Mysore
20
scattered clouds

Social Media

ಬುಧವಾರ, 18 ಫೆಬ್ರವರಿ 2026
Light
Dark

ಮೈಸೂರು | ಶಿವರಾತ್ರಿಗೆ ಎಲ್ಲೆಡೆ ಸಿದ್ಧತೆ

ಮೈಸೂರು : ಹಿಂದೂಗಳ ಪವಿತ್ರ ಹಬ್ಬಗಳಲ್ಲಿ ಒಂದಾದ ಮಹಾ ಶಿವರಾತ್ರಿ ಆಚರಣೆಗೆ ಶಿವ ದೇವಾಲಯಗಳು ಸಂಪೂರ್ಣ ಸಜ್ಜಾಗಿವೆ. ನಗರದ ಪ್ರಮುಖ ಶಿವ ದೇಗುಲಗಳಲ್ಲಿ ಸ್ವಚ್ಛತಾ ಕಾರ್ಯಗಳು, ಅಲಂಕಾರ ಮತ್ತು ಅಂತಿಮ ಸಿದ್ಧತೆಗಳು ಪೂರ್ಣಗೊಂಡಿವೆ. ಭಕ್ತರು ನಾಳಿನ ದರ್ಶನ, ಅಭಿಷೇಕ, ಭಜನೆ ಮತ್ತು ಜಾಗರಣೆಯಲ್ಲಿ ಭಾಗವಹಿಸಲು ಉತ್ಸಾಹದಿಂದ ಸಿದ್ಧರಾಗಿದ್ದಾರೆ.

ನಗರದ ಪ್ರಮುಖ ದೇವಾಲಯಗಳಲ್ಲಿ ಅರಮನೆಯ ತ್ರಿನೇಶ್ವರಸ್ವಾಮಿ ದೇವಸ್ಥಾನವು ವಿಶೇಷ ಆಕರ್ಷಣೆಯಾಗಿದೆ. ಇಲ್ಲಿ ಶಿವಲಿಂಗಕ್ಕೆ ವರ್ಷಕ್ಕೊಮ್ಮೆ ಮಾತ್ರ ಧರಿಸುವ 11 ಕೆ.ಜಿ. ತೂಕದ ಚಿನ್ನದ ಕೊಳಗ (ಮುಖವಾಡ) ಧಾರಣೆ ಮಾಡಲಾಗುತ್ತದೆ. ಭಾನುವಾರ ಬೆಳಿಗ್ಗೆ ಅಭಿಷೇಕ ಮತ್ತು ವಿಶೇಷ ಪೂಜೆಗಳ ನಂತರ ಕೊಳಗ ಧಾರಣೆ ನೆರವೇರಿಸಲಾಗುವುದು. ಬೆಳಿಗ್ಗೆ 6 ಗಂಟೆಯಿಂದಲೇ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಸಾವಿರಾರು ಭಕ್ತರು ಆಗಮಿಸುವ ನಿರೀಕ್ಷೆಯಿದೆ.

ರಾಮಾನುಜ ರಸ್ತೆಯ 108 ಲಿಂಗಗಳ ದೇಗುಲ ಮತ್ತು ಗುರುಕುಲ ಟ್ರಸ್ಟ್‌ನ 101 ಶಿವಲಿಂಗಗಳನ್ನು ಶುಚಿಗೊಳಿಸಿ ವಿಶೇಷ ಅಲಂಕಾರ ಮಾಡಲಾಗಿದೆ. ಕಾಮೇಶ್ವರ-ಕಾಮೇಶ್ವರಿ ದೇವಸ್ಥಾನದಲ್ಲಿ ಬೆಳಿಗ್ಗೆ ಏಕದಶಾವಾರ ರುದ್ರಾಭಿಷೇಕ, ಅಷ್ಟಾವಧಾನ ಸೇವೆ, ವಿಜಯವಿಶ್ವೇಶ್ವರಸ್ವಾಮಿ ಪ್ರಾಕಾರೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

ಚಾಮರಾಜಪುರಂನ ಶ್ರೀ ಪ್ರಸನ್ನ ವಿಶ್ವೇಶ್ವರ, ಕೆ.ಜಿ.ಕೊಪ್ಪಲ್ ಮತ್ತು ಮಾತೃಮಂಡಳಿ ವೃತ್ತದ ಚಂದ್ರಮೌಳೇಶ್ವರ, ವಿದ್ಯಾರಣ್ಯಪುರಂನ ರಾಮಲಿಂಗೇಶ್ವರ, ಅಶೋಕಪುರಂನ ಮುಕ್ಕಣ್ಣೇಶ್ವರ, ಕುಂಬಾರಕೊಪ್ಪಲ್ ಮತ್ತು ಲಷ್ಕರ್ ಮೊಹಲ್ಲಾದ ಮಲೆ ಮಹದೇಶ್ವರ ಸ್ವಾಮಿ ದೇವಸ್ಥಾನಗಳಲ್ಲಿಯೂ ಸ್ವಚ್ಛತೆ, ಅಲಂಕಾರ ಮತ್ತು ರಾತ್ರಿ ಭಜನಾ ಕಾರ್ಯಕ್ರಮಗಳಿಗೆ ಸಿದ್ಧತೆ ಪೂರ್ಣಗೊಂಡಿದೆ.

