‘ಸಿಂಪಲ್’ ಸುನಿ ಹೊಸಬರನ್ನಿಟ್ಟುಕೊಂಡು ‘ದೇವರು ರುಜು ಮಾಡಿದನು’ ಎಂಬ ಚಿತ್ರ ಮಾಡುತ್ತಿರುವುದು ಗೊತ್ತಿರುವ ವಿಷಯವೇ. ಇತ್ತೀಚೆಗೆ ಆ ಚಿತ್ರದ ಮುಹೂರ್ತ ಸದ್ದಿಲ್ಲದೆ ನಡೆದಿದೆ. ನಾಯಕ ವೀರಾಜ್ ಅಜ್ಜಿ ಕ್ಯಾಮೆರಾಗೆ ಚಾಲನೆ ನೀಡುವ ಮೂಲಕ ಚಿತ್ರಕ್ಕೆ ಚಾಲನೆ ಸಿಕ್ಕಿದೆ. ಈ ಸಂದರ್ಭದಲ್ಲಿ ಚಿತ್ರದ ಟೀಸರ್ ಸಹ ಬಿಡುಗಡೆ ಆಗಿದೆ.
ಎಲ್ಲಾ ಸರಿ, ‘ದೇವರು ರುಜು ಮಾಡಿದನು’ ಚಿತ್ರದ ಕಥೆ ಏನು? ಎಂಬ ಪ್ರಶ್ನೆ ಸಹಜ. ಸಂಗೀತವೇ ಉಸಿರು ಎಂದು ಜೀವಿಸುವ ಇಬ್ಬರು ನಾಯಕಿರು ಹಾಗೂ ಸಂಗೀತ ಇಷ್ಟವಿಲ್ಲದಿದ್ದರೂ ಅದನ್ನು ಪ್ರೀತಿಸುವ ನಾಯಕ. ಒಂದೇ ಮಾತಿನಲ್ಲಿ ಹೇಳುವುದಾದರೆ ಸಂಗೀತದ ಕಥೆ ಜೊತೆಗೆ ರಕ್ತ ಚರಿತ್ರೆಯನ್ನು ಈ ಚಿತ್ರದ ಮೂಲಕ ಸುನಿ ಹೇಳುವುದಕ್ಕೆ ಹೊರಟಿದ್ದಾರೆ. ಚಿತ್ರದಲ್ಲಿ ವೀರಾಜ್ ನಾಯಕನಾಗಿ ಅಭಿನಯಿಸಿದರೆ ಕೀರ್ತಿ ಕೃಷ್ಣ ಹಾಗೂ ದಿವಿತಾ ರೈ ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
‘ದೇವರು ರುಜು ಮಾಡಿದನು’ ಚಿತ್ರದ ಕುರಿತು ಮಾತನಾಡುವ ಸುನಿ, ‘ವೀರಾಜ್ ಅವರಿಗೆ ನಾಲ್ಕು ಕಥೆಗಳನ್ನು ಹೇಳಿದ್ದೆ. 10 ಜನರಿಂದ ಕಥೆ ಹೇಳಿಸಿದ್ದೆ. ಯಾವುದೂ ಓಕೆ ಆಗಿರಲಿಲ್ಲ. ಈಗ ಇದು ಓಕೆಯಾಗಿದೆ. ದೇವರೇ ನನಗೆ ಕಥೆ ಕೊಟ್ಟಿದ್ದಾರೆ. 2012ರಲ್ಲಿ ನಾನು ಸಹಾಯಕ ನಿರ್ದೇಶಕನಾಗಿದ್ದಾಗ ಮಾಡಿಕೊಂಡ ಕಥೆ ಇದು. ಶ್ರೀನಗರ ಕಿಟ್ಟಿ ಅವರಿಗೆ ಆಗಲೇ ರೀಡಿಂಗ್ ಕೊಟ್ಟಿದ್ದೆ. ಎರಡು ಸೀನ್ ಮೇಲೆ ಹೇಳಲೇ ಆಗಿದ್ದೆ. ಬಹಳ ನರ್ವಸ್ ಆಗಿದ್ದೆ. ಕಿಟ್ಟಣ್ಣ ಆಮೇಲೆ ಮಾಡೋಣ ಎಂದು ಹೇಳಿದ್ದರು. ಈ ಕಥೆಗೆ ಹೊಸಬರು ಬೇಕಿತ್ತು. ಹುಡುಕಿ ತೆಗೆದುಕೊಂಡಿದ್ದೇನೆ.
ವೀರಾಜ್ ರಂಗಭೂಮಿ ಕಲಾವಿದ. ರಂಗಭೂಮಿಯಲ್ಲಿ ಸಾಕಷ್ಟು ಅನುಭವಗಳನ್ನು ಪಡೆದುಕೊಂಡಿರುವ ವೀರಾಜ್ ಈಗ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಒಂದಿಷ್ಟು ತಯಾರಿಗಳನ್ನು ಮಾಡಿಕೊಂಡೇ ಎಂಟ್ರಿ ಕೊಡುತ್ತಿದ್ದಾರೆ.
ಇನ್ನು ಗ್ರೀನ್ ಹೌಸ್ ಮೂವೀಸ್ ಅಡಿಯಲ್ಲಿ ಈ ಚಿತ್ರವನ್ನು ಗೋವಿಂದ್ ರಾಜ್ ಸಿ.ಟಿ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಜೇಡ್ ಸ್ಯಾಂಡಿ ಹಾಗೂ ಜೂಡಾ ಸ್ಯಾಂಡಿ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಸಂತೋಷ್ ರೈ ಪತಾಜೆ ಛಾಯಾಗ್ರಹಣ ಈ ಚಿತ್ರಕ್ಕಿದೆ.





