Mysore
20
overcast clouds
Light
Dark

ನಾಯಕಿ ಪ್ರಧಾನ ಚಿತ್ರದಲ್ಲೊಂದು ‘ಬಗ್ಸೋದೇ ಬಡಿಯೋದೇ’ ಹಾಡು

ಕನ್ನಡದಲ್ಲಿ ನಾಯಕಿ ಪ್ರಧಾನ ಚಿತ್ರಗಳು ಕಡಿಮೆಯಾಗುತ್ತಿವೆ. ಹೀಗಿರುವಾಗಲೇ, ಸದ್ದಿಲ್ಲದೆ ‘ಲೈಫ್‍ ಆಫ್‍ ಮೃದುಲ’ ಎಂಬ ಚಿತ್ರವೊಂದು ಕನ್ನಡದಲ್ಲಿ ತಯಾರಾಗಿ ಬಿಡುಗಡೆಗೆ ಸಜ್ಜಾಗಿದೆ. ಅದಕ್ಕೂ ಮೊದಲು ಚಿತ್ರದ ಟೀಸರ್ ಮತ್ತು ‘ಬಗ್ಸೋದೇ ಬಡಿಯೋದೇ’ ಎಂಬ ಹಾಡು ಬಿಡುಗಡೆಯಾಗಿದೆ.

ಕಾಂಗ್ರೆಸ್‍ ಯುವ ಮುಖಂಡ ಮೊಹ್ಮದ್ ನಲಪಾಡ್ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಹಾಗೆಯೇ, ಚಿತ್ರತಂಡಕ್ಕೆ ಕಿವಿ ಮಾತು ಸಹ ಹೇಳಿದರು. ‘ಬಗ್ಸೋದು ಬಡಿಯೋದು ಎಲ್ಲ ಬೇಕಾಗಿಲ್ಲ. ಅದು ತಪ್ಪು ಸಂದೇಶ ಸಾರುತ್ತದೆ. ಬಗ್ಸಿ, ಹೊಡೆಸಿ ಅನುಭವವಾದ ಮೇಲೆ ಈ ಮಾತು ಹೇಳುತ್ತಿದ್ದೀನಿ. ಹಾಗಾಗಿ, ಬಗ್ಸೋದು ಮತ್ತು ಹೊಡೆಯೋದು ಬದಲಾಗಬೇಕು. ಪ್ರಮುಖವಾಗಿ ನಮ್ಮ ಶೈಲಿ ಬದಲಾಗಬೇಕು. Rap ಸಾಂಗ್‍ ಅಂದರೆ ಬಗ್ಸೋದು, ಬಡಿಯೋದು ಇರಬೇಕು ಅಂತೇನಿಲ್ಲ. ಒಳ್ಳೆಯತನದಲ್ಲೂ Rap ಮಾಡಬಹುದು. ಈ ಪದಗಳು ಬದಲಾದರೆ ಮುಂದಿನ ತಲೆಮಾರು ಬದಲಾಗೋಕೆ ಸಾಧ್ಯ. ಈ ಬಗ್ಸೋದು ಬಡಿಯೋದು ಅನ್ನೋದೆಲ್ಲಾ ಯುವಕರಿಗ ತಪ್ಪಾಗಿ ಅರ್ಥವಾಗುತ್ತೆ. ಇದನ್ನು ತೋರಿಸಬೇಡಿ. ಮುಂದಿನ ದಿನಗಳಲ್ಲ ಏನೇ ಮಾಡುವಾಗಲೂ ಗಮನದಲ್ಲಿರಲಿ’ ಎಂದು ಕಿವಿಮಾತು ಹೇಳಿದರು.

‘ಲೈಫ್‍ ಆಫ್‍ ಮೃದುಲಾ’ ಎಂಬ ಹೆಸರೇ ಹೇಳುವಂತೆ, ಮೃದುಲಾ ಎಂಬುವಳ ಜೀವನದಲ್ಲಿ ಎದುರಾಗುವ ಮೂರು ವಿಭಿನ್ನ ಕಾಲ ಘಟ್ಟಗಳ ಸುತ್ತ ಕಥೆ ಸಾಗುತ್ತದೆ. ಆಕೆಯ ಬದುಕಲ್ಲಿ ಅನಿರೀಕ್ಷಿತವಾಗಿ ಬರುವ ಸವಾಲನ್ನು ಯಾವ ರೀತಿ ಎದುರಿಸುತ್ತಾಳೆ ಎಂಬುದನ್ನು ಕುತೂಹಲ ತಿರುವುಗಳ ಮೂಲಕ ಥ್ರಿಲ್ಲರ್ ರೂಪದಲ್ಲಿ ತೋರಿಸಲಾಗಿದೆ.

