ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ 17 ಮಂದಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಈ ಪ್ರಕರಣದಲ್ಲಿ ನಟ ಚಿಕ್ಕಣ್ಣ ಸಹಿತ ಹಲವಾರು ಸೆಲೆಬ್ರೆಟಿಗಳ ಹೆಸರು ಸಹಾ ಕೇಳಿ ಬರುತ್ತಿದೆ.
ಈ ಪ್ರಕರಣ ಸಂಬಂಧ ಮೊದಲ ಬಾರಿಗೆ ನಿರ್ಮಾಪಕ ಉಮಾಪತಿ ಅವರು ಮಾತನಾಡಿದ್ದಾರೆ. ಕಾನೂನಿನಡಿ ಏನೆಲ್ಲಾ ನಡೆಯಬೇಕಿದೆಯೋ ಅದೆಲ್ಲಾ ನಡೆಯುತ್ತಿದೆ. ಮಾಡಿದವರ ಪಾಪ ಆಡಿದವರ ಬಾಯಲ್ಲಿ ಎಂದಾಗುವುದು ಬೇಡ. ತಪ್ಪು ಯಾರೇ ಮಾಡಿದ್ದರೂ ಕಾನೂನಿನ ಪ್ರಕಾರ ಶಿಕ್ಷೆಯಾಗಲಿದೆ ಎಂದಿದ್ದಾರೆ.
ರೇಣುಕಾಸ್ವಾಮಿ ಪ್ರಕರಣದಲ್ಲಿ ಸಾಕಷ್ಟು ವಿಚಾರಗಳನ್ನು ಕೇಳಿದ್ದೇನೆ. ಇದರಲ್ಲಿ ದೊಡ್ಡ ದೊಡ್ಡ ಪ್ರಭಾವಿ ವ್ಯಕ್ತಿಗಳು ಕೈ ಜೋಡಿಸಿದ್ದು, ದರ್ಶನ್ ಹೊರ ತರಲು ಪ್ರಯತ್ನಿಸುತ್ತಿದ್ದಾರೆ. ಇದು ಅವರ ಮನೆಯಲ್ಲೇ ನಡೆದಿದ್ದರೇ ಅವರು ಕೊಲೆ ಮಾಡಿದ ವ್ಯಕ್ತಿಯನ್ನು ಬಿಡಿಸುತ್ತಿದ್ದರಾ? ಎಂದು ಪ್ರಶ್ನಿಸಿದ್ದಾರೆ.
ಇನ್ನು ದರ್ಶನ್ ಅವರು ಲ್ಯಾಂಬೋರ್ಗಿನಿ ತಗೋಳೋಕೆ ಅಡ್ವಾನ್ಸ್ ನೀಡಿದ್ದೇ ನಾನು ಎನ್ನುವ ಮೂಲಕ ಮತ್ತೊಮ್ಮೆ ದರ್ಶನ್ ವಿರುದ್ಧ ಕಿಡಿಕಾರಿದ್ದಾರೆ. ದರ್ಶನ್ ಅವರು ಆ ಲ್ಯಾಂಬೋರ್ಗಿನಿ ಅಂತ ಮೂರೊತ್ತು ಹೇಳುತ್ತಾರಲ್ಲವಾ? ಅದಕ್ಕೆ ಅಡ್ವಾನ್ಸ್ ಕೊಟ್ಟಿದ್ದೆ ನಾನು. ನಾನು ದುಡ್ಡು ಮಾಡಿದ ಮೇಲೆಯೇ ನಿಮ್ಮ ಬಾಸ್ಗೆ ಸಿನಿಮಾ ಮಾಡಿರುವುದು. ನಾನೇನು ಬಿಟ್ಟಿ ಕೆಲಸ ಮಾಡಿಸಿಕೊಂಡಿಲ್ಲ. ಅವರು ಏನು ಬೆಲೆ ಕೊಟ್ಟಿದ್ದಾರೋ ಅದಕ್ಕೆ ತಕ್ಕಂತೆ ಕೆಲಸ ತೆಗೆದುಕೊಂಡಿದ್ದೇನೆ ಎಂದರು.





