Mysore
25
broken clouds

Social Media

ಗುರುವಾರ, 26 ಫೆಬ್ರವರಿ 2026
Light
Dark

ಮೈಸೂರು | ಸ್ವಚ್ಛತಾ ರಾಯಾಭಾರಿಗಳಾಗಿ ಆರು ಗಣ್ಯರ ನೇಮಕ

ಮೈಸೂರು : ಐತಿಹಾಸಿಕ ಪರಂಪರೆ, ಸಾಂಸ್ಕ ತಿಕ ವೈಭವದಿಂದ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಮೈಸೂರು ನಗರದ ಸ್ವಚ್ಛತೆಯನ್ನು ಇನ್ನಷ್ಟು ಉತ್ತಮಪಡಿಸುವ ಉದ್ದೇಶದಿಂದ ಮೈಸೂರು ಮಹಾನಗರ ಪಾಲಿಕೆಯು ಆರು ಮಂದಿ ಸಾಧಕರನ್ನು `ಸ್ವಚ್ಛತಾ ಬ್ರಾಂಡ್ ಅಂಬಾಸಿಡರ್’ಗಳನ್ನಾಗಿ ನೇಮಕ ಮಾಡಿದೆ.

ಸ್ವಚ್ಛ ಭಾರತ ಅಭಿಯಾನದಡಿ ಮೈಸೂರು ನಗರವನ್ನು ಕೇವಲ ಬಾಹ್ಯವಾಗಿ ಅಷ್ಟೇ ಅಲ್ಲದೆ, ನಾಗರಿಕರ ಮನೋಭಾವದಲ್ಲಿಯೂ ಸ್ವಚ್ಛತೆಯ ಮೌಲ್ಯಗಳನ್ನು ಬೆಳೆಸುವ ನಿಟ್ಟಿನಲ್ಲಿ ಪಾಲಿಕೆ ಈ ಕ್ರಮ ಕೈಗೊಂಡಿದೆ. ಚಲನಚಿತ್ರ, ಸಂಗೀತ ಹಾಗೂ ಕಲೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗುರುತರ ಸೇವೆ ಸಲ್ಲಿಸಿರುವ ಗಣ್ಯರ ಜನಪ್ರಿಯತೆ ಮತ್ತು ಬದ್ಧತೆಯನ್ನು ಗಮನಿಸಿ ಈ ಜವಾಬ್ದಾರಿ ನೀಡಲಾಗಿದೆ.

ಶಿಲ್ಪಿ ಅರುಣ್ ಯೋಗಿರಾಜ್, ಚಲನಚಿತ್ರ ಕಲಾವಿದ ವಸಿಷ್ಠ ಸಿಂಹ, ನಟಿ ಹರಿಪ್ರಿಯಾ, ಬಿಗ್‌ಬಾಸ್ ಖ್ಯಾತಿಯ ಸೂರಜ್ ಸಿಂಗ್, ಗಾಯಕರಾದ ಅನನ್ಯ ಭಟ್ ಹಾಗೂ ಆಲೋಕ್ ಅವರುಗಳನ್ನು ಮೈಸೂರು ಮಹಾನಗರ ಪಾಲಿಕೆಯ ನೂತನ ಸ್ವಚ್ಛತಾ ರಾಯಭಾರಿಗಳಾಗಿ ನೇಮಿಸಲಾಗಿದೆ.

ನೇಮಕಗೊಂಡಿರುವ ಈ ಗಣ್ಯರು ನಗರದ ಸ್ವಚ್ಛತೆ ಮತ್ತು ಪರಿಸರ ಸಂರಕ್ಷಣೆಯ ಬಗ್ಗೆ ನಾಗರಿಕರಲ್ಲಿ ಅರಿವು ಮೂಡಿಸಲಿದ್ದಾರೆ. ಪಾಲಿಕೆಯು ಹಮ್ಮಿಕೊಳ್ಳುವ ಸ್ವಚ್ಛ ಭಾರತ ಅಭಿಯಾನದ ವಿವಿಧ ಕಾರ್ಯಕ್ರಮಗಳು ಹಾಗೂ ಜಾಗೃತಿ ಜಾಥಾಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲಿದ್ದಾರೆ. ಶಾಲಾ-ಕಾಲೇಜುಗಳು, ಶಿಕ್ಷಣ ಸಂಸ್ಥೆಗಳು ಮತ್ತು ಸಾರ್ವಜನಿಕ ವೇದಿಕೆಗಳಲ್ಲಿ ಸ್ವಚ್ಛತೆಯ ಸಂದೇಶವನ್ನು ಪರಿಣಾಮಕಾರಿಯಾಗಿ ತಲುಪಿಸುವ ಕೆಲಸವನ್ನು ಇವರು ಮಾಡಲಿದ್ದಾರೆ.

ಸಂಪೂರ್ಣವಾಗಿ ಸೇವಾ ಮನೋಭಾವದಿಂದ, ಯಾವುದೇ ಗೌರವಧನ ಅಥವಾ ಆರ್ಥಿಕ ಲಾಭದ ಅಪೇಕ್ಷೆಯಿಲ್ಲದೆ ಸಾರ್ವಜನಿಕ ಹಿತದೃಷ್ಟಿಯಿಂದ ಈ ಸಾಧಕರು ರಾಯಭಾರಿಗಳಾಗಿ ನೇಮಕಗೊಂಡಿದ್ದಾರೆ. ಮೈಸೂರನ್ನು ಶಿಸ್ತುಬದ್ಧ ಹಾಗೂ ಮಾದರಿ ನಗರವಾಗಿ ರೂಪಿಸುವ ಪಾಲಿಕೆಯ ಆಶಯಕ್ಕೆ ಇವರ ಸಹಕಾರ ಜೊತೆಯಾಗಲಿದೆ ಎಂದು ಮೈಸೂರು ಮಹಾನಗರ ಪಾಲಿಕೆಯ ಆಯುಕ್ತ ಶೇಖ್ ತನ್ವೀರ್ ಆಸಿಫ್ ತಿಳಿಸಿದ್ದಾರೆ.

 

Tags:
error: Content is protected !!