ಈ ಚಿತ್ರದಲ್ಲಿ ಮೃದುಲಾ ಆಗಿ ಪೂಜಾ ಲೋಕಾಪುರ ನಟಿಸಿದ್ದಾರೆ. ಚಿತ್ರದ ಕುರಿತು ಮಾತನಾಡುವ ಅವರು, ‘ನಾನು ಸೀರಿಯಲ್‍ ನಟಿ. ಇದೇ ಮೊದಲ ಚಿತ್ರ. ನಾನು ನಾಯಕಿ ಪ್ರಧಾನ ಚಿತ್ರವನ್ನು ಹುಡುಕುತ್ತಿದ್ದೆ. ಆದರೆ, ಸಿಕ್ಕಿರಲಿಲ್ಲ. ನಿರ್ದೇಶಕರು ಫೋನ್ ಮಾಡಿದಾಗ ನಾನು ಒಪ್ಪಿದೆ. ಕಥೆ ಕೇಳಿದಾಗ ಇಷ್ಟವಾಯ್ತು. ಹೆಣ್ಣ ನಾಲ್ಕು ಗೋಡೆಗಳ ಮಧ್ಯೆ ಏನೆಲ್ಲಾ ಸಮಸ್ಯೆ ಎದುರಿಸುತ್ತಾಳೆ, ಅದರಿಂದ ಹೇಗೆ ಆಚೆ ಬರುತ್ತಾಳೆ, ಸಮಾಜದಲ್ಲಿ ಹೇಗೆ ಬದುಕುತ್ತಾಳೆ ಎಂಬುದೇ ಚಿತ್ರದ ಕಥೆ. ಹೆಣ್ಣಿನ ಜೀವನದಲ್ಲಿ ಏನಾಗುತ್ತದೆ ಎಂದು ಯಾರಿಗೂ ಗೊತ್ತಿರುವುದಿಲ್ಲ. ಆಕೆಯ ಜೀವನವನ್ನು ಅರ್ಥ ಮಾಡಿಕೊಳ್ಳೋರು ಇರೋದಿಲ್ಲ. ಹೆಣ್ಣ ನಾಲ್ಕು ಗೋಡೆ ಮಧ್ಯೆ ಸೀಮಿತವಲ್ಲ, ಅದರಾಚೆ ಬಂದು ನಾನು ಬದುಕುತ್ತೇನೆ, ಯಾರ ಮೇಲೂ ಅವಲಂಬಿತಳಾಗಿರುವುದಿಲ್ಲ, ಸ್ವಂತವಾಗಿ ಏನಾದರೂ ಸಾಧಿಸುತ್ತೇನೆ ಎಂದು ಹೇಳುವ ಚಿತ್ರ. ಇದೊಂದು ಸವಾಲಿನ ಪಾತ್ರ. ಮುಗ್ಧ ಹುಡುಗಿಯ ಪಾತ್ರ ಮಾಡಿದ್ದೇನೆ’ ಎಂದರು.

ಮದನ್ ಮೂವೀಸ್ ಬ್ಯಾನರ್ ಅಡಿಯಲ್ಲಿ ಮದನ್‌ ಕುಮಾರ್ ನಿರ್ಮಿಸಿ, ಚೇತನ್‍ ತ್ರಿವೇಣ್‍ ನಿರ್ದೇಶಿಸಿರುವ ‘ಲೈಫ್‍ ಆಫ್‍ ಮೃದುಲ’ ಚಿತ್ರದಲ್ಲಿ ಪೂಜಾ ಜೊತೆಗೆ ಆಶಾ ಸುಜಯ್, ಶಶಾಂಕ್, ಕುಲದೀಪ್, ಯೋಗಿ ದೇವಗಂಗೆ, ಅನೂಪ್‌ ಥಾಮಸ್, ಪ್ರೀತಿ ಚಿದಾನಂದ್, ಶರೀಫ್ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ರಾಹುಲ್‍ ಎಸ್‍ ವಾಸ್ತರ್‍ ಸಂಗೀತ, ಅಚ್ಚು ಸುರೇಶ್‍ ಛಾಯಾಗ್ರಹಣವಿದೆ.

Tags: