುವುದು ನಿಮ್ಮ ಸಾಧನೆ. ಕೊಲೆ ಸುಲಿಗೆ ಜಾಸ್ತಿಯಾಗಿದೆ. ಯುವನಿಧಿ ಕೊಡ್ತೀವಿ ಎಂದು ಯುವಕರಿಗೆ ಟೋಪಿ ಹಾಕಿದ್ದೀರಿ. ಅನ್ನಭಾಗ್ಯ, ಗೃಹಲಕ್ಷ್ಮೀ ಕೊಡ್ತೀವಿ ಎಂದು ಟೋಪಿ ಹಾಕಿದ್ರಿ, ಇದೇ ನಿಮ್ಮ ಸಾಧನೆನಾ.? ಜನರಿಗೆ ಪ್ರತಿನಿತ್ಯ ಟೋಪಿ ಹಾಕುವ ವ್ಯಕ್ತಿಗೆ ಪ್ರಧಾನಿ ನರೇಂದ್ರ ಮೋದಿ ಸಾಧನೆ ಅಳೆಯುವ ಅರ್ಹತೆ ಇಲ್ಲ ಎಂದು ಸಿಎಂಗೆ ತಿರುಗೇಟು ನೀಡಿದರು.
ಇನ್ನು ಮುಂದುವರಿದು ಮಾತನಾಡಿದ ಅವರು, ಬೆಂಗಳೂರು-ಮೈಸೂರು ಹೈವೇ ಮಾಡಿದ್ದು ಮೋದಿ. ರಿಂಗ್ ರೋಡ್ ಎನ್ಎಚ್ ಮೇಲ್ದರ್ಜೆಗೆ ಏರಿಸಿದ್ದು ಮೋದಿ. ಮೈಸೂರು ಏರ್ಪೋರ್ಟ್ಗೆ ವಿಮಾನ ಬರಲು ಕಾರಣ ಮೋದಿ. ಪಾಸ್ಪೋರ್ಟ್ ಸೇವೆ ಕೇಂದ್ರಕ್ಕೆ ಕಾರಣ ಮೋದಿ. ಹಳೇ ಡಿಸಿ ಆಫೀಸ್ ಮ್ಯೂಸಿಯಂ ಮಾಡಲು ಹಣ ಕೊಟ್ಟಿರೋದು ಮೋದಿ. ಚಾಮುಂಡಿಬೆಟ್ಟದ ಅಭಿವೃದ್ಧಿಗೆ 45 ಕೋಟಿ ಹಣ ಕೊಟ್ಟಿದ್ದು ಮೋದಿ. ನೀವು ಮದುವೆ, ಮುಂಜಿ ಎಂದು ಓಡಾಡಿಕೊಂಡು ಇದ್ದೀರಲ್ಲ, ಆ ರೀತಿ ಪ್ರಧಾನಿ ಮೋದಿ ಮಾಡಿಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.





