ಮೈಸೂರು: ಮುಡಾದಲ್ಲಿ ಹಗರಣ ನಡೆದಿದೆ ಎಂದು ಆರ್ಐಟಿ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಇ.ಡಿ.ಗೆ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ 20ಕ್ಕೂ ಅಧಿಕ ಅಧಿಕಾರಿಗಳು ಇಂದು(ಅಕ್ಟೋಬರ್.18) ಮುಡಾ ಕಚೇರಿ ಮೇಲೆ ದಾಳಿ ನಡೆಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.
ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರ ಸ್ನೇಹಮಯಿ ಕೃಷ್ಣ ಅವರಿಗೆ ವಿಚಾರಣೆಗೆ ಹಾಜರಾಗುಂತೆ ಇ.ಡಿ.ಯೂ ಸಮನ್ಸ್ ನೀಡಿತ್ತು. ಈ ಸಮನ್ಸ್ ಅನ್ವಯ ಸ್ನೇಹಮಯಿ ಕೃಷ್ಣ ಅವರು ಕೃಷ್ಣ ಶಾಂತಿನಗರದ ಇ.ಡಿ.ಕಚೇರಿಯಲ್ಲಿ ವಿಚಾರಣೆಯನ್ನು ಎದುರಿಸಿದ್ದರು. ಈ ವೇಳೆ ಇ.ಡಿ.ಅಧಿಕಾರಿಗಳಿಗೆ ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ 500 ಪುಟಗಳ ದಾಖಲೆಗಳನ್ನು ಸಹ ನೀಡಿದ್ದರು.
ಸ್ನೇಹಮಯಿ ಕೃಷ್ಣ ಅವರು ನೀಡಿದ ದಾಖಲೆಗಳನ್ನು ಇ.ಡಿ.ಅಧಿಕಾರಿಗಳು ತನಿಖೆ ನಡೆಸಿ ಇಸಿಐಆರ್ ದಾಖಲಿಸಿದ್ದರು. ಅಲ್ಲದೇ, ಈ ದಾಖಲೆಗಳ ಆಧಾರದ ಮೇಲೆ ಹೆಚ್ಚಿನ ತನಿಖೆಗಾಗಿ ಇಂದು ಮುಡಾ ಕಚೇರಿ ಹಾಗೂ ಭೂ ಮಾಲೀಕ ದೇವರಾಜು ಅವರ ಬೆಂಗಳೂರಿನ ಕೆಂಗೇರಿ ನಿವಾಸದ ಮೇಲೆ ದಾಳಿ ಮಾಡಿದ್ದಾರೆ.