ಮೈಸೂರು: ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿಯಲ್ಲ ಎಂಬ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆಗೆ ರಾಜ್ಯ ಬಿಜೆಪಿ ವಕ್ತಾರ ಎಂ.ಜಿ.ಮಹೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮೈಸೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚಾಮುಂಡಿಬೆಟ್ಟ ಹಿಂದೂಗಳಿಗೆ ಸೇರಿದ್ದೋ ಅಲ್ಲವೋ ಎಂಬುದನ್ನು ಸಿಎಂ ಸಿದ್ದರಾಮಯ್ಯ ನಾಳೆ ಸಂಜೆಯೊಳಗೆ ಸ್ಪಷ್ಟನೆ ಕೊಡಬೇಕು. ಇಲ್ಲದಿದ್ದರೆ ಹೋರಾಟ ಅನಿವಾರ್ಯವಾಗಲಿದೆ. ಸಿದ್ದರಾಮಯ್ಯ ಸುತ್ತಮುತ್ತ ಇರುವ ಡೋಂಗಿಗಳನ್ನು ಮೆಚ್ಚಿಸುವ ಸಲುವಾಗಿ ದಸರಾ ಉದ್ಘಾಟನೆ ಮಾಡಲು ಬಾನು ಮುಷ್ತಾಕ್ರನ್ನು ಆಯ್ಕೆ ಮಾಡಿದ್ದೀರಾ? ಇಡೀ ದಸರಾ ಧಾರ್ಮಿಕ ಪರಂಪರೆಗೆ ಅನುಸಾರವಾಗಿ ನಡೆಯುತ್ತದೆ. ನಮಗೆ ಬಾನು ಮುಷ್ತಾಕ್ ಮೇಲೆ ದ್ವೇಷವಿಲ್ಲ. ಆದರೆ ಬಾನು ಮುಷ್ತಾಕ್ ಅರಿಶಿನ ಕುಂಕುಮದ ಬಣ್ಣವನ್ನು ಟೀಕೆ ಮಾಡಿದ್ದಾರೆ. ಅಲ್ಲದೇ ಇಸ್ಲಾಂನಲ್ಲಿ ಮೂರ್ತಿ ಪೂಜೆಗೆ ಅವಕಾಶವಿಲ್ಲ. ಈ ವಿಚಾರದಲ್ಲಿ ಅಗತ್ಯ ಬಿದ್ದರೆ ಹೋರಾಟ, ಬಲಿದಾನಕ್ಕೂ ಸಿದ್ದರಿದ್ದೇವೆ ಎಂದು ಎಚ್ಚರಿಕೆ ನೀಡಿದರು.





