ಮೈಸೂರು: ನಾಳೆ ಹಾಗೂ ನಾಡಿದ್ದು ಗೌರಿ-ಗಣೇಶ ಹಬ್ಬದ ಸಂಭ್ರಮ ಮನೆಮಾಡಲಿದೆ. ಈ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನ ಜನತೆ ಹಬ್ಬ ಆಚರಣೆಗೆ ಸಕಲ ರೀತಿಯಲ್ಲೂ ಸಜ್ಜಾಗಿದ್ದಾರೆ.
ಈಗಾಗಲೇ ಮಾರುಕಟ್ಟೆಯಲ್ಲಿ ವಿಘ್ನ ನಿವಾರಕನ ಮಣ್ಣಿನ ಮೂರ್ತಿಗಳು ಹಾಗೂ ಗೌರಿಯ ಮೂರ್ತಿಗಳು ಎಲ್ಲರ ಕಣ್ಮನ ಸೆಳೆಯುತ್ತಿದ್ದು, ಜನತೆ ಖರೀದಿ ಮಾಡುವ ಭರದಲ್ಲಿದ್ದಾರೆ.
ಇದರ ಜೊತೆಗೆ ವಿಧ ವಿಧದ ಹೂವು ಹಾಗೂ ಹಣ್ಣುಗಳನ್ನು ಕೂಡ ಕೊಂಡುಕೊಳ್ಳುತ್ತಿದ್ದು, ಮೈಸೂರಿನ ದೇವರಾಜ ಮಾರುಕಟ್ಟೆಯಲ್ಲಿ ಕಾಲಿಡಲು ಜಾಗವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.
ಸಂಜೆಯ ವೇಳೆಗೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಮಾರುಕಟ್ಟೆಗೆ ಬರಲಿದ್ದು, ವ್ಯಾಪಾರ ಬಲು ಜೋರಾಗಿಯೇ ನಡೆಯುತ್ತಿದೆ.
ಇನ್ನು ಗಣೇಶೋತ್ಸವಕ್ಕೆ ಪ್ರತಿ ಹಳ್ಳಿಗಳಲ್ಲೂ ಯುವಕರು ಸಜ್ಜಾಗುತ್ತಿದ್ದು, ಪೆಂಡಾಲ್ಗಳ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾರೆ.
ಈ ಬಾರಿ ಅದ್ಧೂರಿ ಹಾಗೂ ಪರಿಸರ ಸ್ನೇಹಿ ಗಣೇಶೋತ್ಸವ ಆಚರಿಸಲು ಸಾರ್ವಜನಿಕರು ಒಲವು ತೋರಿದ್ದಾರೆ ಎನ್ನಲಾಗುತ್ತಿದೆ.
ಈ ಬಾರಿ ವಿಶೇಷವೆಂದರೆ ಎಲ್ಲೆಡೆ ಕೂಡ ರಾಮನ ಭಂಗಿಯಲ್ಲಿ ನಿಂತಿರುವ ಗಣಪತಿ ಮೂರ್ತಿಗಳು ಎಲ್ಲರ ಗಮನ ಸೆಳೆಯುತ್ತಿರುವುದು ವಿಶೇಷವೆನಿಸಿದೆ.