ಮೈಸೂರು: ಮೈಸೂರು ಪೊಲೀಸರು ನನಗೆ ಸರಿಯಾದ ಮಾಹಿತಿ ಕೊಟ್ಟಿದ್ದು, ಯಾವುದೇ ಡ್ರಗ್ಸ್ ಪತ್ತೆಯಾಗಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎನ್ಸಿಬಿ ಕೋರ್ಟ್ಗೆ ಕೊಟ್ಟಿರುವ ಮಾಹಿತಿಯಲ್ಲಿ ಡ್ರಗ್ಸ್ ಸಿಕ್ಕಿಲ್ಲ ಎಂದು ಹೇಳಿದೆ. ಪತ್ರಿಕಾ ಹೇಳಿಕೆಯಲ್ಲಿ ಡ್ರಗ್ಸ್ ಸಿಕ್ಕಿದೆ ಎಂದು ಹೇಳಿದೆ. ಯಾಕೆ ಈ ರೀತಿ ದ್ವಂದ್ವ ಮಾಡಿದ್ರೂ ಎಂಬುದು ಗೊತ್ತಿಲ್ಲ. ಇದರ ಹಿಂದಿನ ಉದ್ದೇಶವನ್ನ ಎನ್ಸಿಬಿ ಹೇಳಬೇಕು. ಎನ್ಸಿಬಿ ರೈಡ್ ಹೋದಾಗ ನಮ್ಮ ಪೊಲೀಸರು ಜೊತೆಯಲ್ಲೇ ಇದ್ದರು. ರೈಡ್ನಲ್ಲಿ ಯಾವುದೇ ಡ್ರಗ್ಸ್ ಸಿಕ್ಕಿಲ್ಲ. ಆದರೂ ಎರಡೆರಡು ಹೇಳಿಕೆಗಳನ್ನ ಎನ್ಸಿಬಿ ಕೊಟ್ಟಿದೆ. ಮೈಸೂರು ಪೊಲೀಸರು ನನಗೆ ಸರಿಯಾದ ಮಾಹಿತಿ ಕೊಟ್ಟಿದ್ದಾರೆ. ಮಾಹಿತಿ ಪ್ರಕಾರ ಮೈಸೂರಿನಲ್ಲಿ ಯಾವ ಡ್ರಗ್ಸ್ ಪತ್ತೆಯಾಗಿಲ್ಲ. ಆದರೂ ರಾಜ್ಯದ ಎಲ್ಲಾ ಕೆಮಿಕಲ್ ಫ್ಯಾಕ್ಟರಿಗಳ ಮೇಲೆ ಹೆಚ್ಚಿನ ನಿಗಾ ಇಡುವಂತೆ ಸೂಚನೆ ಕೊಟ್ಟಿದ್ದೇನೆ ಎಂದು ಹೇಳಿದರು.
ಇನ್ನು ಅಲ್ಪಸಂಖ್ಯಾತರ ಅಭಿವೃದ್ಧಿ ನಿಗದನ ಸಾಲ ಮನ್ನಾ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಅದರಲ್ಲಿ ತಪ್ಪೇನಿದೆ ಎಂದು ಸಮರ್ಥಿಸಿಕೊಂಡರು. ಸಾಲಮನ್ನಾ ಹೊಸದೇನು ಅಲ್ಲ. ಕೇಂದ್ರ ಮತ್ತು ರಾಜ್ಯ ಎರಡು ಸರ್ಕಾರಗಳು ಸಾಲಮನ್ನ ಮಾಡಿದೆ. ರೈತರ ಸಾಲ ಮನ್ನಾ ಆಗಿಲ್ವ, ಹಿಂದುಳಿದ ವರ್ಗಗಳ ಸಾಲ ಮನ್ನ ಆಗಲ್ವಾ. ಇದು ಅದೇ ರೀತಿ. ಯಾರಿಗೆ ಸಾಲ ಕಟ್ಟಲು ಆಗುವುದಿಲ್ಲವೋ. ಅಂತವರಿಗೆ ಸಾಲಮನ್ನಾ ಮಾಡುತ್ತೇವೆ. ಇದು ಕೂಡ ಅದೇ ರೀತಿಯ ಪ್ರಕ್ರಿಯೆ ಎಂದರು.





