ಮೈಸೂರು: ಡಾ.ಬಿ.ಆರ್.ಅಂಬೇಡ್ಕರ್ ಅವರ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವಹೇಳನಕಾರಿ ಹೇಳಿಕೆ ನೀಡಿದ್ದು, ಈ ಹೇಳಿಕೆಯನ್ನು ಖಂಡಿಸಿ ಮೈಸೂರಿನಲ್ಲಿ ಬಂದ್ ಕರೆ ನೀಡಲಾಗಿತ್ತು. ಇದೀಗ ಮೈಸೂರು ಬಂದ್ನಲ್ಲಿ ಪಾಲ್ಗೊಂಡು ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಪ್ರತಿಕ್ರಿಯೆ ನೀಡಿದ್ದಾರೆ.
ನಗರದಲ್ಲಿ ಇಂದು(ಜನವರಿ.7) ಈ ಕುರಿತು ಮೈಸೂರು ಬಂದ್ಗೆ ಬೆಂಬಲ ಸೂಚಿಸಿ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಭಾರತ ದೇಶದಲ್ಲಿ ಅಸ್ಪೃಶ್ಯತೆ, ಬಡತನ ಮತ್ತು ಅಸಮಾನತೆಯಿದ್ದರೂ ಇಂದು ದೇಶ ಶಾಂತಿಯುತವಾಗಿ ನೆಮ್ಮದಿಯಾಗಿದೆ. ಅದಕ್ಕೆ ಪ್ರಮುಖ ಕಾರಣವೆಂದರೆ ಡಾ.ಬಿ.ಆರ್.ಅಂಬೇಡ್ಕರ್ ಅವರು ನೀಡಿದಂತಹ ಸಂವಿಧಾನವಾಗಿದೆ. ಇತಂಹ ಸಂವಿಧಾನವನ್ನು ನೀಡಿದಂತಹ ಬಾಬಾ ಸಾಹೇಬ ಅಂಬೇಡ್ಕರ್ ಅವರ ಬಗ್ಗೆ ಕೇಂದ್ರ ಸಚಿವ ಅಮಿತ್ ಶಾ ಅವರು ಸಂಸತ್ ಆವರಣದಲ್ಲಿ ಅಸಹನೆ ಮಾತನಾಡಿರುವುದು ತೀವ್ರ ಖಂಡನೀಯವಾಗಿದೆ. ಹೀಗಾಗಿ ಪ್ರಗತಿ ಪರ ಸಂಘಟನೆಗಳಿಂದ ಅಮಿತ್ ಶಾ ವಿರುದ್ಧ ಮೈಸೂರು ಬಂದ್ಗೆ ಕರೆ ನೀಡಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ಇನ್ನೂ ಈ ಬಂದ್ಗೆ ನಗರದಲ್ಲಿ ಉತ್ತಮ ಸ್ವಯಂ ಘೋಷಿತ ಬೆಂಬಲ ವ್ಯಕ್ತವಾಗುತ್ತಿದೆ. ಇದಕ್ಕೆ ಪೂರಕವಾಗಿ ಮಳಿಗೆಗಳು, ಸಾರಿಗೆ ಬಸ್, ಮಾರುಕಟ್ಟೆಗಳು, ಮೈಸೂರು ಸಿಟಿ ಕಾರ್ಪೋರೇಷನ್ ಹಾಗೂ ಬ್ಯಾಂಕ್ ಸಹ ತಮ್ಮ ಸೇವೆಗಳನ್ನು ನಿಲ್ಲಿಸುತ್ತಿವೆ ಎಂದು ತಿಳಿಸಿದ್ದಾರೆ.





