ಮೈಸೂರು: ಚುನಾವಣಾ ರಾಜಕೀಯಕ್ಕೆ ಸಹಕಾರ ಸಚಿವ ಕೆ.ಎನ್.ರಾಜಣ್ಣ ನಿವೃತ್ತಿ ಘೋಷಣೆ ಮಾಡಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನಗೆ ಈಗ 75 ವರ್ಷ ಆಗಿದೆ. ಆದ್ದರಿಂದ ನಾನು ಚುನಾವಣಾ ರಾಜಕೀಯದಿಂದ ದೂರ ಉಳಿಯುತ್ತೇನೆ. ಯುವಕರಿಗೆ ಅವಕಾಶ ಕಲ್ಪಿಸಿಕೊಡಬೇಕು. ಮುಂದಿನ ಚುನಾವಣೆಗೆ 78 ವರ್ಷ ಆಗಲಿದೆ. 78 ವಯಸ್ಸಿನ ನಂತರ ಮುಂದೆ ಗೆದ್ದು ಏನು ಕೆಲಸ ಮಾಡಲು ಸಾಧ್ಯ? ಎಂದು ಪ್ರಶ್ನೆ ಮಾಡಿದರು.
ಜನರಿಗೆ ನ್ಯಾಯ ಒದಗಿಸಲು ಸಾಧ್ಯವಾಗಲ್ಲ. ಆದ್ದರಿಂದ ಯುವಕರಿಗೆ ಹೆಚ್ಚು ಅವಕಾಶ ನೀಡಬೇಕು. ರಾಜಕೀಯದಿಂದ ನಿವೃತ್ತಿಯಾದರೂ ಸಕ್ರಿಯ ರಾಜಕಾರಣದಲ್ಲಿ ಹಾಗೂ ಸಹಕಾರಿ ಆಂದೋಲನದಲ್ಲಿ ಇರಲಿದ್ದೇನೆ. ಚುನಾವಣಾ ರಾಜಕೀಯದಿಂದ ದೂರ ಉಳಿಯುತ್ತೇನೆ ಅಷ್ಟೇ. ಪರಿಸ್ಥಿತಿ ಕೆಟ್ಟಿದೆ ಎಂದು ಹೇಳಲು ಆಗೋದಿಲ್ಲ. ಯುವಕರಿಗೆ ಮಾರ್ಗದರ್ಶನ ನೀಡಿ ಅವರಿಗೆ ಅವಕಾಶ ಕಲ್ಪಿಸಬೇಕಿದೆ. ಆದ್ದರಿಂದ ಈ ನಿರ್ಧಾರಕ್ಕೆ ಬಂದಿದ್ದೇನೆ ಎಂದು ಹೇಳಿದರು.
ಇನ್ನು ಮುಂದುವರಿದು ಮಾತನಾಡಿದ ಅವರು, ಮೈಸೂರು ಅಂದ್ರೆ ನನಗೆ ಬಹಳ ಇಷ್ಟ. ಮೈಸೂರು ವಿವಿಯಲ್ಲೇ ನಾನು ವ್ಯಾಸಂಗ ಮಾಡಿದ್ದೇನೆ. ಮೈಸೂರು ವಾತಾವರಣ ಅಹ್ಲಾದಕರವಾಗಿದೆ, ಈ ಬಗ್ಗೆ ಯಾರು ಹೇಳಬೇಕಿಲ್ಲ. ಉತ್ತಮ ವಾತಾವರಣದ ಮೂಲಕ ಸಾಂಸ್ಕೃತಿಕ ನಗರಿ ಮೈಸೂರು ಗೌರವ ಹಾಗೂ ಇತಿಹಾಸ ಹೊಂದಿದೆ ಎಂದು ಮೈಸೂರನ್ನು ಹಾಡಿ ಹೊಗಳಿದರು.





