ಮೈಸೂರು: ಬಳ್ಳಾರಿ ಕೇಸನ್ನು ಸಿಬಿಐಗೆ ಕೊಡಿ ಎನ್ನುವ ಬಿಜೆಪಿ ನಾಯಕರ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಬಿಜೆಪಿ ನಾಯಕರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಮೊದಲು ಯಾವ ಯಾವ ಕೇಸ್ ಸಿಬಿಐ ಕೊಟ್ಟಿದ್ದಾರೆ ಹೇಳಲಿ. ಈ ಹಿಂದೆ ಅವರು ಅಧಿಕಾರಿಗಳಿದ್ದಾಗ ಯಾವ ಕೇಸ್ ಕೊಟ್ಟಿದ್ರು. ಅವರಿಗೆ ಯಾವ ನೈತಿಕ ಹಕ್ಕಿದೆ. ಈ ಹಿಂದೆ ನಾವು ಡಿಮ್ಯಾಂಡ್ ಮಾಡಿದ್ವಿ. ಒಂದು ಕೇಸ್ ಕೂಡ ಸಿಬಿಐಗೆ ಕೊಡಲಿಲ್ಲ. ಈ ಹಿಂದೆ ನಾನು 8 ಕೇಸ್ ಸಿಬಿಐ ಕೊಟ್ಟಿದ್ದೇನೆ. ಜಾರ್ಜ್ ಕೇಸ್, ಸೌಜನ್ಯ ಕೇಸ್ ಸಿಬಿಐಗೆ ಕೊಟ್ಟೆ. ಬಿಜೆಪಿ ಯಾವ ಕೇಸ್ ಕೊಟ್ಟಿದ್ದಾರೆ? ಬಿಜೆಪಿ ನಾಯಕರಿಗೆ ಸಂಸ್ಕೃತಿ ಇಲ್ಲ. ಏಕವಚನ ಬಳಸಿ ಮಾತನಾಡುತ್ತಾರೆ. ಈ ಹಿಂದೆ ರೆಡ್ಡಿಗೆ ಬಳ್ಳಾರಿಗೆ ಯಾಕೆ ಬರಬೇಡಿ ಅಂತ ಹೇಳಿತ್ತು. ರಿಪಬ್ಲಿಕ್ ಆಫ್ ಬಳ್ಳಾರಿ ಯಾವಾಗ ಆಯ್ತು? ಸಂತೋಷ್ ಹೆಗ್ಡೆ ಏನು ವರದಿ ಕೊಟ್ಟಿದ್ರು. ಬಿಜೆಪಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ. ಸರ್ವಾಧಿಕಾರದಲ್ಲಿ ನಂಬಿಕೆಯಿದೆ ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಇನ್ನು ಬಿಜೆಪಿ ಅಧಿಕಾರದಲ್ಲಿದ್ದಾಗ ನಮಗೆ ಪ್ರಚಾರಕ್ಕೆ ಅವಕಾಶ ಕೊಟ್ಟಿಲ್ಲ. ಈ ಹಿಂದೆ ನನಗೆ, ಸಿ.ಎಂ ಇಬ್ರಾಹಿಂಗೆ ಪ್ರಚಾರ ಮಾಡಲು ಅವಕಾಶ ಕೊಟ್ಟಿರಲಿಲ್ಲ. ಒಂದು ಕುರುಬರ ದೇವಸ್ಥಾನದಲ್ಲಿ ಪ್ರಚಾರ ಮಾಡಿದ್ದೆ. ಗೂಂಡಾಗಿರಿ ಮಾಡ್ತಾ ಇದ್ರು ಅವರಿಂದ ನಾವು ಪಾಠ ಕಲಿಬೇಕಾ? ಎಂದು ಬಿಜೆಪಿ ಹಾಗೂ ರೆಡ್ಡಿ ಬ್ರದರ್ಸ್ ವಿರುದ್ಧ ಕಿಡಿಕಾರಿದರು.
ಇನ್ನು ವಿಷೇಶ ಜಂಟಿ ಅಧಿವೇಶನಕ್ಕೆ ಬಿಜೆಪಿ ವಿರೋಧ ಮಾಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಅಸೆಂಬ್ಲಿ ಶುರು ಆದಾಗ ಜಂಟಿ ಅಧಿವೇಶನ ಮಾಡೋದು ಪ್ರಕ್ರಿಯೆ. ಬಿಜೆಪಿಯವರು ನರೇಗಾ ಹಾಳು ಮಾಡಲು ಹೊರಟಿದ್ದಾರೆ. ಅದಕ್ಕಾಗಿ ವಿಶೇಷ ಅಧಿವೇಶನ ಕರೆಯುತ್ತಿದ್ದೇವೆ. ಅಧಿವೇಶನದಲ್ಲಿ ಎಲ್ಲರ ಜೊತೆ ಚರ್ಚೆ ಮಾಡುತ್ತೇನೆ. ಜಿ ರಾಮ್ ಜಿ ಮಾಡಿ ಬಡವರನ್ನು ಹಾಳು ಮಾಡಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಅಬಕಾರಿ ಡಿಸಿ ಮೇಲೆ ಲೋಕಾಯುಕ್ತ ರೇಡ್ ಆಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಅಬಕಾರಿ ಸಚಿವರ ಹೆಸರು ಇರುವ ಬಗ್ಗೆ ಗೊತ್ತಿಲ್ಲ. ಲೋಕಾಯುಕ್ತ ಅವರ ಕೆಲಸ ಮಾಡಲಿ ಎಂದರು.





