Mysore
29
scattered clouds

Social Media

ಮಂಗಳವಾರ, 17 ಫೆಬ್ರವರಿ 2026
Light
Dark

ಮಕ್ಕಳ ರಕ್ಷಣೆ ಸರ್ಕಾರಿ ಇಲಾಖೆಗಳ ಕರ್ತವ್ಯ: ಬಿ.ಜಿ.ದಿನೇಶ್‌ ಕುಮಾರ್‌

ಮೈಸೂರು: ಮಕ್ಕಳ ರಕ್ಷಣೆ ಕೇವಲ ಪೊಲೀಸ್ ಇಲಾಖೆ ಮತ್ತು ಮಕ್ಕಳ ರಕ್ಷಣಾ ಇಲಾಖೆಯ ಜವಾಬ್ದಾರಿಯಲ್ಲ. ಪ್ರತಿ ಸರ್ಕಾರಿ ಇಲಾಖೆಯ ಸಾಮೂಹಿಕ ಕರ್ತವ್ಯ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಜಿ.ದಿನೇಶ್ ಕುಮಾರ್ ಹೇಳಿದರು.

ನಗರದ ಕರಾಮುವಿವಿಯ ಕಾವೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಶಿಕ್ಷಣ ಹಕ್ಕು ಕಾಯಿದೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ, ಪೋಕ್ಸೊ ಕಾಯ್ದೆ ಮತ್ತು ಭಿಕ್ಷಾಟನೆ ನಿರ್ಮೂಲನೆ ಅನುಷ್ಠಾನಗೊಳಿಸುವಲ್ಲಿ ಅಧಿಕಾರಿಗಳ ಪಾತ್ರ ಕುರಿತು ಮೈಸೂರು ವಿಭಾಗೀಯ ಎಲ್ಲ ಜಿಲ್ಲೆಗಳ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ನಮ್ಮಲ್ಲಿರುವ ಕಾನೂನು ಮಾನವೀಯ ಮೌಲ್ಯಗಳಿಂದ ಕೂಡಿದೆ. ಆದರೆ, ಡಾ.ಬಿ.ಆರ್.ಅಂಬೇಡ್ಕರ್ ಹೇಳಿರುವಂತೆ ಕಾನೂನುಗಳನ್ನು ಅನುಷ್ಠಾನ ಮಾಡುವವರ ಇಚ್ಛಾಶಕ್ತಿಯ ಮೇಲೆ ನಿಂತಿದೆ. ಬಾಲ್ಯ ವಿವಾಹ, ಭಿಕ್ಷಾಟನೆ, ಲೈಗಿಂಕ ದೌರ್ಜನ್ಯದಂತಹ ಘಟನೆಗಳು ನಡೆಯದಂತೆ ಪ್ರತಿಯೊಬ್ಬರು ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದು ಹೇಳಿದರು.

ಅಧಿಕಾರಿಗಳು ಕೇವಲ ಒಂದು ದಿನ ಅಥವಾ ಕರೆ ಬಂದಾಗ ಮಾತ್ರ ಕಾರ್ಯಾಚರಣೆ ನಡೆಸಬಾರದು. ದಿನ ನಿತ್ಯ ಕಾರ್ಯಾಚರಣೆಯಲ್ಲಿ ತೊಡಗಿಕೊಳ್ಳಬೇಕು. ಪೊಲೀಸ್ ಇಲಾಖೆ, ಮಕ್ಕಳ ಕಲ್ಯಾಣ ಇಲಾಖೆ ಮಾತ್ರ ಮಕ್ಕಳ ರಕ್ಷಣೆ ಜವಾಬ್ದಾರಿ ಎಂದುಕೊಳ್ಳಬಾರದು. ಮಕ್ಕಳ ರಕ್ಷಣೆ ಎಲ್ಲ ಇಲಾಖೆಗಳ ಸಾಮೂಹಿಕ ಕರ್ತವ್ಯ ಎಂದು ಹೇಳಿದರು.

