ಮೈಸೂರು ಶ್ರೀ ಚಾಮರಾಜೇಂದ್ರ ಮೃಗಾಲಯದ ಹುಲಿ ಪೃಥ್ವಿ ಇನ್ನಿಲ್ಲ
ಮೈಸೂರು ಮೃಗಾಲಯದ ಪ್ರಮುಖ ಆಕರ್ಷಣೆಯಾಗಿದ್ದ ಪ್ರವಾಸಿಗರ ಮನಗೆದ್ದಿದ್ದ ಹೆಮ್ಮೆಯ ಹುಲಿ ‘ ಪೃಥ್ವಿ ಇನ್ನು ನೆನಪು ಮಾತ್ರ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ 13 ವರ್ಷದ ಗಂಡು ಹುಲಿ ಪೃಥ್ವಿ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದೆ.
ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಇಂದು ಶೋಕದ ವಾತಾವರಣ ಮನೆಮಾಡಿದೆ, ಮೃಗಾಲಯದ ಅಂದವನ್ನು ಹೆಚ್ಚಿಸಿದ್ದ ಮೈಬಣ್ಣದ ವೈಭವದಿಂದ ಪ್ರವಾಸಿಗರ ಕಣ್ಮನ ಸೆಳೆಯುತ್ತಿದ್ದ 13 ವರ್ಷದ ಗಂಡು ಹುಲಿ ಪೃಥ್ವಿ ಅಗಲಿಕೆಯ ನೋವನ್ನು ಅನುಭವಿಸುತ್ತಿದೆ. ಕಳೆದ ಕೆಲ ದಿನಗಳಿಂದ ಈ ಹುಲಿ ತೀವ್ರ ಅನಾರೋಗ್ಯದಿಂದ ಬಳಲುತ್ತಿತ್ತು Congenital Paresis ಎಂಬ ಹುಟ್ಟಿನಿಂದ ಬಂದ ನರ ದೌರ್ಬಲ್ಯದ ಸಮಸ್ಯೆಯಿಂದಾಗಿ ಪೃಥ್ವಿ ಚಲನವಲನ ಮಾಡಲು ಪರದಾಡುತ್ತಿತ್ತು. ಕಳೆದ ಎರಡು ದಿನಗಳ ಹಿಂದೆ ಅನಾರೋಗ್ಯ ಹೆಚ್ಚಿದ ವಿಷಯ ತಿಳಿಯುತ್ತಿದ್ದಂತೆಯೇ ಮೃಗಾಲಯದ ಪಶುವೈದ್ಯರ ತಂಡ ಹುಲಿಯ ಆರೋಗ್ಯದ ಮೇಲೆ ನಿಗಾ ಇಟ್ಟಿತ್ತು. ಆದರೆ ವೈದ್ಯರ ಸತತ ಪ್ರಯತ್ನವನ್ನೂ ಮೀರಿ ಇಂದು ಪೃಥ್ವಿ ಮೃಗಾಲಯದಲ್ಲಿ ಅಸುನೀಗಿದೆ.
ಹುಲಿಯ ಮರಣದ ಕುರಿತು ಅಧಿಕೃತ ಪ್ರಕಟಣೆ ನೀಡಿರುವ ಮೃಗಾಲಯ ಆಡಳಿತ ಮಂಡಳಿ ಪೃಥ್ವಿಗೆ ಅತ್ಯುತ್ತಮ ಚಿಕಿತ್ಸೆ ನೀಡಲು ಪ್ರಯತ್ನಿಸಲಾಗಿತ್ತು. ಆದರೆ ದುರದೃಷ್ಟವಶಾತ್ ಅದು ಚಿಕಿತ್ಸೆಗೆ ಸ್ಪಂದಿಸಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದೆ. 13 ವರ್ಷಗಳ ಕಾಲ ಮೈಸೂರು ಮೃಗಾಲಯದ ಶೋಭೆಯಾಗಿದ್ದ ಪೃಥ್ವಿ ಈಗ ಪ್ರಾಣಿಪ್ರಿಯರ ಪಾಲಿಗೆ ನೀಗದ ನೋವನ್ನು ನೀಡಿ ಮರೆಯಾಗಿದೆ.