ಸುತ್ತೂರು ಶ್ರೀ ಕ್ಷೇತ್ರದಲ್ಲಿ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ. ಆದಿ ಜಗದ್ಗುರು ಶಿವರಾತ್ರೀಶ್ವರ ಶಿವಯೋಗಿಗಳ ಕರ್ತೃಗದ್ದುಗೆಯಲ್ಲಿ ಭಾನುವಾರ ಬೆಳಿಗ್ಗೆ 6ರಿಂದ ಸೋಮವಾರ ಬೆಳಿಗ್ಗೆ 6ರವರೆಗೆ ವಿಶೇಷ ಪೂಜೆಗಳು, ಅಖಂಡ ಭಜನೆ ನಡೆಯಲಿವೆ. ಸಂಜೆ 7ಕ್ಕೆ ಶಿವದೀಕ್ಷೆ, ರಾತ್ರಿ 9.30ಕ್ಕೆ ಬೆಳ್ಳಿರಥ ಪ್ರಾಕಾರೋತ್ಸವ ಇರುತ್ತದೆ. ಗದ್ದುಗೆ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಭಕ್ತಿಗೀತೆ, ಶಿವಕಥೆ, ನೀಲಗಾರರ ಮೇಳ ಮತ್ತು ಭಜನಾ ತಂಡಗಳ ಪ್ರದರ್ಶನಗಳು ಏರ್ಪಡಿಸಲಾಗಿದೆ. ಮಹದೇಶ್ವರ ಸನ್ನಿಧಿ, ಸೋಮೇಶ್ವರ, ವೀರಭದ್ರೇಶ್ವರ, ನಂಜುಂಡೇಶ್ವರ ಮತ್ತು ನಾರಾಯಣಸ್ವಾಮಿ ದೇವಸ್ಥಾನಗಳಲ್ಲಿಯೂ ವಿಶೇಷ ಪೂಜೆಗಳು ನಡೆಯಲಿವೆ.

ಹಬ್ಬದ ಹಿನ್ನೆಲೆಯಲ್ಲಿ ದೇವರಾಜ ಮಾರುಕಟ್ಟೆ, ಅಗ್ರಹಾರದ ಚಿಕ್ಕ ಮಾರುಕಟ್ಟೆ ಸೇರಿದಂತೆ ಪ್ರಮುಖ ಮಾರುಕಟ್ಟೆಗಳಲ್ಲಿ ಪೂಜಾ ಸಾಮಗ್ರಿ, ಹೂವುಗಳು (ಕಾಕಡ, ಕನಕಾಂಬರ, ಮಲ್ಲಿಗೆ, ಸೇವಂತಿಗೆ), ಹಣ್ಣುಗಳು, ವಸ್ತ್ರ, ಕುಂಕುಮ, ವಿಭೂತಿ, ಬಿಲ್ವಪತ್ರೆಗಳ ಮಾರಾಟ ಭರ್ಜರಿಯಾಗಿದೆ. ಹೂವಿನ ದರ ಏರಿಕೆಯಾಗಿದ್ದರೂ ಸಾರ್ವಜನಿಕರು ಖರೀದಿಯಲ್ಲಿ ನಿರತರಾಗಿದ್ದಾರೆ.

ಭರ್ಜರಿ ವ್ಯಾಪಾರ
ಶನಿವಾರ ಶಿವರಾತ್ರಿ ಹಬ್ಬಕ್ಕೆ ಬೇಕಾದ ಪೂಜಾ ಸಾಮಗ್ರಿಗಳ ಖರೀದಿ ಭರಾಟೆ ಜೋರಾಗಿತ್ತು. ನಗರದ ದೇವರಾಜ ಮಾರುಕಟ್ಟೆ, ಅಗ್ರಹಾರದ ಚಿಕ್ಕ ಮಾರುಕಟ್ಟೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ವ್ಯಾಪಾರ ವಹಿವಾಟು ನಡೆಯಿತು. ಕಾಕಡ, ಕನಕಾಂಬರ, ಮಲ್ಲಿಗೆ, ಸೇವಂತಿಗೆ ಸೇರಿದಂತೆ ಹೂಗಳ ಮಾರಾಟ ಭರ್ಜರಿಯಾಗಿ ನಡೆಯಿತು. ಹಬ್ಬದ ಹಿನ್ನೆಲೆಯಲ್ಲಿ ಹೂವಿನ ದರ ಏರಿಕೆಯಾಗಿದೆ. ಬಾಳೆಹಣ್ಣು, ಕಿತ್ತಳೆ, ಸವತೆಕಾಯಿ ಸೇರಿದಂತೆ ವಿವಿಧ ಹಣ್ಣುಗಳ ಮಾರಾಟವೂ ಜೋರಾಗಿತ್ತು. ಅಲ್ಲದೆ ವಸ್ತ್ರ, ಕುಂಕುಮ, ವಿಭೂತಿ, ಬಿಲ್ವಪತ್ರೆ, ಶಿವಪೂಜೆಗೆ ಬೇಕಾಗುವ ಇತರೆ ಪೂಜಾ ಸಾಮಗ್ರಿಗಳನ್ನು ಖರೀದಿಸುವಲ್ಲಿ ಸಾರ್ವಜನಿಕರು ನಿರತರಾಗಿದ್ದರು.

 

Tags:
error: Content is protected !!