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ನಾಗಣ್ಣ ಗೌಡ, ಬಾಲ್ಯವಿವಾಹ ತಡೆಯಲು ಗ್ರಾಮ ಲೆಕ್ಕಿಗ, ಶಾಲಾ ಮುಖ್ಯ ಶಿಕ್ಷಕ ಸೇರಿದಂತೆ ನಾನಾ ಇಲಾಖೆಗಳ ಅಧಿಕಾರಿಗಳಿಗೆ ಅಧಿಕಾರ ನೀಡಿದರೂ, ಬಾಲ್ಯವಿವಾಹಗಳು ನಡೆಯುತ್ತಿವೆ. ಮಕ್ಕಳ ದೌರ್ಜನ್ಯ ಪ್ರಕರಣಗಳನ್ನು ತಡೆಯಲು ತಳಮಟ್ಟದಿಂದ ತಳ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

ಪ್ರಾದೇಶಿಕ ಆಯುಕ್ತ ಡಿ.ಎಸ್.ರಮೇಶ್ ವಾತನಾಡಿ, ಸಾರ್ವಜನಿಕರಲ್ಲಿ ನನ್ನಂತೆ ಸಮಾಜ ಎಂಬ ಪರಿಕಲ್ಪನೆ ಬರದಿದ್ದರೆ ಸುಧಾರಣೆ ಕಷ್ಟ. ಪ್ರಸ್ತುತ ಮಕ್ಕಳ ಭಾವನೆಯನ್ನು ಪೋಷಕರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಮಕ್ಕಳ ಭಾವನೆಗೆ ಸ್ಪಂದಿಸಿದಾಗ ಮಾತ್ರ ಮಕ್ಕಳ ಹಕ್ಕುಗಳ ರಕ್ಷಣೆ ಆಗುತ್ತದೆ. ಹೀಗಾಗಿ, ಪೋಷಕರು ಮಕ್ಕಳೊಂದಿಗೆ ಬೆರೆಯಬೇಕು. ಮಕ್ಕಳ ಹಕ್ಕುಗಳು, ಮಾನವ ಹಕ್ಕುಗಳು ರಕ್ಷಿಸಿದರೇ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು.

ಕಾರ್ಯಾಗಾರ ಉದ್ಘಾಟಿಸಿದ ರಾಜ್ಯ ಮುಕ್ತ ವಿವಿ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ಮಾತನಾಡಿ, ಮಕ್ಕಳ ಸಂಬಂಧಿಸಿದಂತ ಕಾನೂನುಗಳನ್ನು ಅನುಷ್ಠಾನ ಮಾಡಬೇಕಿದೆ. ಈ ನಿಟ್ಟಿನಲ್ಲಿ ಹೆತ್ತವರು, ಶಿಕ್ಷಕರ ಜವಾಬ್ದಾರಿ ಹೆಚ್ಚಿದೆ. ಮಕ್ಕಳ ಮೇಲೆ ಪೋಷಕರು ನಿಗಾವಹಿಸಬೇಕು. ಹಾಗೆಯೇ, ಶಿಕ್ಷಕರು ಮಕ್ಕಳ ಮೇಲೆ ಕಣ್ಣು ಇರಿಸಬೇಕು. ನಂತರ ಮಕ್ಕಳ ಮೇಲಿನ ದೌರ್ಜನ್ಯಗಳು ನಡೆದಾಗ ಕಾನೂನು ಚೌಕಟ್ಟಿನಲ್ಲಿ ಕ್ರಮವಹಿಸಲು ವಿವಿಧ ಇಲಾಖೆಗಳಿವೆ ಎಂದರು.

ಜಿಪಂ ಉಪ ಕಾರ್ಯದರ್ಶಿ ಸವಿತಾ, ಡಿಸಿಪಿ ಎಸ್. ಜಾಹ್ನವಿ, ರಾಜ್ಯ ಮುಕ್ತ ವಿವಿ ಕುಲಸಚಿವ ಪ್ರೊ.ಕೆ.ಬಿ. ಪ್ರವೀಣ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಎಸ್.ಮಂಜು, ವೆಂಕಟೇಶ್, ಅಪರ್ಣಾ ಎಂ. ಕೊಳ್ಳಾ, ನ್ಯೂಟ್ರಿಷನ್ ಸೊಸೈಟಿ ಆಫ್ ಇಂಡಿಯಾ ಮೈಸೂರು ಚಾಪ್ಟರ್ ಅಧ್ಯಕ್ಷೆ ಡಾ.ಸಿ. ಅನಿತಾ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಎನ್.ಟಿ. ಯೋಗೇಶ ಮೊದಲಾದವರು ಇದ್ದರು.

Tags:
error: Content is protected !!