ಮೈಸೂರು: ಹಸಿರುಲೋಕ ಸಂಘಟನೆ ವತಿಯಿಂದ ಪದ್ಮಶ್ರೀ ಪುರಸ್ಕೃತೆ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅವರ 113ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಕೃಷ್ಣಮೂರ್ತಿಪುರಂ ಬಡಾವಣೆಯ ಗುಬ್ಬಚ್ಚಿ ಶಾಲೆಯಲ್ಲಿ ಮನೆಗೊಂದು ಗಿಡ ಆಯುರ್ವೇದ ಸಸಿ ವಿತರಣೆ ಅಭಿಯಾನ ನಡೆಸಲಾಯಿತು.
ಲಕ್ಷ್ಮಿಪುರಂ ಪೋಲಿಸ್ ಠಾಣೆ ಆರಕ್ಷಕ ವೃತ್ತ ನಿರೀಕ್ಷಕರಾದ ರವಿಶಂಕರ್ ರವರು ಶಾಲಾ ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ಆಯುರ್ವೇದ ಗಿಡಗಳನ್ನ ವಿತರಿಸಿ ಚಾಲನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ದೇಶ ಸಮೃದ್ಧಿಯಾಗಬೇಕಾದರೆ ಸಣ್ಣ ವಯಸ್ಸಿನಲ್ಲೇ ಮಕ್ಕಳು ಉತ್ತಮ ಶಿಕ್ಷಣ ಪಡೆದು ಮೌಲ್ಯಯುತವಾದ ಜೀವನ ನಡೆಸಬೇಕು ಮತ್ತು ಮನೆಗೊಂದು ಗಿಡ ನೆಟ್ಟು ಪೋಷಿಸುವಂತೆ ನಾಗರೀಕರು ಮುಂದಾಗಬೇಕು ಎಂದು ಅಭಿಪ್ರಾಯಪಟ್ಟರು.
ಇತ್ತೀಚಿನ ದಿನಗಳಲ್ಲಿ ತಾಪಮಾನ ಹೆಚ್ಚಾಗುತ್ತಿದೆ, ದುಷ್ಟಟ ಮತ್ತು ವ್ಯಸನದಿಂದ ಆಕರ್ಷಿತವಾಗದೇ ಆರೋಗ್ಯಕರ ಸಮಾಜ ನಿರ್ಮಾಣ ಮಾಡುವತ್ತ ಯುವಪೀಳಿಗೆ ಮುಂದಾಗಬೇಕು ಎಂದು ಕರೆ ನೀಡಿದರು.
ಕರ್ನಾಟಕ ಮೃಗಾಲಯ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಲ್. ಆರ್ ಮಹದೇವಸ್ವಾಮಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯರಿಗೆ ಜನ್ಮ ಕೊಟ್ಟ ತಾಯಿಯ ಹೆಸರಲ್ಲಿ ಒಂದು ಗಿಡ ನೆಡುವಂತೆ ಮನವಿ ಮಾಡಿದ್ದಾರೆ, ಅದರಂತೆಯೇ ಪದ್ಮಶ್ರೀ ಪುರಸ್ಕೃತೆ ಸಾಲು ಮರದ ತಿಮಕ್ಕ ರವರ 113ನೇ ವರ್ಷದ ಹುಟ್ಟುಹಬ್ಬ ಮನೆಗೊಂದು ಗಿಡ ಸಸಿ ವಿತರಣೆ ಮೂಲಕ ಆಯೋಜಿಸುತ್ತಿರುವುದು ಶ್ಲಾಘನೀಯವಾದ ಕೆಲಸವಾಗಿದೆ ಎಂದರು.
