Mysore
24
haze

Social Media

ಭಾನುವಾರ, 29 ಮಾರ್ಚ್ 2026
Light
Dark

ಮೈಸೂರು | ವರ್ತುಲ ರಸ್ತೆ ಇಕ್ಕೆಲಗಳ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ

ಮೈಸೂರು : ನಗರದ ಹೊರ ವರ್ತುಲ ರಸ್ತೆಯಲ್ಲಿ ಹಗಲು ವೇಳೆ ಸಾಕಷ್ಟು ವಾಹನಗಳು ಹಾಗೂ ಸಾರ್ವಜನಿಕರು ಓಡಾಡಲು ಸ್ವಚ್ಛತೆ ಕೊರತೆ ಎದ್ದು ಕಾಣುತ್ತಿತ್ತು, ಅದನ್ನು ಸರಿಪಡಿಸಲು ಸ್ವಚ್ಛತಾ ಕಾರ್ಯಕ್ರಮ ಎಂಬ ವಿನೂತನ ಪ್ರಯೋಗ ಮಾಡಲಾಗಿದ್ದು ಎಲ್ಲರ ಸಹಕಾರ ಕೂಡ ಬೇಕಾಗಿದೆ ಎಂದು ನಗರ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್ ಹೇಳಿದರು.

ನಗರದ ದೊಡ್ಡಕೆರೆ ಮೈದಾನದಲ್ಲಿ ಮೈಸೂರು ಮಹಾನಗರ ಪಾಲಿಕೆ ಹಾಗೂ ಬೋಗಾದಿ, ಶ್ರೀರಾಂಪುರ, ಹೂಟಗಳ್ಳಿ, ಕಡಕೊಳ, ಸಿದ್ದಲಿಂಗಪುರ ಪಟ್ಟಣ ಪಂಚಾಯಿತಿ ಮತ್ತು ನಗರಸಭೆ, ನಗರ ಸ್ಥಳೀಯ ಸಂಸ್ಥೆಗಳು ಮತ್ತು ಬಿಲ್ಡರ್ಸ್ ಅಸೋಸಿಯೇಷನ್ ಸಹಯೋಗದಲ್ಲಿ ಶನಿವಾರ ಅಯೋಜಿಸಿದ್ದ ಸಾಂಸ್ಕೃತಿಕ ನಗರಿಯ ಸೌಂದರ್ಯವನ್ನು ಕಾಪಾಡುವ ನಿಟ್ಟಿನಲ್ಲಿ ವರ್ತುಲ ರಸ್ತೆಯ ಎರಡೂ ಬದಿಗಳಲ್ಲಿ ಸುರಿದಿರುವ ತ್ಯಾಜ್ಯ, ಕಟ್ಟಡ ಅವಶೇಷ ಹಾಗೂ ಅನುಪಯುಕ್ತ ವಸ್ತುಗಳ ಬೃಹತ್ ಸ್ವಚ್ಛತಾ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಿಂಗ್ ರಸ್ತೆಯಲ್ಲಿ ನಿತ್ಯ ಸಾಕಷ್ಟು ವಾಹನಗಳು ಸಂಚರಿಸುತ್ತವೆ. ಹೀಗಾಗಿ ವರ್ತುಲ ರಸ್ತೆಯ ಸ್ವಚ್ಛತೆಗೆ ಪಾಲಿಕೆ ಜೊತೆಗೆ ಸ್ಥಳೀಯ ಸಂಸ್ಥೆಗಳ ಕರ್ತವ್ಯವೂ ಇದೆ ಎಂದರು.

