ಮೈಸೂರು: ಸಂವಿಧಾನ ಜಾರಿಗೂ ಮುನ್ನ ದೇಶಕ್ಕೆ ಮೀಸಲಾತಿ ಪರಿಚಯಿಸಿದ್ದ ಕೀರ್ತಿ ಕರ್ನಾಟಕ ರಾಜ್ಯಕ್ಕೆ ಸಲ್ಲುತ್ತದೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದ್ದಾರೆ.
ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೇಲ್ವರ್ಗದವರಿಗೆ ಹೆಚ್ಚಿನ ಪ್ರಧಾನ್ಯತೆ ಇದ್ದ ವೇಳೆ ಹಿಂದುಳಿದವರಿಗೆ ಪ್ರಧಾನ್ಯತೆ ನೀಡಬೇಕಾದ ಅವಶ್ಯಕತೆ ಇತ್ತು. ಈ ವೇಳೆ ಮೈಸೂರು ಸಂಸ್ಥಾನ ಮಿಲ್ಲರ್ ಕಮಿಟಿಯ ಮೂಲಕ ಮೀಸಲಾತಿ ನೀಡಿತು. ಈ ಮೂಲಕ ದೇಶಕ್ಕೆ ಸಂವಿಧಾನ ಜಾರಿಗೂ ಮುನ್ನ ಮೀಸಲಾತಿ ಪರಿಚಯಿಸಿದ ಕೀರ್ತಿ ಕರ್ನಾಟಕಕ್ಕೆ ಸಲ್ಲುತ್ತದೆ. ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಕಾರ್ಯಕ್ರಮದಲ್ಲೂ ಎಸ್ಸಿ, ಎಸ್ಟಿ ಸಮುದಾಯದ ಜನರು ಭಾಗವಹಿಸಲು ರಾಜರು ಅವಕಾಶ ಕಲ್ಪಿಸಿದ್ದರು. ಇದನ್ನು ಡಾ.ಬಿ.ಆರ್.ಅಂಬೇಡ್ಕರ್ ಸ್ಮರಿಸಿದ್ದಾರೆ. ಕೇಂದ್ರ ಬಿಜೆಪಿ ಸರ್ಕಾರ ಡಾ.ಬಿ.ಆರ್.ಅಂಬೇಡ್ಕರ್ ಅವರ ನೆನಪಿಗೆ ಅನೇಕ ಕೆಲಸಗಳನ್ನು ಮಾಡುತ್ತಿದೆ. ಜನ್ಮ ಸ್ಥಳ, ಶಿಕ್ಷಣ ಪಡೆದ ಸ್ಥಳಗಳನ್ನು ರಕ್ಷಣೆ ಮಾಡಿ ಸಾರ್ವಜನಿಕರು ವೀಕ್ಷಣೆ ಮಾಡಲು ಅವಕಾಶ ನೀಡಿದೆ. ಮಹಾ ಪರಿನಿರ್ವಾಣದ ಸ್ಥಳ ರಕ್ಷಣೆ, ಬೌದ್ಧ ಧರ್ಮ ಸ್ವೀಕರಿಸಿದ ನಾಗಪುರ ಸ್ಥಳ ರಕ್ಷಣೆ ಮಾಡುವ ಮೂಲಕ ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸುವ ಮಹಾತ್ಕಾರ್ಯವನ್ನು ಬಿಜೆಪಿ ಸರ್ಕಾರ ಮಾಡಿದೆ. ಅರ್ಥಶಾಸ್ತ್ರ ಅಂಬೇಡ್ಕರ್ಗೆ ಆಸಕ್ತಿ ಇದ್ದ ವಿಷಯವಾಗಿತ್ತು. ಆದರೆ ಅವರು ಕೇಂದ್ರದಲ್ಲಿ ಹಣಕಾಸು ಸಚಿವರಾಗಲು ಸಾಧ್ಯವಾಗಲಿಲ್ಲ. ಯಾವುದೇ ಸರ್ಕಾರಗಳು ಬರಲಿ, ಒಳ್ಳೆಯರೇ ಬರಲಿ ಕೆಟ್ಟವರೇ ಬರಲಿ ಪ್ರತಿಯೊಬ್ಬರಿಗೂ ಮೂಲಭೂತ ಹಕ್ಕುಗಳನ್ನು ಬಾಬಾ ಸಾಹೇಬ್ ಅಂಬೇಡ್ಕರ್ ನೀಡಿದ್ದಾರೆ ಎಂದು ಅಂಬೇಡ್ಕರ್ ಅವರನ್ನು ಹಾಡಿ ಹೊಗಳಿದರು.
ಕಾರ್ಯಕ್ರಮದಲ್ಲಿ ಸಂಸದ ಯದುವೀರ್ ಒಡೆಯರ್ ಅವರು ಪೌರ ಕಾರ್ಮಿಕರು ಹಾಗೂ ಅವರ ಮಕ್ಕಳಿಗೆ ಸನ್ಮಾನಿಸಿ ಅಭಿನಂದಿಸಿದರು.





