ಮೈಸೂರು : ಸಜಾ ಬಂಧಿಗಳು ಕಾರಾಗೃಹದಿಂದ ಬಿಡುಗಡೆಯಾಗುವುದರೊಳಗೆ ಉತ್ತಮ ನಡತೆಯನ್ನು ಹೊಂದಿ ಹೊರಗೆ ಹೋದ ಬಳಿಕ ಸಮಾಜಮುಖಿ ಜೀವನ ಆರಂಭಿಸಬೇಕು ಎಂದು ಕರ್ನಾಟಕ ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವೆ ಪೊಲೀಸ್ ಮಹಾನಿರ್ದೇಶಕ ಅಲೋಕ್ಕುಮಾರ್ ಸಲಹೆ ನೀಡಿದರು.
ನಗರದ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ, ಪರಿಶೀಲಿಸಿದ ಬಳಿಕ ಬಂಧಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಶಿಕ್ಷಾ ಬಂಧಿಗಳಿಗೆ ಸರ್ಕಾರದಿಂದ ದೊರೆಯಬಹುದಾದ ಎಲ್ಲ ಸೌಲಭ್ಯಗಳನ್ನು ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುತ್ತದೆ ಎಂದರು.
ಈ ವೇಳೆ ಕಾರಾಗೃಹದಲ್ಲಿ ಉತ್ತಮ ನಡತೆಯುಳ್ಳ ಶಿಕ್ಷಾಬಂಧಿ ಹಾಗೂ ವಿಚಾರಣಾ ಬಂಧಿಗಳಿಗೆ ಪ್ರಶಂಸನಾ ಪತ್ರ ವಿತರಿಸಿದರು. ಬಂಧಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. 2025ನೇ ಸಾಲಿನಲ್ಲಿ ಕಾರಾಗೃಹದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿಗಳು, ಸಿಬ್ಬಂದಿಗೆ ಪ್ರಶಂಸನಾ ಪತ್ರ ನೀಡಿದರು. ಬಳಿಕ 2026ನೇ ವರ್ಷದ ಟೇಬಲ್ ಕ್ಯಾಲೆಂಡರ್ ಬಿಡುಗಡೆ ಮಾಡಿದರು.
ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆ ದಕ್ಷಿಣ ವಲಯದ ಉಪ ಮಹಾನಿರೀಕ್ಷಕರಾದ ಕೆ.ಸಿ.ದಿವ್ಯಶ್ರೀ, ಕೆಎಸ್ಐಎಸ್ಎಫ್ ಕಮಾಂಡೆಂಟ್ ಕೆ.ಎಂ.ಮಹದೇವ ಪ್ರಸಾದ್, ಮುಖ್ಯ ಅಧಿಕ್ಷಕ ವಿ.ಶೇಷುಮೂರ್ತಿ, ಅಧಿಕ್ಷಕ ಎಂ.ಎಚ್.ಆಶೇಖಾನ್ ಹಾಜರಿದ್ದರು.