ಮಹಾರಾಜರ ಕಾಲದಲ್ಲಿ ನೆಟ್ಟ ಮರ ಗಿಡಗಳೇ ಇಂದು ದೊಡ್ಡದಾಗಿ ಬೆಳೆದಿದೆ. ಮೈಸೂರಿಗೆ ಪಾರಂಪರಿಕ ನಗರಿ ಎಂಬ ಹೆಸರು ಬರಲು ಇದು ಒಂದು ಕಾರಣ. ಇಂದಿಗೂ ಗುಬ್ಬಚ್ಚಿ ಶಾಲೆಯಲ್ಲಿ ಕಾಣಸಿಗುವ 115ವರ್ಷದ ಹಿಂದಿನ ಬಾಗೇಮರ ನೂರಾರು ವರ್ಷಗಳಿಂದ ಲಕ್ಷಾಂತರ ವಿದ್ಯಾರ್ಥಿಗಳಿಗೆ ನಿಸ್ವಾರ್ಥವಾಗಿ ನೆರಳು ಆಶ್ರಯ ನೀಡಿದೆ ಎಂದು ಹೇಳಿದರು.
ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರಾದ ನಾರಾಯಣ ಗೌಡ ಮಾತನಾಡಿ, ಮನುಷ್ಯನಿಗೆ ಉತ್ತಮ ಆರೋಗ್ಯ ಸಿಗಬೇಕಾದರೆ ಸೊಪ್ಪು ತರಕಾರಿ ಪೌಷ್ಟಿಕಾಂಶವುಳ್ಳ ಆಹಾರ ಸೇವಿಸಬೇಕು ಹಾಗಾಗಿ ಮನೆಗಳ ತಾರಸಿಯ ಮೇಲೆ ಮತ್ತು ಮನೆಗಳ ಇಕ್ಕಲುಗಳಲ್ಲಿ ಒಂದು ಸುಂದರ ಉದ್ಯಾನ ನಿರ್ಮಿಸುವ ಗುರಿಯಿರಬೇಕು. ಇದರಿಂದ ಮನೆಯ ಸಣ್ಣಮಕ್ಕಳಲ್ಲಿ ಪರಿಸರ ಕಾಳಜಿ ಹೆಚ್ಚುತ್ತದೆ ಹಾಗೂ ಉತ್ತಮ ಗಾಳಿ ಸಿಗುತ್ತದೆ ಎಂದು ಹೇಳಿದರು.
ನಂತರ ಗುಬ್ಬಚ್ಚಿ ಶಾಲಾ ಮಕ್ಕಳಿಗೆ ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷ ಕೆ.ಆರ್ ಸತ್ಯನಾರಯಣ ಪುಸ್ತಕ ಸಾಮಾಗ್ರಿಗಳನ್ನ ವಿತರಿಸಿದರು.
ಕಾರ್ಯಕ್ರಮದಲ್ಲಿ ಅಂಬಾಭವಾನಿ ಸಮಾಜ ಮಹಿಳಾ ಅಧ್ಯಕ್ಷರಾದ ಸವಿತಾ ಘಾಟ್ಕೆ, ವಕೀಲರಾದ ಜಯಶ್ರೀ ಶಿವರಾಮ್, ಕಟ್ಟೆ ಬಳಗದ ಅಧ್ಯಕ್ಷ ಸತ್ಯನಾರಾಯಣ, ಅಗಸ್ತ್ಯ ಸೊಸೈಟಿ ನಿರ್ದೇಶಕ ವಿಕ್ರಂ ಅಯ್ಯಂಗಾರ್, ಹಸಿರುಲೋಕ ಸಂಚಾಲಕರಾದ ಅಜಯ್ ಶಾಸ್ತ್ರಿ, ಚೇತನ್ ಕಾಂತರಾಜು, ಸುಚೀಂದ್ರ, ಸಚಿನ್ ನಾಯಕ, ರಮಾ, ಶಾಲೆಯ ಮುಖ್ಯೋಪಾಧ್ಯಾಯ ಮೋಹನ್, ಶಿಕ್ಷಕಿ ಚಂಪಕ, ಹಾಗೂ ಇನ್ನಿತರರು ಇದ್ದರು.





