Mysore
20
overcast clouds
Light
Dark

ಹೆಣ್ಣುಮಕ್ಕಳನ್ನು ಕಾಲೇಜಿಗೆ ಕರೆತನ್ನಿ: ಶಾಸಕ ಕೆ.ಹರಿಶ್‌ಗೌಡ

ಪಾದಯಾತ್ರೆ ಬಳಿಕ ನಡೆದ ಜನಸಂಪರ್ಕ ಸಭೆಯಲ್ಲಿ ಶಾಸಕ ಕೆ. ಹರೀಶ್ ಗೌಡ ಸಲಹೆ

ಕುಂಬಾರಕೊಪ್ಪಲು ಸರಕಾರಿ ಪಿಯು ಕಾಲೇಜಿನ 2 ಕೊಠಡಿ ಉದ್ಘಾಟನೆ

ಮೈಸೂರು: ಕುಂಬಾರಕೊಪ್ಪಲಿನ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರವೇಶಾತಿ ಹೆಚ್ಚಿಸಲು ವಿಶೇಷ ನೋಂದಣಿ ಅಭಿಯಾನ ಆರಂಭಿಸಿ, ಮುಖ್ಯವಾಗಿ ಹೆಣ್ಣುಮಕ್ಕಳನ್ನು ಕಾಲೇಜಿಗೆ ಸೇರಿಸಿ ಎಂದು ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕ ಕೆ. ಹರೀಶ್ ಗೌಡ ಸಲಹೆ ನೀಡಿದರು.

ಮೈಸೂರು ಮಹಾನಗರ ಪಾಲಿಕೆ ವಾರ್ಡ್ ನಂ. 4 ರ ಹೆಬ್ಬಾಳು ಲೋಕನಾಯಕ ನಗರದಲ್ಲಿ ಸೋಮವಾರ ಪಾದಯಾತ್ರೆ ನಡೆಸಿ ಕುಂದುಕೊರತೆಗಳನ್ನು ಆಲಿಸಿ ಅಹವಾಲು ಸ್ವೀಕರಿಸಿದ ಬಳಿಕ ಕುಂಬಾರಕೊಪ್ಪಲು ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಎರಡು ತರಗತಿ ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡಿದರು.

ಕುಂಬಾರಕೊಪ್ಪಲಿನ ಜನತೆ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಲೆಂದು ಈ ಕಾಲೇಜಿಗೆ ಜಾಗ ನೀಡಿದ್ದಾರೆ. ಕಲೆ, ವಾಣಿಜ್ಯ ವಿಷಯದಲ್ಲಿ ಪಿಯುಸಿ ಅಧ್ಯಯನಕ್ಕೆ ಅವಕಾಶವಿದೆ. ಅಂತೆಯೆ ಈ ಕಾಲೇಜಿನ ಸುತ್ತ ಏಳು ವಾರ್ಡ್ಗಳಿದ್ದು ಕೇವಲ 65 ವಿದ್ಯಾರ್ಥಿಗಳು ಮಾತ್ರ ಪ್ರವೇಶಾತಿ ಪಡೆದಿರುವುದು ಬೇಸರದ ಸಂಗತಿ. ನಾನು ಕಾಲೇಜಿಗೆ ಬೇಕಾದ ಎಲ್ಲಾ ರೀತಿ ಸೌಲಭ್ಯಗಳನ್ನು ನೀಡಲು ಸಿದ್ದನಿದ್ದೇನೆ. ಕಾಲೇಜಿನ ಸಿಬ್ಬಂದಿಗಳು ವಿಶೇಷ ಅಭಿಯಾನದ ಮೂಲಕ ಕಾಲೇಜು ವ್ಯಾಪ್ತಿಯಲ್ಲಿರುವ ಪ್ರೌಢಶಾಲೆಗಳಿಗೆ ಭೇಟಿ ನೀಡಿ ಈ ಕಾಲೇಜಿಗೆ ಪ್ರವೇಶಾತಿ ಪಡೆಯುವಂತೆ ಮನವೊಲಿಸಬೇಕು. ಈ ನಿಟ್ವಿನಲಿ ವಿದ್ಯಾರ್ಥಿಗಳ ಸಂಖ್ಯೆಯನ್ನು 600 ಕ್ಕೆ ಏರಿಕೆ ಮಾಡಬೇಕೆಂದು ಸಲಹೆ ನೀಡಿದರು.

ಗ್ರಾಮೀಣ ಪ್ರದೇಶದ ಹೆಣ್ಣುಮಕ್ಕಳು ನಗರ ಪ್ರದೇಶದ ಕಾಲೇಜಿನಲ್ಲಿ ಸೇರಿಕೊಂಡು ಅಧ್ಯಯನ ಮಾಡಲು ಉಳಿದುಕೊಳ್ಳಲು ಜಾಗವಿಲ್ಲದೇ ಶಿಕ್ಷಣ ಮೊಟಕುಗೊಳಿಸುತ್ತಿದ್ದಾರೆ. ಇದರಿಂದ ಹೆಣ್ಣುಮಕ್ಕಳು ಅವಕಾಶ ವಂಚಿತರಾಗುತ್ತಾರೆ. ಆದರೆ ನಗರ ಪ್ರದೇಶದ ಮಕ್ಕಳಿಗೆ ಈ ರೀತಿ ಆಗಬಾರದು ಆ ನಿಟ್ಟಿನಲ್ಲಿ ಹೆಣ್ಣು ಮಕ್ಕಳು ಎಸ್ಎಸ್ಎಲ್ಸಿ ನಂತರ ಶಿಕ್ಷಣ ಮೊಟಕುಗೊಳಿಸುವುದನ್ನು ತಪ್ಪಿಸಿ ಎಂದು ತಿಳಿಸಿದರು.

ಕುಂಬಾರಕೊಪ್ಪಲು ಸರಕಾರಿ ಪದವಿಪೂರ್ವ ಕಾಲೇಜಿಗೆ ಕೊಳವೆ ಬಾವಿ ಮಂಜೂರಾಗಿದೆ. ಶಾಸಕರ ಅನುದಾನದಲ್ಲಿಯೇ ರಂಗಮಂದಿರ ಕಟ್ಟಿಸಿಕೊಡುತ್ತೇವೆ. ಮಾತ್ರವಲ್ಲದೇ ಹೆಣ್ಣುಮಕ್ಕಳಿಗೆ ಶೌಚಾಲಯ ನಿರ್ಮಿಸಿಕೊಡುವುದಾಗಿ ಶಾಸಕರು ಭರವಸೆ ನೀಡಿದರು.

ಪಾಲಿಕೆ ಮಾಜಿ ಸದಸ್ಯ ಪೈಲ್ವಾನ್ ಶ್ರೀನಿವಾಸ್, ಡಿಡಿಪಿಯು ಎಂ.ಮರಿಸ್ವಾಮಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಾದ ರವಿ ಮಂಚೇಗೌಡನಕೊಪ್ಪಲು, ಮುಖಂಡರಾದ ನಾಗಣ್ಣ, ಮಹೇಶ್, ಅನೀಲ್, ಪ್ರಾಂಶುಪಾಲ ಶಿವಕುಮಾರ್ ಹಾಗೂ ಇತರರು ಇದ್ದರು.