Mysore
33
clear sky

Social Media

ಶುಕ್ರವಾರ, 06 ಮಾರ್ಚ್ 2026
Light
Dark

‘ರುದ್ರ ಗರುಡ ಪುರಾಣ’ಕ್ಕೆ ಎರಡು ಉಪಕಥೆಗಳೂ ಸ್ಫೂರ್ತಿ…

ರಿಷಿ ಅಭಿನಯದ ‘ರುದ್ರ ಗರುಡ ಪುರಾಣ’ ಚಿತ್ರವು ಕಳೆದ ವರ್ಷ ಪ್ರಾರಂಭವಾಗಿತ್ತು. ಈಗ ಚಿತ್ರದ ಚಿತ್ರೀಕರಣ ಮುಗಿದಿರುವುದಷ್ಟೇ ಅಲ್ಲ, ಇತ್ತೀಚೆಗೆ ಟೀಸರ್‍ ಸಹ ಬಿಡುಗಡೆಯಾಗಿದೆ. ಚಿತ್ರವನ್ನು ಆದಷ್ಟು ಬೇಗ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಮುಂದಾಗಿದೆ.

ಇತ್ತೀಚೆಗೆ, ನಟ ಶಿವರಾಜಕುಮಾರ್‍ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಇನ್ನು, ನಿರ್ದೇಶಕ ಜೇಕಬ್ ವರ್ಗೀಸ್‍ ಈ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಚಿತ್ರತಂಡಕ್ಕೆ ಶುಭ ಕೋರಿದರು.

ಗರುಡ ಪುರಾಣ ಗೊತ್ತು, ಇದೇನಿದು ‘ರುದ್ರ ಗರುಡ ಪುರಾಣ’ ಎಂಬ ಪ್ರಶ್ನೆ ಸಹಜವಾಗಿಯೇ ಬರುತ್ತದೆ. ‘ಗರುಡ ಪುರಾಣ’ದಲ್ಲಿ ಒಂದಿಷ್ಟು ಸಮಸ್ಯೆಗಳಿಗೆ ಉತ್ತರವಿದೆಯಂತೆ. ರುದ್ರ ಎಂಬ ಪೊಲೀಸ್‍ ಅಧಿಕಾರಿ ಈ ಗರುಡ ಪುರಾಣವನ್ನು ಇಟ್ಟುಕೊಂಡು ಹೇಗೆ ಸಮಾಜದ ಓರೆಕೋರೆಗಳನ್ನು ತಿದ್ದುತ್ತಾನೆ ಎಂಬುದೇ ಚಿತ್ರದ ಕಥೆ.

ಈ ಚಿತ್ರದ ಕುರಿತು ಮಾತನಾಡುವ ರಿಷಿ, ‘ನಮ್ಮ ಸುತ್ತಮುತ್ತ ನಡೆಯುತ್ತಿರುವ ಕಳಪೆ ಕಾಮಗಾರಿ, ಭ್ರಷ್ಟಾಷಾರ ಅಥವಾ ಹೆಣ್ಮಕ್ಕಳ ಮೇಲೆ ಆಗುತ್ತಿರುವ ಅತ್ಯಾಚಾರ ಮುಂತಾದ ಹಲವು ಕಹಿ ಘಟನೆಗಳನ್ನು ಪ್ರಜೆಗಳಾಗಿ ನಾವು ಎದುರಿಸುವುದು ಹೇಗೆ ಎಂಬ ಚರ್ಚೆ ನಡೆಯುತ್ತಿರುತ್ತದೆ. ಗರುಡ ಪುರಾಣದಲ್ಲಿ ಈ ತರಹದ ಘಟನೆಗಳಾದಾಗ, ಏನು ಮಾಡಬೇಕು ಎಂಬ ಕುರಿತು ಒಂದಿಷ್ಟು ಸೂಚನೆಗಳಿವೆ. ಈ ವಿಷಯವನ್ನು ಮೂಲವಾಗಿಟ್ಟುಕೊಂಡು ಕಥೆ ಮಾಡಲಾಗಿದೆ. ನಾನು ಈ ಚಿತ್ರದಲ್ಲಿ ರುದ್ರ ಎಂಬ ಪೊಲೀಸ್‍ ಅಧಿಕಾರಿಯ ಪಾತ್ರ ಮಾಡುತ್ತಿದ್ದೇನೆ. ರುದ್ರನ ಕೈಗೆ ಗರುಡ ಪುರಾಣ ಸಿಕ್ಕಾಗ ಏನಾಗುತ್ತದೆ ಎಂಬುದನ್ನು ಚಿತ್ರ ನೋಡಬೇಕು. ಈ ಪಾತ್ರ ಮಾಡಿದ್ದು ನಿಜಕ್ಕೂ ಖುಷಿಕೊಟ್ಟಿತು. ಹೆಸರಿಗೆ ಯಾವ ಫೋರ್ಸ್ ಇದೆಯೋ, ಪಾತ್ರಕ್ಕೂ ಅಷ್ಟೇ ಫೋರ್ಸ್ ಇದೆ’ ಎಂದರು.

