Mysore
22
broken clouds

Social Media

ಭಾನುವಾರ, 22 ಫೆಬ್ರವರಿ 2026
Light
Dark

ಉತ್ತರ ಭಾರತೀಯರು ಗತಿಯಿಲ್ಲದೇ ಕರ್ನಾಟಕಕ್ಕೆ ಬರುತ್ತಾರೆ: ಮಾಜಿ ಸಂಸದ ಪ್ರತಾಪ್‌ ಸಿಂಹ

ಮೈಸೂರು: ಬೆಂಗಳೂರಿನಲ್ಲಿ ಟೆಕ್ಕಿ ಮೇಲೆ ಹಲ್ಲೆ ನಡೆಸಿದ್ದ ವಿಂಗ್ ಕಮಾಂಡರ್ ವಿರುದ್ಧ ಮಾಜಿ ಸಂಸದ ಪ್ರತಾಪ್‌ ಸಿಂಹ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಉತ್ತರ ಭಾರತೀಯರ ಬಗ್ಗೆ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಮೈಸೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗತಿ ಇಲ್ಲದೆ ಜೀವನ ನಡೆಸೋದಕ್ಕೆ ಇಲ್ಲಿಗೆ ಬರುವ ನೀವೂ ಕನ್ನಡ ಕಲಿಯಲ್ಲ ಅಂದ್ರೆ ಹೇಗೆ ಎಂದು ಪ್ರಶ್ನಿಸಿದರು.

‘ಆಕಸ್ಮಿಕ ಅಪಘಾತಕ್ಕೆ ಬೇರೆಯದೆ ಬಣ್ಣ ಕಟ್ಟಿದ್ದಾರೆ. ಇದನ್ನೆ ಸತ್ಯ ಎಂದು ನಂಬಿ ರಾಷ್ಟ್ರೀಯ ಮಾಧ್ಯಮಗಳು ಇದನ್ನು ವೈಭವೀಕರಿಸುವ ಕೆಲಸ ಮಾಡಿದರು. ಈ ಪ್ರಕರಣದಲ್ಲಿ ಕನ್ನಡಿಗರನ್ನು ನಕಾರಾತ್ಮಕವಾಗಿ ಚಿತ್ರಿಸುವ ಕೆಲಸ ಆಗುತ್ತಿದೆ. ಕನ್ನಡಿಗರು ಯಾರ ಮೇಲೂ ದಬ್ಬಾಳಿಕೆ ಮಾಡುವ ಜನ ಅಲ್ಲ. ಕನ್ನಡ ಮಾತಾಡಿ ಎಂದು ಹೇಳಿದ್ದರು ಅದರಲ್ಲಿ ತಪ್ಪೇನಿದೆ.? ಎಂದು ಪ್ರಶ್ನೆ ಮಾಡಿದರು.

ಇನ್ನು ಉತ್ತರ ಭಾರತದಲ್ಲಿ ಒಳ್ಳೆಯ ಇಂಜಿನಿಯರಿಂಗ್ ಕಾಲೇಜು ಇಲ್ಲ, ಮೆಡಿಕಲ್ ಕಾಲೇಜೂ ಇಲ್ಲ. ಹೀಗಾಗಿ ಗತಿ ಇಲ್ಲದೆ ಕರ್ನಾಟಕಕ್ಕೆ ಬರುತ್ತಾರೆ. ಇಲ್ಲೇ ವಾಸವಿದ್ದ ಮೇಲೆ ಕನ್ನಡ ಕಲಿಯೋದು ನಿಮ್ಮ ಕರ್ತವ್ಯ. ಹತ್ತಾರು ವರ್ಷಗಳಿಂದ ಇದ್ದ ಮೇಲೆ ಕನ್ನಡ ಕಲಿಯಬೇಕು ಅಲ್ವಾ? ನೀವು ಇಲ್ಲೆ ಇರಿ ಎಂದು ನಾವೇನೂ ನಿಮ್ಮ ಕೈ ಕಾಲು ಕಟ್ಟಿಲ್ಲ. ಉತ್ತರ ಭಾರತದಲ್ಲಿ ಒಳ್ಳೆಯ ಕಂಪನಿ ಇಲ್ಲ ಎಂದು ಕರ್ನಾಟಕಕ್ಕೆ ಬಂದಿದ್ದಿರಿ. ನಾವೇನೂ ನಿಮ್ಮನ್ನು ಕರೆದಿಲ್ಲ ಅದು ನೆನಪಿರಲಿ ಎಂದು ಕಿಡಿಕಾರಿದರು.

