ಮೈಸೂರು: ಮುಡಾ ಮುಖಾಂತರವೇ ಇ-ಖಾತೆ ಮಾಡಿಸಿಕೊಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸುತ್ತೇನೆ ಎಂದು ಮೈಸೂರು ಚೇಂಬರ್ ಆಫ್ ಕಾಮರ್ಸ್ ಮಾಜಿ ಅಧ್ಯಕ್ಷ ಸುಧಾಕರ್ ಎಸ್ ಶೆಟ್ಟಿ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸುಧಾಕರ್ ಶೆಟ್ಟಿ ಅವರು, ಮುಡಾ, ತನ್ನ ಅಡಿಯಲ್ಲಿದ್ದ ಎಲ್ಲಾ ಖಾಸಗಿ ಲೇಔಟ್ಗಳ ನಿವೇಶನಗಳ ಇ-ಖಾತೆ ಮಾಡಿಸಲು ಬೇರೆ ಬೇರ ಪಂಚಾಯಿತಿಗಳಿಗೆ ದಾಖಲೆಗಳನ್ನು ಕಳಿಸಿಕೊಟ್ಟಿದೆ. ಅಲ್ಲಿನ ಸ್ಥಳೀಯ ಪಂಚಾಯಿತಿ ಸದಸ್ಯರುಗಳು ಇದನ್ನು ತಮ್ಮ ಸ್ವಂತ ಆದಾಯದ ಮೂಲವನ್ನಾಗಿ ಬದಲಾವಣೆ ಮಾಡಿಕೊಳ್ಳುತ್ತಿದ್ದಾರೆ. ಇ-ಖಾತೆಯಿಂದ ಮುಡಾಗೆ ಹೋಗುತ್ತಿದ್ದ ಟ್ಯಾಕ್ಸ್ ಈಗ ಸ್ಥಳಿಯ ಪಂಚಾಯಿತಿಗಳಿಗೆ ಹೋಗಲಿದೆ ಎಂದು ಹೇಳಿದ್ದಾರೆ.
ಇ-ಖಾತೆ ನಂಬಿ ಬ್ಯಾಂಕ್ ಲೋನ್ ಅಥವಾ ಕಟ್ಟಡ ಕಟ್ಟುವುದಕ್ಕೆ ಹೋಗುವ ಲಕ್ಷಾಂತರ ನಿವೇಶನದಾರರಿಗೆ ಇ-ಖಾತೆ ಸಿಗಲು ತೊಂದರೆಯಾಗಲಿದೆ. ಪಂಚಾಯಿತಿ ಸದಸ್ಯರು ಕೇಳುವಷ್ಟು ಹಣ ಕೊಟ್ಟು ಇ-ಖಾತೆ ಮಾಡಿಸುವ ಪರಿಣಾಮ ಎದುರಾಗಿದೆ. ಆದ್ದರಿಂದ ಮುಡಾ ಮುಖಾಂತರವೇ ಇ-ಖಾತೆ ಮಾಡಿಸಿಕೊಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸುತ್ತೇನೆ ಎಂದು ತಿಳಿಸಿದ್ದಾರೆ.





