ಮೈಸೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಬಹುಕೋಟಿ ಹಗರಣ ಖಂಡಿಸಿ ಇಂದು ಮೈಸೂರಿನಲ್ಲಿ ಬಿಜೆಪಿ ಪಕ್ಷದಿಂದ ಬೃಹತ್ ಪ್ರತಿಭಟನೆ ನಡೆಸಲಾಗುತ್ತಿದೆ. ಇದಕ್ಕೆ ವಿರೋಧವನ್ನು ವ್ಯಕ್ತಪಡಿಸಿ ಕಾಂಗ್ರೆಸ್ ಪಕ್ಷ ಸಹ ಧರಣಿ ನಡೆಸುತ್ತಿದೆ. ಹೀಗಾಗಿ ಮುಡಾ ಕಚೇರಿಯ ಮುಂಭಾಗ ಹಾಗೂ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ಮುಡಾ ಕಚೇರಿಯ ಸುತ್ತ ಬ್ಯಾರಿಕೇಡ್ ಅಳವಡಿಕೆ ಮಾಡಲಾಗಿದ್ದು, ಸುತ್ತಮುತ್ತಲಿನ ರಸ್ತೆಯನ್ನ ಕಂಪ್ಲೀಟ್ ಬಂದ್ ಮಾಡಲಾಗಿದೆ. ೧೦ KSRP ತುಕಡಿ ಸೇರಿ ೫೦೦ ಕ್ಕೂ ಹೆಚ್ಚು ಪೊಲೀಸರನ್ನ ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ.
ಮುಡಾ ಹಗರಣದ ತನಿಖೆಯನ್ನು ಸಿಬಿಐಗೆ ನೀಡಬೇಕು ಎಂದು ಒತ್ತಾಯಿಸಿ ಬಿಜೆಪಿಯಿಂದ ಮುಡಾ ಮುತ್ತಿಗೆ ಕಾರ್ಯಕ್ರಮ ಹಾಕಿಕೊಂಡಿದೆ. ಅಲ್ಲದೆ ಮಹಾರಾಜ ಕಾಲೇಜು ಮೈದಾನದಿಂದ ಮುಡಾ ಬಳಿ ಪ್ರತಿಭಟನೆಗೆ ಬಿಜೆಪಿ ತೆರಳಲಿದ್ದು, ಮೈದಾನದಲ್ಲೆ ಪ್ರತಿಭಟನಾಕಾರರನ್ನ ತಡೆಯಲು ಪೊಲೀಸರು ಸಹ ಪ್ಲಾನ್ ಮಾಡಿಕೊಂಡಿದ್ದಾರೆ.
ಇನ್ನು ಮತ್ತೊಂದು ಕಡೆ ಮುಡಾ ಕಚೇರಿ ಪಕ್ಕದಲ್ಲೆ ಧರಣಿಗೆ ಕಾಂಗ್ರೆಸ್ ಸಿದ್ಧತೆ ಮಾಡಿಕೊಂಡಿದ್ದು, ಬಿಜೆಪಿ ಪ್ರತಿಭಟನೆ ಖಂಡಿಸಿ ಸರ್ಕಾರದ ಪರ ಪ್ರತಿಭಟನೆ ನಡೆಸಲು ರೆಡಿಯಾಗುತ್ತಿದೆ.