Mysore
23
few clouds

Social Media

ಶನಿವಾರ, 07 ಫೆಬ್ರವರಿ 2026
Light
Dark

ಹಿರೀಕಾಟಿಯಲ್ಲಿ ಅಂಬೇಡ್ಕರ್‌ ಪ್ರತಿಮೆ ನಿರ್ಮಾಣ ಸಂಬಂಧ ಮುಖಂಡರೊಂದಿಗೆ ಚರ್ಚೆ

ಮೈಸೂರು: ಗುಂಡ್ಲುಪೇಟೆ ತಾಲ್ಲೂಕಿನ ಹಿರೀಕಾಟಿ ಗ್ರಾಮದಲ್ಲಿ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಕುರಿತು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರ ಆಪ್ತ ಸಹಾಯಕ ಗೋಪಾಲ್ ಹೊರೆಯಾಲ ಅವರು ಗ್ರಾಮದ ಮುಖಂಡರೊಂದಿಗೆ ಚರ್ಚೆ ನಡೆಸಿದರು.

ನಗರದ ದಟ್ಟಗಳ್ಳಿಯಲ್ಲಿರುವ ತಮ್ಮ ನಿವಾಸದಲ್ಲಿ ಹಿರೀಕಾಟಿ ಗ್ರಾಮದ ಯಜಮಾನರು, ಸಂಘ-ಸಂಸ್ಥೆಗಳ ಪ್ರಮುಖರೊಂದಿಗೆ ಸಮಾಲೋಚನೆ ನಡೆಸಿ, ಅತೀ ಶೀಘ್ರದಲ್ಲೇ ಪ್ರತಿಮೆ ನಿರ್ಮಾಣ ಮಾಡಿ ಉದ್ಘಾಟಿಸಲು ನಿರ್ಧರಿಸಲಾಯಿತು.

ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಅಂದಾಜು ೧೦ ಲಕ್ಷ ರೂ. ಮಂಟಪ, ಸುತ್ತಲು ಗ್ರಿಲ್ ಸೇರಿದಂತೆ ಇನ್ನಿತರೆ ಸಿವಿಲ್ ಕಾಮಗಾರಿಗೆ ಅಂದಾಜು ೧೦ ಲಕ್ಷ ರೂ. ಸೇರಿದಂತೆ ೨೦ ಲಕ್ಷ ರೂ. ವೆಚ್ಚವಾಗುತ್ತದೆ ಎಂದು ವಿವರಿಸಿದರು. ಬಳಿಕ, ಸಮಾಜ ಕಲ್ಯಾಣ ಸಚಿವರಿಗೆ ಗ್ರಾಮದ ಮುಖಂಡರ ಕೋರಿಕೆಯನ್ನು ತಿಳಿಸಿ, ಇಲಾಖೆಯಿಂದ ಅನುದಾನ ಬಿಡುಗಡೆ ಮಾಡಿಸುವ ಆಶ್ವಾಸನೆ ನೀಡಿದರು.

ಬಳಿಕ ಅಂಬೇಡ್ಕರ್ ಭವನ ಕಾಮಗಾರಿಯನ್ನು ಪೂರ್ಣಗೊಳಿಸಲು ಸಾಧ್ಯವಾಗದ ಕಾರಣ ಹೆಚ್ಚುವರಿಯಾಗಿ ೧೦ ಲಕ್ಷ ರೂ. ಅನುದಾನದ ಅಗತ್ಯವಿರುವುದನ್ನು ಪ್ರಸ್ತಾಪಿಸಲಾಯಿತು. ಇದಕ್ಕೆ ಸ್ಪಂದಿಸಿದ ಗೋಪಾಲ್ ಹೊರೆಯಾಲ ಅವರು, ಸಚಿವರೊಂದಿಗೆ ಮಾತುಕತೆ ನಡೆಸಿ ಬಿಡುಗಡೆ ಮಾಡಿಸಿಕೊಡಲಾಗುವುದು ಎಂದರು.

ಗ್ರಾಮಗಳಲ್ಲಿ ನಿರ್ಮಾಣವಾಗುವ ಪ್ರತಿಮೆಗಳು ಉದ್ಘಾಟನೆಯಾಗುವ ಜತೆಗೆ ಗ್ರಾಮದಲ್ಲಿ ಒಗ್ಗಟ್ಟು ಮೂಡಿಸುವಂತದಕ್ಕೆ ರೂಪುಗೊಳ್ಳಬೇಕು. ಅಂಬೇಡ್ಕರ್ ಅವರ ವಿಚಾರಗಳನ್ನು ಯುವಜನತೆಗೆ ತಿಳಿಸಬೇಕು. ಗ್ರಾಮದಲ್ಲಿ ಗುಂಪುಗಳಿಗೆ ಅವಕಾಶ ಕೊಡದೆ ಒಂದಾಗಿ ಸಾಗಬೇಕಿದೆ ಎಂದರು.

 

Tags:
error: Content is protected !!