ಮೈಸೂರು: ಗ್ಯಾರಂಟಿ ಯೋಜನೆಗಳಿಂದ ಬಡವರ, ಮಹಿಳೆಯರ ಆರ್ಥಿಕ, ಆಹಾರ ಭದ್ರತೆಯ ಕ್ರಾಂತಿಯಾಗಿದೆ ಎಂದು ಬಿಜೆಪಿ ನಾಯಕರ ವಿರೋಧಕ್ಕೆ ಕಾಂಗ್ರೆಸ್ನ ಎಐಸಿಸಿ ವಕ್ತಾರೆ ಭವ್ಯ ನರಸಿಂಹಮೂರ್ತಿ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಪಕ್ಷ ನಾಯಕ ಆರ್.ಅಶೋಕ್ ಅವರು ಸದನದಲ್ಲಿ ಕುಳಿತು ಸುಮ್ಮನೆ ಬಾಯಿಗೆ ಬಂದ ಹಾಗೆ ಮಾತನಾಡುವುದಲ್ಲ. ಜನ ಸಾಮಾನ್ಯರ ಹತ್ತಿರ ಬಂದು ನೋಡಿ ಗ್ಯಾರಂಟಿ ಯೋಜನೆಗಳಿಂದ ರಾಜ್ಯದಲ್ಲಿ ಕ್ರಾಂತಿಯೇ ಆಗುತ್ತಿದೆ. ಆರ್ಥಿಕ, ಸಾಮಾಜಿಕ, ಧಾರ್ಮಿಕ ಸಬಲೀಕರಣ ಆಗುತ್ತಿದೆ ಎಂದರು.
ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರ ಸಬಲೀಕರಣವಾಗುತ್ತಿದೆ. ಗೃಹಲಕ್ಷ್ಮೀ ಯೋಜನೆಯಡಿ ಮಹಿಳೆಯರಿಗೆ ನೀಡುವ 2 ಸಾವಿರ ರೂಪಾಯಿಗಳು ಅವಳ ಆರೋಗ್ಯ ನೋಡಿಕೊಳ್ಳಲು ಉಪಯೋಗವಾಗಿದೆ. ಈ ಯೋಜನೆಗಳಿಂದ ಆರ್ಥಿಕ ಭದ್ರತೆ, ಆಹಾರ ಭದ್ರತೆ ಸಿಕ್ಕಿದೆ ಎಂದು ತಿಳಿಸಿದರು.
ಪ್ರತಿಯೊಬ್ಬ ಫಲಾನುಭವಿಗಳಿಗೆ ಗ್ಯಾರಂಟಿ ಯೋಜನೆಗಳ ಅನುಕೂಲವಾಗಬೇಕೆಂದರೆ ಗ್ಯಾರಂಟಿ ಸಮಿತಿ ಬೇಕೆ ಬೇಕು. ಗ್ಯಾರಂಟಿ ಸಮಿತಿ ರಚನೆ ಆಗಿ ಒಂದೂವರೆ ವರ್ಷ ಆಗಿದೆ. ಈಗ ಯಾಕೆ ಬಿಜೆಪಿಯವರು ವಿರೋಧ ಮಾಡುತ್ತಿದ್ದಾರೆ ಎಂಬುದು ನಮಗೆ ತಿಳಿಯದು ಎಂದರು.