ಮುಂದುವರಿದು ಮಾತನಾಡಿದ ಅವರು, ನಿಮಗೆ ಇಲ್ಲಿ ಜೀವನ ಬೇಕು, ಆದರೆ ನಮ್ಮ ಭಾಷೆ ಬೇಡ ಅಂದರೆ ಹೇಗೆ. ಇಲ್ಲಿಯ ಭಾಷೆ ಬೇಡ ಅಂದ ಮೇಲೆ ನಿಮ್ಮ ಊರಲ್ಲೆ ಇರಿ. ಭಾಷೆ ಬಗ್ಗೆ ತಾತ್ಸಾರ ಮಾಡಕೂಡದು. ಉತ್ತರ ಭಾರತೀಯರು ಈ ರೀತಿ ಮನೋಭಾವವನ್ನು ಮೊದಲೇ ಬಿಡಬೇಕು ಎಂದರು.

ಇನ್ನು ಹಲ್ಲೆ ಮಾಡಿರುವ ವಿಂಗ್​ ಕಮಾಂಡರ್​ನನ್ನು ಕೂಡಲೇ ಬಂಧಿಸಬೇಕು. ಆತನಿಂದ ಕನ್ನಡಿಗರ ಬಳಿ ಕ್ಷಮೆ ಕೇಳಿಸಬೇಕು. ಹಲ್ಲೆ ನಡೆಸಿದ ಅಧಿಕಾರಿಯನ್ನು ಕೆಲಸದಿಂದ ವಜಾ ಮಾಡಬೇಕು. ಉತ್ತರ ಭಾರತೀಯರು ಯಾಕೆ ಚೆನ್ನೈನಲ್ಲಿ ಬಾಲ ಬಿಚ್ಚಲ್ಲ. ಉತ್ತರ ಭಾರತೀಯರು, ಮಲೆಯಾಳಿಗಳು ಅವರ ಊರಿನಲ್ಲಿ ಗತಿ ಇಲ್ಲದೆ ಇಲ್ಲಿಗೆ ಬಂದಿದ್ದಾರೆ. ತಿನ್ನೋಕು ಅವರಿಗೆ ಅವರ ಊರಿನಲ್ಲಿ ಗತಿ ಇಲ್ಲ. ಅದು ನೆನಪಿರಲಿ. ಒಂದು ವೇಳೆ ಕನ್ನಡಿಗರು ತಿರುಗಿ ನಿಂತರೆ ಯಾವ ಅನ್ಯ ಭಾಷಿಕರಿಗೂ ಇಲ್ಲಿ ಉಳಿಗಾಲ ಇರಲ್ಲ. ಅತಿಯಾಗಿ ಕನ್ನಡಿಗರ ತಾಳ್ಮೆ ಪರೀಕ್ಷೆ ಮಾಡಬೇಡಿ. 1992ರಲ್ಲಿ ಕನ್ನಡಿಗರು ತಮಿಳರ ಮೇಲೆ ತಿರುಗಿಬಿದ್ದಾಗ ಏನಾಯ್ತು ನೆನಪು ಮಾಡಿಕೊಳ್ಳಿ. ಸ್ವಲ್ಪ ಹುಷಾರಾಗಿರಿ ಎಂದು ಹೇಳಿದರು.

Tags:
error: Content is protected !!