ಎರಡು ವರ್ಷಗಳ ಹಿಂದೆ ‘ಪಂಪ’ ಎಂಬ ಚಿತ್ರ ನಿರ್ದೇಶಿಸಿದ್ದ ಹಿರಿಯ ನಿರ್ದೇಶಕ ಎಸ್. ಮಹೇಂದರ್, ಆ ನಂತರ ಯಾವೊಂದು ಚಿತ್ರವನ್ನು ನಿರ್ದೇಶಿಸಿರಲಿಲ್ಲ. ಈಗ ಅವರು ‘ಆಪರೇಷನ್ ಕೊಂಬುಡಿಕ್ಕಿ’ ಎಂಬ ಹೊಸ ಚಿತ್ರವನ್ನು ಘೋಷಿಸುತ್ತಿದ್ದಾರೆ.
ಕೊಂಬುಡಿಕ್ಕಿ ಎನ್ನುವುದು ಚಾಮರಾಜನಗರ ಜಿಲ್ಲೆಯ, ಕೊಳ್ಳೆಗಾಲ ತಾಲ್ಲೂಕಿನಲ್ಲಿರುವ ಒಂದು ಕುಗ್ರಾಮ. ನಗರ ಪ್ರದೇಶದಿಂದ ದೂರವಿರುವ ಈ ಹಳ್ಳಿಗೆ ಕೆಲವು ವರ್ಷಗಳ ಹಿಂದಿನವರೆಗೂ ಯಾವುದೇ ಸೌಕರ್ಯ, ಸೌಲಭ್ಯ ಸಿಕ್ಕಿರಲಿಲ್ಲ. ಇಲ್ಲಿ ನಡೆದ ಒಂದು ಘಟನೆಯನ್ನಿಟ್ಟುಕೊಂಡು ಮಹೇಂದರ್ ಚಿತ್ರ ಮಾಡುತ್ತಿರುವ ಸುದ್ದಿ ಇದೆ.
ಬಹಳ ವರ್ಷಗಳ ನಂತರ ಈ ಚಿತ್ರಕ್ಕಾಗಿ ಕಿಶೋರ್ ಅವರ ಜೊತೆಗೆ ಕೈಜೋಡಿಸುತ್ತಿದ್ದಾರೆ ಮಹೇಂದರ್. ಇದಕ್ಕೂ ಮೊದಲು ‘ಅಕ್ಕ ತಂಗಿ’ ಚಿತ್ರಕ್ಕಾಗಿ ಇಬ್ಬರೂ ಒಟ್ಟಿಗೆ ಕೆಲಸ ಮಾಡಿದ್ದರು. ಈಗ ಕಿಶೋರ್ ಅವರನ್ನು ನಾಯಕನನ್ನಾಗಿಸಿಕೊಂಡು ಅವರೊಂದು ಹೊಸ ಚಿತ್ರದ ನಿರ್ದೇಶನಕ್ಕೆ ಕೈ ಹಾಕಿದ್ದಾರೆ ಮಹೇಂದರ್.
ಈ ಹಿಂದೆ, ರಮೇಶ್ ಅರವಿಂದ್ ಅಭಿನಯದ ‘ಶಿವಾಜಿ ಸುರತ್ಕಲ್’ ಮತ್ತು ‘ಶಿವಾಜಿ ಸುರತ್ಕಲ್ 2’ ಚಿತ್ರಗಳನ್ನು ನಿರ್ಮಿಸಿದ್ದ ಅನೂಪ್ ಹನುಮಂತೇಗೌಡ, ತಮ್ಮ ಮೂರನೇ ಚಿತ್ರವಾಗಿ ‘ಆಪರೇಷನ್ ಕೊಂಬುಡಿಕ್ಕಿ’ಯನ್ನು ಕೈಗೆತ್ತಿಕೊಂಡಿದ್ದಾರೆ. ಈ ಚಿತ್ರವನ್ನು ಸಿಲ್ವರ್ ಸ್ಕ್ರೀನ್ ಸ್ಟುಡಿಯೋಸ್ ಎಂಬ ನಿರ್ಮಾಣ ಸಂಸ್ಥೆಯಡಿ ಅನೂಪ್ ಈ ಚಿತ್ರವನ್ನು ನಿರ್ಮಿಸಿದ್ದಾರೆ.
‘ಆಪರೇಷನ್ ಕೊಂಬುಡಿಕ್ಕಿ’ ಚಿತ್ರದ ಕಲಾವಿದರ ಆಯ್ಕೆ ನಡೆಯುತ್ತಿದ್ದು, ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ. ಈ ಚಿತ್ರಕ್ಕೆ ರವಿ ಬಸ್ರೂರು ಸಂಗೀತ ಸಂಯೋಜಿಸುತ್ತಿದ್ದು, ‘ಹೆಬ್ಬುಲಿ’ ಖ್ಯಾತಿಯ ಕರುಣಾಕರ್ ಛಾಯಾಗ್ರಹಣ ಮಾಡುತ್ತಿದ್ದಾರೆ. ದೀಪು ಎಸ್. ಕುಮಾರ್ ಅವರ ಸಂಕಲನವಿದೆ.