ವರ್ತುಲ ರಸ್ತೆಯ ಸುಮಾರು 43 ಕಿಮೀ ವ್ಯಾಪ್ತಿಯಲ್ಲಿರುವ ಸುತ್ತಮುತ್ತಲಿನ ಬಡಾವಣೆಗಳ ಕೆಲವು ನಿವಾಸಿಗಳು ಕಸ, ಪ್ಲಾಸ್ಟಿಕ್,ಅನುಪಯುಕ್ತ ವಸ್ತುಗಳು ಹಾಗೂ ಕಟ್ಟಡ ಅವಶೇಷಗಳನ್ನು ರಾತ್ರಿವೇಳೆ ತಂದು ಸುರಿದು ಹೋಗುವುದು ಸರ್ವೇ ಸಾಮಾನ್ಯವಾಗಿದ್ದು, ಇದರಿಂದ ರಸ್ತೆಯ ಇಕ್ಕೆಲಗಳಲ್ಲಿ ಅಂದಗೆಡುವುದು ಗಮನಕ್ಕೆ ಬಂದಿದ್ದು, ಅದನ್ನು ಸರಿಪಡಿಸಲು ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ಹೇಳಿದರು.

ಸ್ವಚ್ಛತಾ ಕಾರ್ಯಕ್ರಮದ ವಿನೂತನ ಪ್ರಯೋಗಕ್ಕೆ 50 ಜೆಸಿಬಿ, 30 ಟಿಪ್ಪರ್‌ಗಳು, 8 ಟ್ರಾಕ್ಟರ್‌ಗಳು ಸೇರಿದಂತೆ ಸುಮಾರು 500 ಮಂದಿ ಪೌರ ಕಾರ್ಮಿಕರು ಭಾಗವಹಿಸಿದ್ದು, ಸಂಗ್ರಹವಾಗುವ ತ್ಯಾಜ್ಯವನ್ನು ವಿದ್ಯಾರಣ್ಯಪುರಂ ನಲ್ಲಿರುವ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಮತ್ತು ಕಟ್ಟಡ ತ್ಯಾಜ್ಯವನ್ನು ಸಾತಗಳ್ಳಿಯ ಘಟಕಕ್ಕೆ ಸುರಿಯುವ ವ್ಯವಸ್ಥೆಯನ್ನು ಮಾಡಲಾಗಿದೆ. ಭಾನುವಾರವೂ ಈ ಸ್ವಚ್ಛತಾ ಕಾರ್ಯದ ವಿನೂತನ ಪ್ರಯೋಗ ನಡೆಯಲಿದ್ದು, ಆಸಕ್ತರು ಸಹಕಾರ ನೀಡುವುದರ ಮೂಲಕ ವರ್ತುಲ ರಸ್ತೆಯ ಸ್ವಚ್ಛತೆಯನ್ನು ಕಾಪಾಡುವಲ್ಲಿ ಎಲ್ಲರೂ ಶ್ರಮಿಸೋಣ ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ನಗರಪಾಲಿಕೆ ಕಾರ್ಯನಿರ್ವಾಹಕ ಇಂಜಿನಿಯರ್‌ಗಳಾದ ಶ್ರೀನಿವಾಸ್, ಮಧುಸೂದನ್, ಅಶ್ವಿನ್, ಶಿಲ್ಪಾ, ಕೆ.ಎಸ್.ಮೃತ್ಯುಂಜಯ, ಅಧಿಕ್ಷಕ ಇಂಜಿನಿಯರ್ ಮಂಜುನಾಥ್, ಶ್ರೀರಾಂಪುರ ಪಪಂ ಮುಖ್ಯಾಧಿಕಾರಿ ಸುರೇಶ್, ಕಡಕೊಳ ಪಪಂ ಮುಖ್ಯಾಧಿಕಾರಿ ದೀಪಾ, ಬಿಲ್ಡರ್ಸ್ ಅಸೋಸಿಯೇಷನ್‌ನ ಪ್ರವೀಣ್ ಜಿಎಸ್‌ಎಸ್‌ನ ಶ್ರೀಹರಿ ಮತ್ತಿತರರು ಉಪಸ್ಥಿತರಿದ್ದರು.

Tags:
error: Content is protected !!