ಮೈಸೂರು: ಅಗ್ನಿ ಬನ್ನಿರಾಯ ಸಮುದಾಯದವರು ಯಾರೂ ಕೂಡ ಮಣ್ಣನ್ನು ನಂಬಿ ಕೆಟ್ಟಿಲ್ಲ. ಈ ಜಗತ್ತು ಪ್ರೀತಿಸುವಂತಹ ಅಗ್ನಿ ಸಮುದಾಯದವರಾಗಿಯೇ ಉತ್ತಮವಾಗಿ ಬೆಳೆಯುತ್ತಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕರಾದ ವಿ.ಎನ್ ಮಲ್ಲಿಕಾರ್ಜುನ ಸ್ವಾಮಿ ಹೇಳಿದರು.
ಜಿಲ್ಲಾಡಳಿತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಶುಕ್ರವಾರ ಆಯೋಜಿಸಲಾಗಿದ್ದ ಶ್ರೀ ಅಗ್ನಿ ಬನ್ನಿರಾಯ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.
ಸಂಸ್ಕೃತದಲ್ಲಿ ಬನ್ನಿಯನ್ನು ವಹನಿ ಎಂದು ಕರೆಯುತ್ತಾರೆ. ಸಂಸ್ಕೃತದ ತದ್ಭವ ಅರ್ಥವಾಗಿದೆ. ಅಗ್ನಿ ಕುಲದಿಂದಲೇ ಅದರ ಸಂಕೇತವಾಗಿದೆ ಎಂದು ಹೇಳಿದರು.
ಪಾಂಡವರ ವನವಾಸದ ಸಂದರ್ಭದಲ್ಲಿ ಕೌರವರು ಕೊಟ್ಟ ಕಷ್ಟವನ್ನು ನೆನೆದು ಭೀಮ ಆ ಸಂದರ್ಭದಲ್ಲಿ ಅಗ್ನಿ ಪುತ್ರಿ ನೀನು, ನಾನು ವಾಯುಪುತ್ರ, ಬೆಂಕಿ ಗಾಳಿ ಎರಡು ಸೇರಿದರೆ ಈ ಕುರು ಕುಲದವರನ್ನು ಸುಟ್ಟು ಹಾಕದೇ ಬಿಡುವುದಿಲ್ಲ ಎಂದು ಭೀಮ ಹೇಳುತ್ತಾನೆ. ಇಂತಹ ವಂಶದ ಮೂಲ ಪುತ್ರರು ಅಗ್ನಿಬನ್ನಿರಾಯ ಎಂದು ತಿಳಿಸಿದರು.
ಸಂಶೋಧಕರಾದ ಮಧುಸೂದನ್ ಕೆ .ಆರ್ ಅವರು ಮಾತನಾಡಿ, ಅಗ್ನಿ ಬನ್ನಿರಾಯ ಜನಾಂಗದವರು ಸುಮಾರು 14 ಪಂಗಡಗಳನ್ನು ಒಳಗೊಂಡಿರುವ ಒಕ್ಕೂಟದ ಸಮಾಜ. ಈ ಒಂದು ಜನಾಂಗದಲ್ಲಿ ಇರುವವರು ಎಲ್ಲರೂ ಕೂಡ ಅಗ್ನಿಯ ಆರಾಧಕರು. ಅಗ್ನಿಯನ್ನೆ ಮೂಲವಾಗಿ ನಂಬಿಕೊಂಡು ಆರಾಧಿಸಿಕೊಂಡು ಬರುತ್ತಿರುವವರು ಎಂದು ಹೇಳಿದರು.
ನಮ್ಮ ಕರ್ನಾಟಕ ಭಾಗದಲ್ಲಿ ಅಗ್ನಿ ಬನ್ನಿರಾಯ ಎಂದು ಕರೆಯುತ್ತಾರೆ. ಅದೇ ತಮಿಳುನಾಡು ಭಾಗಗಳಲ್ಲಿ ವನ್ನಿ ಮಹಾರಾಜ ಎಂದು ಕರೆಯುತ್ತಾರೆ. ಆಂಧ್ರಪ್ರದೇಶದಲ್ಲೂ ಕೂಡ ವನ್ನಿ ಮಹಾರಾಜ ಎಂದು ಪೂಜಿಸುತ್ತಾರೆ. ಎಂದು ತಿಳಿಸಿದರು.