Mysore
25
clear sky

Social Media

ಗುರುವಾರ, 05 ಮಾರ್ಚ್ 2026
Light
Dark

ಮೈಸೂರು ಮೃಗಾಲಯದಲ್ಲಿ ‘ಕೂಲ್ ಕೂಲ್’ ವಾತಾವರಣ: ಪ್ರಾಣಿಗಳ ರಕ್ಷಣೆಗೆ ವಿಶೇಷ ಕ್ರಮ

ಮೈಸೂರು: ​ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬೇಸಿಗೆಯ ಬಿಸಿಲು ದಿನದಿಂದ ದಿನಕ್ಕೆ ಏರುತ್ತಿದ್ದು, ಮನುಷ್ಯರಂತೆ ಮೃಗಾಲಯದ ವನ್ಯಜೀವಿಗಳೂ ಕೂಡ ತತ್ತರಿಸಿವೆ. ಪ್ರಾಣಿ-ಪಕ್ಷಿಗಳಿಗೆ ಹಿತಕರ ವಾತಾವರಣ ಕಲ್ಪಿಸಲು ಮೃಗಾಲಯದ ಸಿಬ್ಬಂದಿ ಸಮರೋಪಾದಿಯಲ್ಲಿ ಸಿದ್ಧತೆ ನಡೆಸಿದ್ದಾರೆ.

ಪ್ರಾಣಿಗಳ ದೇಹದ ಉಷ್ಣತೆಯನ್ನು ನಿಯಂತ್ರಿಸಲು ಮೃಗಾಲಯದಾದ್ಯಂತ 140ಕ್ಕೂ ಹೆಚ್ಚು ಸ್ಪ್ರಿಂಕ್ಲರ್ (ತುಂತುರು ಹನಿ ನೀರಾವರಿ) ವ್ಯವಸ್ಥೆಯನ್ನು ಅಳವಡಿಸಲಾಗಿದೆ.

​ಸ್ಪ್ರಿಂಕ್ಲರ್‌ಗಳ ಮೂಲಕ ಕೃತಕ ಮಳೆ ಸುರಿಸಲಾಗುತ್ತಿದ್ದು, ಆನೆ, ಹುಲಿ, ಚಿರತೆ ಮತ್ತು ಜಿಂಕೆಗಳು ನೀರಿನಲ್ಲಿ ಮೈಯೊಡ್ಡಿ ನಿಂತು ತಂಪನ್ನು ಆನಂದಿಸುತ್ತಿವೆ. ಪ್ರಾಣಿಗಳ ಆವರಣಗಳಲ್ಲಿ ಹಸಿರು ಪರದೆ ಮತ್ತು ತಂಪಾದ ಹುಲ್ಲಿನ ಹೊದಿಕೆಗಳನ್ನು ಹಾಕುವ ಮೂಲಕ ನೇರ ಸೂರ್ಯನ ಬೆಳಕು ಬೀಳದಂತೆ ವ್ಯವಸ್ಥೆ ಮಾಡಲಾಗಿದೆ.

​ಬೇಸಿಗೆಯ ತಾಪಕ್ಕೆ ತಕ್ಕಂತೆ ಪ್ರಾಣಿಗಳ ಆಹಾರದಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ, ಚಿಂಪಾಂಜಿ, ಗೊರಿಲ್ಲಾ ಮತ್ತು ಕೋತಿಗಳಿಗೆ ಐಸ್ ತುಂಡುಗಳೊಂದಿಗೆ ಮಿಶ್ರಣ ಮಾಡಿದ ಕಲ್ಲಂಗಡಿ, ದ್ರಾಕ್ಷಿ ಮತ್ತು ವಿವಿಧ ಹಣ್ಣುಗಳನ್ನು ನೀಡಲಾಗುತ್ತಿದೆ.

​ನಿರ್ಜಲೀಕರಣ (Dehydration) ತಡೆಯಲು ಎಳೆನೀರು ಮತ್ತು ಗ್ಲೂಕೋಸ್ ಬೆರೆಸಿದ ನೀರನ್ನು ನೀಡಲಾಗುತ್ತಿದೆ. ಕರಡಿ ಮತ್ತು ಇತರ ಪ್ರಾಣಿಗಳಿಗೆ ನೀರಿನಂಶ ಹೆಚ್ಚಿರುವ ಸೌತೆಕಾಯಿ ಮತ್ತು ಸೊಪ್ಪುಗಳನ್ನು ಹೆಚ್ಚಾಗಿ ಪೂರೈಸಲಾಗುತ್ತಿದೆ.

ಜಿಂಕೆ, ಘೆಂಡಾಮೃಗ, ಜಿರಾಫೆ ಮತ್ತು ಕಾಡುಕೋಣಗಳಂತಹ ಪ್ರಾಣಿಗಳಿಗಾಗಿ ಕೃತಕವಾಗಿ ಕೆಸರುಮಯವಾದ ಕಿರು ಕಟ್ಟೆಗಳನ್ನು ನಿರ್ಮಿಸಲಾಗಿದೆ. ಪ್ರಾಣಿಗಳು ಈ ಕೆಸರಿನಲ್ಲಿ ಹೊರಳಾಡುವ ಮೂಲಕ ತಮ್ಮ ಚರ್ಮದ ತಾಪಮಾನವನ್ನು ಸಮತೋಲನದಲ್ಲಿಟ್ಟುಕೊಳ್ಳುತ್ತವೆ.​ ಆನೆಗಳಿಗೆ ದಿನಕ್ಕೆ ಮೂರ್ನಾಲ್ಕು ಬಾರಿ ನೀರಿನ ಸ್ನಾನ ಮಾಡಿಸಲಾಗುತ್ತಿದೆ. ತಂಪು ವಾತಾವರಣದಲ್ಲಿ ವಾಸಿಸುವ ಹಿಮಾಲಯದ ಕರಡಿಗಳು ಅಥವಾ ವಿದೇಶಿ ಪಕ್ಷಿಗಳ ಮೇಲೆ ತೀವ್ರ ನಿಗಾ ವಹಿಸಿದ್ದಾರೆ.

​ಪ್ರತಿ ಪ್ರಾಣಿಯ ಚಲನವಲನ ಮತ್ತು ಆಹಾರ ಸೇವನೆಯನ್ನು ಗಮನಿಸಲು ಪ್ರತ್ಯೇಕ ಸಿಬ್ಬಂದಿಯನ್ನು ನೇಮಿಸಲಾಗಿದೆ. ವೈದ್ಯಕೀಯ ತಂಡವು ಪ್ರಾಣಿಗಳ ದೇಹದ ತಾಪಮಾನಕ್ಕೆ ತಕ್ಕಂತೆ ಕಾಲಕಾಲಕ್ಕೆ ಪೋಷಕಾಂಶಗಳ ಪೂರೈಕೆಯನ್ನು ಮಾಡಲಾಗುವುದು.

​ಒಟ್ಟಾರೆ ಮೈಸೂರು ಮೃಗಾಲಯವು ಪ್ರಾಣಿಗಳಿಗೆ ಬೇಸಿಗೆಯ ಬೇಗೆ ತಟ್ಟದಂತೆ ಸರ್ವ ಸನ್ನದ್ಧವಾಗಿದೆ. ಪ್ರವಾಸಿಗರಿಗೂ ಕೂಡ ಕುಡಿಯುವ ನೀರಿನ ವ್ಯವಸ್ಥೆ ಮತ್ತು ನೆರಳಿನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕಿ ಅನುಷಾ ತಿಳಿಸಿದ್ದಾರೆ.

Tags:
error: Content is protected !!