ಮೈಸೂರು: ಕಾಂಗ್ರೆಸ್ ಸರ್ಕಾರ ನೀಡಿರುವ ಗ್ಯಾರಂಟಿ ಯೋಜನೆಗಳಿಂದ ಆರ್ಥಿಕ ಸ್ಥಿತಿ ಅಧೋಗತಿಗೆ ತಲುಪಿದ್ದು, ರಾಜ್ಯದಲ್ಲಿ ಅರಾಜಕತೆ ಸೃಷ್ಠಿಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.
ನಗರದ ಜಲದರ್ಶಿನಿ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 16 ಬಜೆಟ್ ಮಂಡಿಸಿರುವ ಸಿಎಂ ಸಿದ್ದರಾಮಯ್ಯ ತಮ್ಮ ವೈಯುಕ್ತಿಕ ರಾಜಕಾರಣಕ್ಕೋಸ್ಕರ ಈ ರೀತಿ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ ರಾಜ್ಯವನ್ನು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿಸಿದ್ದಾರೆ. ಈ ಯೋಜನೆಗಳಿಂದ ಕುಟುಂಬಗಳಲ್ಲಿ ಹೊಡಕು ಉಂಟಾಗಿದೆ. ಜೊತೆಗೆ ರಾಜ್ಯದ ಅಭಿವೃದ್ದಿ ಏನಾಗಿದೆ ಎಂಬುದರ ಕುರಿತು ಸಮೀಕ್ಷೆ ನಡೆಸಲಿ ಎಂದು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ನಿಮ್ಮನ್ನ ಆರ್ಥಿಕ ತಜ್ಞರು ಅಂತ ಬೇರೆ ಕರೆಯುತ್ತಾರೆ. ಇಷ್ಟೊಂದು ಸಾಲ ಮಾಡಿ ಫ್ರೀ ಕೊಡುವ ಅವಶ್ಯಕತೆ ಇರಲಿಲ್ಲ. ಪ್ರತಿಯೊಂದು ಯೋಜನೆಗಳಿಗೂ ಮಾನದಂಡಗಳಿರುತ್ತವೆ. ಆದರೆ, 2 ಸಾವಿರ ಹಣ ಕೊಡೋದಕ್ಕೆ ಯಾವುದೇ ಮಾನದಂಡವಿಲ್ಲ. ಸಾಲ ಮಾಡಿ ಫ್ರೀ ಕೊಡ್ತೀದೀರಾ. ಉಚಿತವಾಗಿ ಕೋಡೋದನ್ನ ಬಡವರಿಗೆ ಕೊಡಿ. ಎಲ್ಲರಿಗೂ ಕೊಡ್ತೇವೆ ಎನ್ನುವುದು ದಡ್ಡತನ. 76 ಸಾವಿರ ಕೋಟಿ ಕೊಟ್ಟಿರುವುದಕ್ಕೆ ವಾಪಾಸ್ ಏನ್ ಬಂದಿದೆ ಎಂದು ಪ್ರಶ್ನಿಸಿದರು.
ದುಡಿಯುವ ಕೈಗೆ ಉದ್ಯೋಗ ನೀಡಿ:
2013ರಲ್ಲಿ ಜನಪರ ಯೋಜನೆಗಳನ್ನು ನಾನು, ರಮೇಶ್ಕುಮಾರ್ ಹಾಗೂ ಸಿಎಂ ಇಬ್ರಾಹಿಂ ತಯಾರಿಸಿದ್ದೆವು. ಆ ಯೋಜನೆಗಳಿಂದ ಸಿದ್ದರಾಮಯ್ಯ ಅವರು ಉತ್ತಮ ಆಡಳಿತ ನೀಡಿದ್ದರು. ಈಗ ಅವರ ಆಡಳಿತ ಸರಿಯಾಗಿಲ್ಲ. ಯುವ ಜನರು ಉದ್ಯೋಗವಿಲ್ಲದೇ ಪರದಾಡುತ್ತಿದ್ದಾರೆ. ದುಡಿಯುವ ಕೈಗೆ ಕೆಲಸ ಕೊಡಿ ಎಂದು ಕಿಡಿಕಾರಿದರು.
ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದ ಜನತೆ ಬೈಯ್ಯುತ್ತಿದ್ದಾರೆ. ಈ ಪ್ರಕರಣದಲ್ಲಿ 48 ಶಾಸಕರಿದ್ದಾರೆ ಎಂದು ಕಾಂಗ್ರೆಸ್ ಸಚಿವರೇ ಹೇಳಿದ್ದಾರೆ. ಈ ಕುರಿತು ಎರಡು ಪಕ್ಷಗಳು ಧ್ವನಿ ಎತ್ತುವಲ್ಲಿ ವಿಫಲವಾಗಿವೆ. ಮಲ್ಲಿಕಾರ್ಜುನ ಖರ್ಗೆ ಹಾಗೂ ಡಿಕೆ ಶಿವಕುಮಾರ್ ಕಾಂಗ್ರೆಸ್ ಪಕ್ಷ ಕಟ್ಟಿರುವುದು. ಕಟ್ಟಿರೋ ಮನೆಯಲ್ಲಿ ನೀವು ಕೂತು ಆಡಳಿತ ನಡೆಸುತ್ತಿದ್ದೀರಾ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾಂಗ್ರೆಸ್ಗೆ ಕರೆತರದಿದ್ದರೆ ಹೇಗೆ ನೀವು ಸಿಎಂ ಅಗುತ್ತಿದ್ರಿ?
ನಾನು ಕಾಂಗ್ರೆಸ್ಗೆ ಕರೆದುಕೊಂಡು ಬರದಿದ್ದರೆ ನೀವು ಸಿಎಂ ಅಗುತ್ತಿದ್ರಾ? ನಾವು ನಡೆಸಿದ ಇಲಾಖೆಗಳನ್ನ ಯಶಸ್ವಿಯಾಗಿ ನಿಭಾಯಿಸಿದ್ದೇವೆ. ನೀವು ಏನ್ ಮಾಡಿದ್ದೀರಾ ಹೇಳಿ. ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಕ್ಕೆ ನಿಮ್ಮ ಕೊಡುಗೆ ಏನು. ರಾಜ್ಯದ ಖಜಾನೆ ಖಾಲಿ ಮಾಡುವುದೇ ನಿಮ್ಮ ಗುರಿ ಎಂದು ಕಿಡಿಕಾರಿದರು.





