ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಒತ್ತಡದಿಂದ ಲೋಕಾಯುಕ್ತ ಸಂಸ್ಥೆ ಮುಡಾ ಹಗರಣದಲ್ಲಿ ಕ್ಲೀನ್ಚಿಟ್ ನೀಡಿದೆ ಎಂದು ಕೃಷ್ಣರಾಜ ಕ್ಷೇತ್ರದ ಬಿಜೆಪಿ ಶಾಸಕ ಟಿ.ಎಸ್.ಶ್ರೀವತ್ಸ ಹೇಳಿದ್ದಾರೆ.
ಇಂದು (ಫೆ.20) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಾಯುಕ್ತಕ್ಕೆ ಎಲ್ಲಾ ದಾಖಲೆ ಕೊಟ್ಟಿದ್ದೇವೆ. ಆದರೂ ಈ ರೀತಿಯ ವರದಿ ಕೊಟ್ಟಿದ್ದಾರೆ. ಲೋಕಾಯುಕ್ತ ಇದೇ ರೀತಿ ವರದಿ ಕೊಡುತ್ತದೆ ಎಂದು ನಮಗೆ ಗೊತ್ತಿತ್ತು, ಈ ವರದಿಯನ್ನು ನಾವು ಖಂಡಿಸುತ್ತೇವೆ ಎಂದರು.
ಮುಂದುವರಿದು ಮಾತನಾಡುತ್ತಾ, ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಪಾತ್ರ ಏನು ಇಲ್ಲ ಎಂಬುದಾದರೆ 14 ಸೈಟ್ ಯಾಕೆ ವಾಪಸ್ ಕೊಟ್ಟರು?. ಸಚಿವ ಭೈರತಿ ಸುರೇಶ್ ತೆಗೆದುಕೊಂಡು ಹೋದ 141 ಫೈಲ್ನಲ್ಲಿ ಸಿದ್ದರಾಮಯ್ಯ ಅವರ ಕುಟುಂಬದ ಸಾಕ್ಷಿ ಇರಬಹುದು ಎಂದು ಹೇಳಿದರು.
ಜಿಲ್ಲಾ ಮಟ್ಟದ ಲೋಕಾಯುಕ್ತ ಅಧಿಕಾರಿ ನೀಡಿದ ವರದಿಯಿಂದ ಲೋಕಾಯುಕ್ತ ಸಂಸ್ಥೆಯ ಮಾನಮಾರ್ಯಾದೆ ಹೋಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.