ಇನ್ನು, ನಿರ್ದೇಶಕ ನಂದೀಶ್‍ ಈ ಚಿತ್ರವನ್ನು ಎರಡು ಉಪಕಥೆಗಳನ್ನಿಟ್ಟುಕೊಂಡು ಕಥೆ ಮಾಡಿದ್ದಾರೆ. ಮೊದಲನೆಯದು, 1954ರಲ್ಲಿ ಅಮೇರಿಕಾದಲ್ಲಿ ವಿಮಾನವೊಂದು ಮಾರ್ಗ ಮಧ್ಯೆ ನಿಗೂಢವಾಗಿ ಕಳೆದು ಹೋಗಿರುತ್ತದೆ. ಅದು ಎಲ್ಲಿ ಮಾಯವಾಗಿದೆ ಎಂದು ಯಾರಿಗೂ ಗೊತ್ತಿರುವುದಿಲ್ಲ. ಇದಾಗಿ 30 ವರ್ಷಗಳ ನಂತರ ಆ ವಿಮಾನ ವಾಪಸ್ಸು ಬರುತ್ತದೆ. ಈ ಕಥೆ ಚಿತ್ರಕ್ಕೆ ಸ್ಫೂರ್ತಿಯಂತೆ.

ಇದರ ಜೊತೆಗೆ, ‘ಒಬ್ಬ ರಾಜ ಇಡೀ ಭೂಮಂಡಲನೇ ಗೆಲ್ಲಬೇಕು ಅಂತ ಆಸೆಯಿಂದ ತನ್ನ‌ ಪಕ್ಕದ ದೇಶದ ಮೇಲೆ ಯುದ್ದಕ್ಕೆ ಹೋಗಿ‌ ಲಕ್ಷಾಂತರ ಜನರನ್ನು ಕೊಂದು ಜಯ‌ ಸಾಧಿಸಿರುತ್ತಾನೆ.‌ ಯುದ್ದ ಮುಗಿದ ಮೇಲೆ‌ ರಣರಂಗಕ್ಕೆ‌ ಹೋಗುತ್ತಾನೆ. ಅಲ್ಲಿ ಸಾಲುಸಾಲು ಹೆಣದ ರಾಶಿಗಳಿರುತ್ತಿದೆ.‌ ಸತ್ತಿದ್ದ ಸೈನಿಕನೊಬ್ಬನ ಮಾಂಸವನ್ನು ಇನ್ನೊಬ್ಬ ಮನುಷ್ಯ ತಿನ್ನುತ್ತಿರುತ್ತಾನೆ.‌ ಆ ಸಮಯಕ್ಕೆ‌ ರಾಜ ಅಲ್ಲಿಗೆ ಬರುತ್ತಾನೆ‌. ಆ‌ ಮನುಷ್ಯ ರಾಜನನ್ನು ಕುರಿತು, ‘ಕ್ಷಮಿಸು ರಾಜ, ನಾನು ನಿನ್ನ ಆಹಾರವನ್ನು ‌ತಿನ್ನುತ್ತಿದ್ದೇನೆ’ ಎನ್ನುತ್ತಾನೆ. ಆಗ ರಾಜ, ‘ನಾನು ನಿನ್ನ ಹಾಗೆ ನರಭಕ್ಷಕ ಅಲ್ಲ‌’ ಏನುತ್ತಾನೆ.‌ ಆಗ ಆ ಮನುಷ್ಯ, ‘ಹಾಗಾದರೆ ಇಷ್ಟು ಜನರನ್ನು ಏಕೆ‌ ಸಾಯಿಸಿದಿಯಾ’ ಎಂದು ರಾಜನನ್ನು ಕೇಳುತ್ತಾನೆ. ಈ ಎರಡೂ ಘಟನೆಗಳನ್ನು ಇಟ್ಟುಕೊಂಡು ಈ ಕಥೆ ಮಾಡಿದ್ದೇನೆ’ ಎಂದರು ನಂದೀಶ್‍.

ಅಶ್ವಿನಿ ಆರ್ಟ್ಸ್ ಲಾಂಛನದಲ್ಲಿ ಅಶ್ವಿನಿ ಲೋಹಿತ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ನಂದೀಶ್‍ಗೆ ನಾಯಕಿಯಾಗಿ ಪ್ರಿಯಾಂಕಾ ಕುಮಾರ್‌ ಇದ್ದಾರೆ. ಮಿಕ್ಕಂತೆ ಹಿರಿಯ ನಟ ವಿನೋದ್‍ ಆಳ್ವ, ‘ಸಿದ್ಲಿಂಗು’ ಶ್ರೀಧರ್, ಗಿರೀಶ್ ಶಿವಣ್ಣ, ಶಿವರಾಜ ಕೆ.ಆರ್ ಪೇಟೆ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಕೆಪಿ ಸಂಗೀತ ಸಂಯೋಜಿಸಿದ್ದು, ರಘು ನಿಡುವಳ್ಳಿ ಸಂಗಭಾಷಣೆ ಮತ್ತು ಸಂದೀಪ್‍ ಕುಮಾರ್‍ ಛಾಯಾಗ್ರಹಣವಿದೆ.

Tags:
error: Content is protected !!