ಬೆಂಗಳೂರು: ದರ್ಶನ್ ಆಪ್ತೆ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಮೆಸೇಜ್ ಮಾಡಿದ ಆರೋಪದಡಿ ರೇಣುಕಾಸ್ವಾಮಿ ಅವರ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಅವರನ್ನು ಮೈಸೂರಿನ ಖಾಸಗಿ ಹೋಟೆಲ್ನಲ್ಲಿ ಬಂಧಿಸಲಾಗಿದೆ.
ಕೇವಲ ಮೆಸೇಜ್ ಮಾಡಿದ ಆರೋಪಕ್ಕೆ ಯುವಕನೋರ್ವನ ಪ್ರಾಣ ತೆಗೆದ ನಟ ದರ್ಶನ್ ಹಾಗೂ ಅವರ 10ಜನ ಅನುಯಾಯಿಗಳನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ಇದರ ಬೆನ್ನಲ್ಲೇ ರಾಜ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಈ ಪ್ರಕರಣ ಕುರಿತು ಮಾತನಾಡಿದ್ದು, ಕಾನೂನಿನಡಿ ಎಲ್ಲರೂ ಒಂದೇ ಎಂದು ಹೇಳಿದ್ದಾರೆ.
ನಗರದಲ್ಲಿಂದು ಮಾತನಾಡಿರುವ ಅವರು, ಸಾಮಾಜಿಕ ಮಾಧ್ಯಮಗಳು ತೋರುವ ಮಾಹಿತಿ ಆಧರಿಸಿ ನಾವು ಕ್ರಮ ಕೈಗೊಳ್ಳಲು ಆಗುವುದಿಲ್ಲ. ಈ ಸಂಬಂಧ ಕಾನೂನು ಕ್ರಮದಲ್ಲಿ ದರ್ಶನ್ ಪ್ರಕರಣ ತನಿಖೆಯಾಗಬೇಕು. ದರ್ಶನ್ ಪರವಾಗಿ ಇಲ್ಲ ವಿರುದ್ಧವಾಗಿರುವ ಎಲ್ಲಾ ಮಾಹಿತಿಗಳನ್ನು ಕಲೆಹಾಕಿದ ಬಳಿಕ ಅವರ ಮೇಲೆ ಕ್ರಮ ಜರುಗಿಸಲಾಗುವುದು. ಕಾನೂನಿನ ಮುಂದೆ ಎಲ್ಲರೂ ಸಮಾನರು. ಇಲ್ಲಿ ಯಾರನ್ನು ರಕ್ಷಿಸುವ ಕೆಲಸ ಆಗುವುದಿಲ್ಲ ಎಂದು ಗೃಹ ಸಚಿವ ಪರಮೇಶ್ವರ್ ಸ್ಪಷ್ಟನೆ ನೀಡಿದರು.





