ಕಳೆದ ವರ್ಷ ತೆಲುಗಿನಲ್ಲಿ ‘ಕಣ್ಣಪ್ಪ’ ಚಿತ್ರದ ಘೋಷಣೆಯಾದಾಗ, ಚಿತ್ರದಲ್ಲಿ ಶಿವರಾಜಕುಮಾರ್, ಈಶ್ವರನ ಪಾತ್ರದಲ್ಲಿ ನಟಿಸುತ್ತಾರೆ ಎಂದು ಸುದ್ದಿಯಾಗಿತ್ತು. ಆದರೆ, ಶಿವರಾಜಕುಮಾರ್ ಚಿತ್ರದಲ್ಲಿ ನಟಿಸಲಾಗಲಿಲ್ಲ. ಅವರ ಬದಲು ಅಕ್ಷಯ್ ಕುಮಾರ್, ಈಶ್ವರನಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ನಟಿಸಲು ಸಾಧ್ಯವಾಗದಿದ್ದರೂ, ಶಿವಣ್ಣ ಚಿತ್ರಕ್ಕೆ ಬೆಂಬಲವಾಗಿ ನಿಂತಿದ್ದಾರೆ. ಈ ಚಿತ್ರದ ಹಾಡೊಂದನ್ನು ಇತ್ತೀಚೆಗೆ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ಇಷ್ಟಕ್ಕೂ ಯಾಕೆ ಶಿವರಾಜಕುಮಾರ್ ಈ ಚಿತ್ರದಲ್ಲಿ ನಟಿಸಲಿಲ್ಲ? ಈ ಕುರಿತು ಮಾತನಾಡಿರುವ ಅವರು, ‘ನಾನು ಕಣ್ಣಪ್ಪ ಚಿತ್ರದಲ್ಲಿ ನಟಿಸಬೇಕಾಗಿತ್ತು. ಹಲವು ಚಿತ್ರಗಳು ಇದ್ದುದರಿಂದ ದಿನಾಂಕದ ಸಮಸ್ಯೆಯಿಂದ ನಟಿಸಲು ಆಗಲಿಲ್ಲ. ಮುಂದೊಂದು ದಿನ ವಿಷ್ಣು ಮಂಚು ಅವರ ಜೊತೆ ಪೂರ್ಣ ಪ್ರಮಾಣದ ಚಿತ್ರದಲ್ಲಿ ನಟಿಸುತ್ತೇನೆ. ಹಿರಿಯ ನಟ ಮೋಹನ್ ಬಾಬು ಅವರು ನಮ್ಮ ಕುಟುಂಬದ ಸದಸ್ಯರು ಇದ್ದಹಾಗೆ. ಅವರು ಕರೆದರೆ ಪ್ರೀತಿಯಿಂದ ನಟಿಸಿ ಬರುತ್ತೇನೆ. ‘ಕಣ್ಣಪ್ಪ’ ಯಶಸ್ವಿಯಾಗುತ್ತದೆ ಎಂಬ ನಂಬಿಕೆ ಇದೆ. ನಾನು ಮೊದಲ ದಿನವೇ ಚಿತ್ರವನ್ನು ನೋಡುತ್ತೇನೆ’ ಎಂದರು.
ಮೋಹನ್ ಬಾಬು ಅವರಿಗೆ ಕನ್ನಡದಲ್ಲಿ ನಟಿಸಬೇಕು ಎಂಬ ಬಹುದಿನಗಳ ಆಸೆಯಂತೆ. ‘ನನ್ನ ಪ್ರಿಯ ಮಿತ್ರ ಅಂಬರೀಶ್ ಇದ್ದಾಗಲೂ ಈ ವಿಷಯವನ್ನು ಹೇಳಿದ್ದೆ. ಆದರೆ, ಸಾಧ್ಯವಾಗಲಿಲ್ಲ. ಶಿವಣ್ಣ ಜೊತೆಗೆ ನಟಿಸುವ ಆಸೆ ಇದೆ. ‘ಕಣ್ಣಪ್ಪ’ ಚಿತ್ರವು ಜೂನ್ 27ಕ್ಕೆ ವಿವಿಧ ಭಾಷೆಗಳಲ್ಲಿ ತೆರೆಗೆ ಬರಲಿದೆ. ನ್ಯೂಜಿಲ್ಯಾಂಡ್ ಕಾಡಿನಲ್ಲಿ ಬೃಹತ್ ಸೆಟ್ ಹಾಕಿ ಚಿತ್ರೀಕರಣ ಮಾಡಿದ್ದೇವೆ. ರಾಜ್ಯದಲ್ಲಿ ‘ಕಣ್ಣಪ್ಪ’ ಚಿತ್ರವನ್ನು ರಾಕ್ಲೈನ್ ವೆಂಕಟೇಶ್ ವಿತರಣೆ ಮಾಡುತ್ತಿದ್ದಾರೆ. ನಿರ್ಮಾಪಕನಾಗಿ ನನ್ನ ಮತ್ತು ನಟನಾಗಿ ಪುತ್ರ ವಿಷ್ಣು ಮಂಚು ಅವರ ಪ್ರಯತ್ನಕ್ಕೆ ನಿಮ್ಮೆಲ್ಲರ ಬೆಂಬಲವಿರಲಿ’ ಎಂದರು.
ಚಿತ್ರದ ನಾಯಕ ವಿಷ್ಣು ಮಂಚು ಮಾತನಾಡಿ, ‘ಶಿವಣ್ಣ ಜೊತೆಗೆ ಈ ಚಿತ್ರದಲ್ಲಿ ನಟಿಸಬೇಕಿತ್ತು. ಆದರೆ, ಕಾರಣಾಂತರಗಳಿಂದ ಆ ಅವಕಾಶ ತಪ್ಪಿ ಹೋಯಿತು. ಕಣ್ಣಪ್ಪ ಅಂದರೆ ಡಾ. ರಾಜ್. ನಮ್ಮ ತಲೆಮಾರಿನವರಿಗೆ ಕಣ್ಣಪ್ಪ ಎಂದರೆ ಅದು ಶಿವರಾಜಕುಮಾರ್. ಅವರ ಆಶೀರ್ವಾದ ಬೇಕು’ ಎಂದರು.
‘ಕಣ್ಣಪ್ಪ’ ಚಿತ್ರವನ್ನು ‘ಮಹಾಭಾರತ’ ಧಾರಾವಾಹಿ ಖ್ಯಾತಿಯ ಮುಕೇಶ್ ಕುಮಾರ್ ಸಿಂಗ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ವಿಷ್ಣು ಮಂಚು, ಅಕ್ಷಯ ಕುಮಾರ್, ಪ್ರಭಾಸ್, ಮೋಹನ್ ಲಾಲ್, ಶರತ್ ಕುಮಾರ್, ದೇವರಾಜ್, ಮಧು, ಮುಂತಾದವರು ನಟಿಸಿದ್ದಾರೆ.





