Mysore
19
overcast clouds
Light
Dark

ಮೈಸೂರಲ್ಲಿ ಜಾಹೀರಾತು ಜಟಾಪಟಿ..!

ಮೈಸೂರು: ಮೈತ್ರಿ ಪಕ್ಷಗಳು ನಡೆಸುತ್ತಿರುವ ಮೈಸೂರು ಚಲೋ ಪಾದಯಾತ್ರೆಗೆ ಟಕ್ಕರ್‌ ಕೊಡಲು ಕಾಂಗ್ರೆಸ್ ನಗರದಲ್ಲಿ ಜನಾಂದೋಲನ‌ ಸಭೆ ಆಯೋಜಿಸಿದೆ. ಮೈತ್ರಿ ಹಾಗೂ ಕಾಂಗ್ರೆಸ್‌ ಪಕ್ಷಗಳು ಜಿದ್ದಿಗೆ ಬಿದ್ದಂತೆ ತಮ್ಮ ಕಾರ್ಯಕ್ರಮಗಳ ಯಶಸ್ಸಿಗೆ ಪಣತೊಟ್ಟಿ ನಿಂತಿವೆ.

ಈ ಮಧ್ಯೆ, ನಗರದ ವಿವಿಧ ವೃತ್ತಗಳಲ್ಲಿ ರಾತ್ರೋರಾತ್ರಿ ದೊಡ್ಡದೊಡ್ಡ ಫ್ಲೆಕ್ಸ್‌ಗಳು ತಲೆ ಎತ್ತಿ ನಿಂತಿವೆ. ದೇವೇಗೌಡರ ಕುಟುಂಬದ ಭೂಕಬಳಿಕೆಯ ಪಕ್ಷಿನೋಟ ಎನ್ನುವ ಶೀರ್ಷಿಕೆಯಡಿಯಲ್ಲಿ ನಗರದ ಮೆಟ್ರೋಪಾಲ್‌ ವೃತ್ತದಲ್ಲಿ ಜಾಹೀರಾತು ಹಾಕಲಾಗಿದೆ. 2023ರ ಫ್ರಬ್ರವರಿ ತಿಂಗಳಲ್ಲಿ ಬಿಜೆಪಿ ಜೆಡಿಎಸ್‌ ವಿರುದ್ಧ ನೀಡಿದ್ದ ಪ್ರಕಟಣೆ ಎಂದು ಫ್ಲೆಕ್ಸ್‌ನಲ್ಲಿ ಹಾಕಲಾಗಿದೆ.

ಮಹಾರಾಜ ಕಾಲೇಜು ಮೈದಾನದ ಸುತ್ತಮುತ್ತ, ಮೆಟ್ರೋಪಾಲ್‌, ರಾಮಸ್ವಾಮಿ ಸರ್ಕಲ್‌ ಹಾಗೂ ಜೆಎಲ್‌ಬಿ ರಸ್ತೆ ಸೇರಿದಂತೆ ವಿವಿಧೆಡೆ ಫ್ಲೆಕ್ಸ್‌ಗಳನ್ನು ಹಾಕಲಾಗಿದೆ. ಈ ಹಿಂದೆ ಬಿಜೆಪಿಯು ಜೆಡಿಎಸ್‌ನ ದೊಡ್ಡಗೌಡರ ಕುಟುಂಬದ ವಿರುದ್ಧ ನೀಡಿದ್ದ ಭೂಕಬಳಿಕೆ ಜಾಹೀರಾತನ್ನು ಕಾಂಗ್ರೆಸ್‌ ಫ್ಲೆಕ್ಸ್‌ ಮಾಡಿಸಿ ಪ್ರಕಟಿಸಿದೆ. ಹೀಗಾಗಿ, ಮೈತ್ರಿ ಪಕ್ಷಗಳು ಭಾರೀ ಮುಜುಗರವನ್ನು ಎದುರಿಸುವಂತಾಗಿದೆ.

ಇನ್ನು ಈ ಜಾಹೀರಾತನ್ನು ತೆರವುಗೊಳಿಸಬೇಕು ಎಂದು ಜೆಡಿಎಸ್‌ನ ಮಾಜಿ ಶಾಸಕ ಸಾ.ರಾ ಮಹೇಶ್‌ ಹಾಗೂ ಮುಖಂಡರು ಪ್ರತಿಭಟನೆ ಮಾಡಿದರು.

ಈ ವೇಳೆ ಪೊಲೀಸರು ಹಾಗೂ ಜೆಡಿಎಸ್‌ನ ಮುಖಂಡರ ನಡುವೆ ವಾಗ್ವಾದ ನಡೆದು, ಕೊನೆಗೆ ಪೊಲೀಸರು ಸಾ.ರಾ ಮಹೇಶ್‌ ಸೇರಿದಂತೆ ಮುಖಂಡರನ್ನು ವಶಕ್ಕೆ ಪಡೆದರು.