ಗುರುದತ್ ಗಾಣಿಗ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಕರಾವಳಿ’ ಚಿತ್ರಕ್ಕೆ ಇದೀಗ ರಾಜ್ ಬಿ. ಶೆಟ್ಟಿ ಎಂಟ್ರಿಯಾಗಿದೆ. ಪ್ರಜ್ವಲ್ ದೇವರಾಜ್ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ಈ ಚಿತ್ರದಲ್ಲಿ ರಾಜ್ ಶೆಟ್ಟಿ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ.
ಇತ್ತೀಚೆಗೆ ಚಿತ್ರದಲ್ಲಿನ ರಾಜ್ ಬಿ. ಶೆಟ್ಟಿ ಅವರ ಪಾತ್ರ ಪರಿಚಯದ ಟೀಸರ್ ರಿಲೀಸ್ ಆಗಿದೆ. ಎರಡು ಕೋಣಗಳ ಮಧ್ಯೆ ನಿಂತು ದಿಟ್ಟಿಸಿ ನೋಡುತ್ತಿರುವ ರಾಜ್ ಬಿ ಶೆಟ್ಟಿ, ಒಂದು ಕೈಯಲ್ಲಿ ಪಂಜು ಹಿಡಿದು ಕಾಣಿಸಿಕೊಂಡಿದ್ದಾರೆ. ರಾಜ್ ಲುಕ್ ನೋಡುತ್ತಿದ್ದರೆ ಕಂಬಳ ಓಡಿಸುವ ಓಟಗಾರನ ಅಥವಾ ಕಂಬಳ ನಡೆಸುವ ಕುಟುಂಬದವನ ಪಾತ್ರವಿರಬಹುದು ಎಂದು ಚರ್ಚೆಯಾಗುತ್ತಿದೆ. ರಾಜ್ ಪಾತ್ರದ ಬಗ್ಗೆ ಸಿನಿಮಾತಂಡ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ.
‘ಕರಾವಳಿ’ ಮನುಷ್ಯ ಹಾಗೂ ಪ್ರಾಣಿ ಮಧ್ಯೆ ನಡೆಯುವ ಸಂಘರ್ಷದ ಕಥೆಯಾಗಿದ್ದು, ಪಕ್ಕಾ ಗ್ರಾಮೀಣ ಹಿನ್ನೆಲಯಲ್ಲಿ ಚಿತ್ರ ಮೂಡಿಬರುತ್ತಿದೆ. ಚಿತ್ರದಲ್ಲಿ ಪ್ರಜ್ವಲ್ ಮತ್ತು ರಾಜ್ ಬಿ. ಶೆಟ್ಟಿ ಜೊತೆಗೆ ನಟ ಮಿತ್ರ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಮೇಶ್ ಇಂದಿರ ಅವರ ಪಾತ್ರ ಕೂಡ ಸಿಕ್ಕಾಪಟ್ಟೆ ಪವರ್ ಫುಲ್ ಆಗಿದೆ. ನಾಯಕಿಯಾಗಿ ಸಂಪದಾ ಕಾಣಿಸಿಕೊಂಡಿದ್ದಾರೆ.
‘ಕರಾವಳಿ’ ಹೆಸರೇ ಹೇಳುವ ಹಾಗೆ ಬಹುತೇಕ ಸಿನಿಮಾ ಕರಾವಳಿಯ ಸುತ್ತಮುತ್ತನೇ ಚಿತ್ರೀಕರಣಗೊಂಡಿದೆ. ಈ ಸಿನಿಮಾ ಗುರುದತ್ ಗಾಣಿಗ ನಿರ್ದೇಶನದ ಜೊತೆಗೆ ವಿಕೆ ಫಿಲ್ಮಂ ಅಸೋಸಿಯೇಷನ್ ಸಹಯೋಗದೊಂದಿಗೆ ನಿರ್ಮಿಸುತ್ತಿದ್ದಾರೆ. ಈ ಚಿತ್ರಕ್ಕೆ ಸಚಿನ್ ಬಸ್ರೂರು ಸಂಗೀತ ಸಂಯೋಜನೆ ಮಾಡಿದ್ದಾರೆ. ಅಭಿಮನ್ಯು ಸದಾನಂದನ್ ಛಾಯಾಗ್ರಹಣವಿರುವ ಈ ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಸಹ ಪ್ರಾರಂಭವಾಗಿದೆ.
ಚಂದ್ರಶೇಖರ್ ಬಂಡಿಯಪ್ಪ ಕಥೆ ಇರುವ ಈ ಚಿತ್ರವು, ವರ್ಷದ ಕೊನೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.





