ಮೈಸೂರು: ಮಳೆಗಾಲ ಸಮೀಪಿಸುತ್ತಿದ್ದಂತೆ ಮೈಸೂರು ಅರಮನೆ ಆಡಳಿತ ಮಂಡಳಿ ಎಚ್ಚೆತ್ತುಕೊಂಡಿದ್ದು, ಅರಮನೆ ಸುತ್ತ ಇರುವ ಕೋಟೆಯ ದುರಸ್ತಿಯನ್ನು ಕಾರ್ಯ ಕೈಗೊಂಡಿದೆ.
ಸುಮಾರು 72 ಎಕರೆ ವಿಸ್ತೀರ್ಣದ ಮೈಸೂರು ಅರಮನೆ ಸುತ್ತ ನಿರ್ಮಾಣವಾಗಿರುವ ಕೋಟೆ ಇದಾಗಿದ್ದು, ನೂರಾರು ವರ್ಷಗಳ ಪಾರಂಪರಿಕ ಕೋಟೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಕಳೆದ ಎರಡು ವರ್ಷಗಳ ಹಿಂದೆ ಅರಮನೆ ಕೋಟೆಯ ಪೂರ್ವಭಾಗದಲ್ಲಿ ಕುಸಿದಿತ್ತು. ಈ ಹಿನ್ನೆಲೆಯಲ್ಲಿ ಪಾರಂಪರಿಕತಗೆ ಧಕ್ಕೆಯಾಗದಂತೆ ಹಳೆಯ ಕಲ್ಲುಗಳನ್ನೇ ಬಳಸಿ ಕೋಟೆ ದುರಸ್ತಿ ಕಾರ್ಯ ಕೈಗೊಂಡಿದ್ದು, ಭಾರೀ ಗಾತ್ರದ ಕಲ್ಲು ಎತ್ತಲು ಕ್ರೇನ್ ಬಳಕೆ ಮಾಡಿಕೊಳ್ಳಲಾಗಿದೆ.
ಅರಮನೆಯ ಮುಖ್ಯ ದ್ವಾರದ ಜಯಮಾರ್ತಾಂಡ ಗೇಟ್ನ ಬಲಭಾಗದಲ್ಲಿ ಸುಮಾರು ಎರಡು ವಾರಗಳಿಂದಲೂ ದುರಸ್ತಿ ಕಾರ್ಯ ನಡೆಯುತ್ತಿದ್ದು, ಹಳೆಯ ಕಲ್ಲುಗಳು, ಸಿಮೆಂಟ್, ಮರಳು ಬಳಸಿ ಐತಿಹಾಸಿಕ ಕೋಟೆ ಮಾದರಿಯಲ್ಲೇ ನಿರ್ಮಾಣ ಕಾರ್ಯ ಮಾಡಲಾಗುತ್ತಿದೆ.





