ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಉದ್ಘಾಟಕರಾಗಿ ಲೇಖಕಿ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿರುವ ರಾಜ್ಯ ಸರ್ಕಾರದ ನಿಲುವನ್ನು ಖಂಡಿಸಿ ಹಿಂದೂ ಜಾಗರಣ ವೇದಿಕೆ ವತಿಯಿಂದ ಚಾಮುಂಡಿಬೆಟ್ಟ ಚಲೋ ಹಮ್ಮಿಕೊಳ್ಳಲಾಗಿದೆ.
ಈ ಕುರಿತು ಮೈಸೂರಿನ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹಿಂದೂ ಜಾಗರಣ ವೇದಿಕೆಯ ಕೇಶವ್ ಮೂರ್ತಿ ಅವರು, ಬಾನು ಮುಷ್ತಾಕ್ ಅವರು ದಸರಾ ಉದ್ಘಾಟಕರಾಗೋದು ಬೇಡ ಎಂದು ಮನವಿ ಮಾಡಿದ್ದೆವು. ಹೀಗಿದ್ದರೂ ಬಂಡತನದ ಸರ್ಕಾರ ಅವರಿಗೆ ಆಹ್ವಾನ ನೀಡಿದೆ. ನಮ್ಮ ಸಂಸ್ಕೃತಿ ಒಪ್ಪಿ ದಸರಾ ಉದ್ಘಾಟನೆ ಮಾಡಿದ್ರೆ ನಮ್ಮ ಅಭ್ಯಂತರ ಇಲ್ಲ. ಈಗಂತ ದಸರಾ ಉದ್ಘಾಟನೆಗೆ ನಾವು ಅಡ್ಡಿಪಡಿಸಲ್ಲ.
ಇದನ್ನು ಓದಿ: ಭಾನು ಮುಷ್ತಾಕ್ ಹಿಂದೂ ವಿರೋಧಿ : ನಿಖಿಲ್ ಕುಮಾರಸ್ವಾಮಿ
ಹಿಂದೂಗಳನ್ನ ಜಾಗೃತಿ ಮಾಡುವ ಕೆಲಸ ಮಾಡುತ್ತೇವೆ. ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್.8ರಂದು ಚಾಮುಂಡಿ ಬೆಟ್ಟ ಚಲೋ ಮಾಡುತ್ತೇವೆ. ಕುರುಬಾರಹಳ್ಳಿ ವೃತ್ತದಿಂದ ಚಾಮುಂಡಿ ಬೆಟ್ಟಕ್ಕೆ ಪಾದಯಾತ್ರೆ ಮಾಡುತ್ತೇವೆ. ಬಳಿಕ ಚಾಮುಂಡಿ ಬೆಟ್ಟದಲ್ಲಿ ಸಭಾ ಕಾರ್ಯಕ್ರಮ ನಡೆಯುತ್ತದೆ. ಹಿಂದೂಗಳು ಹಾಗೂ ಹಿಂದೂಗಳ ದೇವಾಲಯಗಳನ್ನು ಟಾರ್ಗೆಟ್ ಮಾಡಲಾಗ್ತಿದೆ. ಇದರ ವಿರುದ್ಧ ನಮ್ಮ ಹೋರಾಟ ನಡೆಯುತ್ತದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.





