Mysore
23
broken clouds
Light
Dark

ಮತ್ತೆ ‘ಜುಗಾರಿ ಕ್ರಾಸ್‍’; ಈ ಬಾರಿ ಗುರುದತ್‍ ಗಾಣಿಗ ನಿರ್ದೇಶನದಲ್ಲಿ…

ಕನ್ನಡದ ಜನಪ್ರಿಯ ಸಾಹಿತಿ ಡಾ.ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಜನಪ್ರಿಯ ಕಾದಂಬರಿಯಾದ ‘ಜುಗಾರಿ ಕ್ರಾಸ್‍’ನ್ನು ಚಿತ್ರ ಮಾಡಬೇಕೆಂಬುದು ಹಲವರ ಕನಸಾಗಿತ್ತು. ಸುಮಾರು 20 ವರ್ಷಗಳ ಹಿಂದೆಯೇ ನಿರ್ದೇಶಕ ಕೋಡ್ಲು ರಾಮಕೃಷ್ಣ, ಶಿವರಾಜಕುಮಾರ್‍ ಅಭಿನಯದಲ್ಲಿ ಈ ಚಿತ್ರವನ್ನು ತೆರೆಗೆ ತರುವುದಕ್ಕೆ ಮುಂದಾಗಿದ್ದರು. ಆದರೆ, ಚಿತ್ರ ಸೆಟ್ಟೇರಲೇ ಇಲ್ಲ. ಆ ನಂತರ ಚಿರಂಜೀವಿ ಸರ್ಜಾ ಅಭಿನಯದಲ್ಲಿ ಹಿರಿಯ ನಿರ್ದೇಶಕ ಟಿ.ಎಸ್. ನಾಗಾಭರಣ, ಅದೇ ಹೆಸರಿನ ಚಿತ್ರವನ್ನು ಶುರು ಮಾಡಿದ್ದರು. ಚಿತ್ರದ ಮುಹೂರ್ತವಾದರೂ ಅದು ಮುಂದುವರೆಯಲಿಲ್ಲ.

ಈಗ ಈ ಕಾದಂಬರಿಯನ್ನು ‘ಅಂಬಿ ನಿಂಗೆ ವಯಸ್ಸಾಯ್ತೋ’ ಖ್ಯಾತಿಯ ಗುರುದತ್‍ ಗಾಣಿಗ ಕೈಗೆತ್ತಿಕೊಂಡಿದ್ದು, ಚಿತ್ರ ಮಾಡುವುದಕ್ಕೆ ಮುಂದಾಗಿದ್ದಾರೆ. ಭಾನುವಾರ (ಸೆಪ್ಟೆಂಬರ್ 08) ತೇಜಸ್ವಿ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಈ ಚಿತ್ರವನ್ನು ಘೋಷಿಸುವುದರ ಜೊತೆಗೆ ಮೊದಲ ಪೋಸ್ಟರ್‍ ಸಹ ಬಿಡುಗಡೆ ಮಾಡಿದ್ದಾರೆ.

‘ಜುಗಾರಿ ಕ್ರಾಸ್‍’ ಕಾದಂಬರಿಯನ್ನು ಚಿತ್ರ ಪೂರ್ಣಚಂದ್ರ ತೇಜಸ್ವಿ ಅವರ ಅಭಿಮಾನಿಗಳು ಓದದೆ ಇರಲು ಸಾಧ್ಯವೇ ಇಲ್ಲ. ಕನ್ನಡ ಸಾಹಿತ್ಯ ಲೋಕದ ಓದಲೇಬೇಕಾದ ಬಹುಮುಖ್ಯ ಕಾದಂಬರಿಗಳಲ್ಲಿ ‘ಜುಗಾರಿ ಕ್ರಾಸ್’ ಕೂಡ ಒಂದು. ಮಲೆನಾಡಿನ ಕೃಷಿಕ ದಂಪತಿಗಳ ಸ್ವಾರಸ್ಯಕರ ಕಥೆ ಈ ‘ಜುಗಾರಿ ಕ್ರಾಸ್’. ವನ್ಯ ಸಂಪತ್ತು ಕಳ್ಳತನ, ದರೋಡೆ, ಭೂಗತ ಕೆಲಸಗಳ ಬಗ್ಗೆ ವಿವರಿಸುತ್ತಾ ಜನರು ಪ್ರಕೃತಿ ಸಂಪತ್ತನ್ನು ಹೇಗೆ ಲೂಟಿ ಮಾಡುತ್ತಿದ್ದಾರೆ ಎನ್ನುವುದನ್ನು ಈ ಕಾದಂಬರಿಯಲ್ಲಿ ರೋಚಕವಾಗಿ ಹೇಳಿದ್ದಾರೆ ತೇಜಸ್ವಿ.

ಈ ಹಿಂದಿನ ಎರಡು ಪ್ರಯತ್ನಗಳಲ್ಲಿ ಇಬ್ಬರು ಜನಪ್ರಿಯ ನಟರ ಹೆಸರು ಕೇಳಿಬಂದಿತ್ತು. ಆದರೆ, ಈ ‘ಜುಗಾರಿ ಕ್ರಾಸ್‍’ನ ಪ್ರಮುಖ ಪಾತ್ರದಲ್ಲಿ ಯಾರು ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ. ಈ ಚಿತ್ರಕ್ಕೆ ಅಭಿಮನ್ಯು ಸದಾನಂದನ್ ಛಾಯಾಗ್ರಹಣ ಮಾಡಲಿದ್ದಾರೆ. ಮಿಕ್ಕ ಕಲಾವಿದರು ಮತ್ತು ತಂತ್ರಜ್ಞರು ಇನ್ನಷ್ಟೇ ಆಯ್ಕೆಯಾಗಬೇಕಿದೆ.

ಸದ್ಯ ಗುರುದತ್‍ ಗಾಣಿಗ, ಪ್ರಜ್ವಲ್‍ ದೇವರಾಜ್‍ ಅಭಿನಯದ ‘ಕರಾವಳಿ’ ಚಿತ್ರವನ್ನು ನಿರ್ದೇಶಿಸಿದ್ದು, ಅದರ ಬಿಡುಗಡೆಯ ನಂತರ ಈ ಚಿತ್ರ ಪ್ರಾರಂಭವಾಗುವ ಸಾಧ್ಯತೆ ಇದೆ.