Mysore
23
haze

Social Media

ಮಂಗಳವಾರ, 03 ಫೆಬ್ರವರಿ 2026
Light
Dark

‘ಭೀಮ’ ನೋಡಲು ಮುಖ್ಯಮಂತ್ರಿಗಳನ್ನು ಆಹ್ವಾನಿಸಿದ ‘ದುನಿಯಾ’ ವಿಜಯ್

‘ದುನಿಯಾ’ ವಿಜಯ್‍ ಅಭಿನಯದ ಮತ್ತು ನಿರ್ದೇಶನದ ‘ಭೀಮ’ ಚಿತ್ರವು ಮುಂದಿನ ವಾರ ಅಂದರೆ ಆಗಸ್ಟ್ 09ರಂದು ರಾಜ್ಯಾದ್ಯಂತ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಈ ಮಧ್ಯೆ, ಗುರುವಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿರುವ ವಿಜಯ್‍, ಚಿತ್ರ ವೀಕ್ಷಿಸಲು ಆಹ್ವಾನಿಸಿದ್ದಾರೆ.

‘ಭೀಮ’ ಚಿತ್ರವನ್ನು ವೀಕ್ಷಿಸುವುದಕ್ಕೆ ಮುಖ್ಯಮಂತ್ರಿಗಳು ಮತ್ತು ಇತರೆ ಸಚಿವರನ್ನು ಆಹ್ವಾನಿಸುವುದಾಗಿ ‘ದುನಿಯಾ’ ವಿಜಯ್‍ ಕೆಲವು ದಿನಗಳ ಹಿಂದಷ್ಟೇ ಹೇಳಿಕೊಂಡಿದ್ದರು. ಅದಕ್ಕೆ ಸರಿಯಾಗಿ, ಮುಖ್ಯಮಂತ್ರಿಗಳನ್ನು ಅವರ ಗೃಹಕಚೇರಿಯಲ್ಲಿ ಭೇಟಿ ಮಾಡಿರುವ ವಿಜಯ್‍, ‘ಭೀಮ’ ಚಿತ್ರದ ಟ್ರೇಲರ್‍ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸುವುದರ ಜೊತೆಗೆ ಚಿತ್ರವನ್ನು ವೀಕ್ಷಿಸಲು ಆಹ್ವಾನಿಸಿದ್ದಾರೆ ಎಂದು ಹೇಳಲಾಗಿದೆ.

ಆದರೆ, ರಾಜ್ಯದಲ್ಲಿ ಮಳೆ ಹೆಚ್ಚಾಗಿರುವ ಮತ್ತು ಕೆಲವು ಕಡೆ ಸಾಕಷ್ಟು ಸಮಸ್ಯೆಗಳು ಎದುರಾಗಿರುವ ಕಾರಣ, ಇಂತಹ ಸಂದರ್ಭದಲ್ಲಿ ಚಿತ್ರ ಟ್ರೇಲರ್‍ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸುವುದು ಕಷ್ಟವಿರುವುದರಿಂದ, ಪರಿಸ್ಥಿತಿ ತಹಬಂದಿಗೆ ನಂತರ ಮುಂದಿನ ವಾರ ಚಿತ್ರ ನೋಡುವುದಾಗಿ ಮುಖ್ಯಮಂತ್ರಿಗಳು ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನು, ಚಿತ್ರದ ಪ್ರಚಾರವನ್ನು ‘ದುನಿಯಾ’ ವಿಜಯ್‍ ಜೋರಾಗಿಯೇ ಮಾಡುತ್ತಿದ್ದು, ಇತ್ತೀಚೆಗೆ ಹಲವು ಕಾಲೇಜಿಗಳಿಗೆ ಭೇಟಿ ಕೊಟ್ಟು ಚಿತ್ರದ ಬಗ್ಗೆ ಪ್ರಚಾರ ಮಾಡಿದ್ದಾರೆ. ‘ಭೀಮ’ ಚಿತ್ರದಲ್ಲಿ ಯುವಜನಾಂಗದವರನ್ನು ಡ್ರಗ್ಸ್ ಹೇಗೆ ಕಾಡುತ್ತಿದೆ ಎಂಬ ವಿಷಯವನ್ನು ವಿಜಯ್‍ ಹೇಳಿದ್ದು, ಈ ನಿಟ್ಟಿನಲ್ಲಿ ಹಲವು ಕಾಲೇಜುಗಳಿಗೆ ಭೇಟಿ ನೀಡಿ ಚಿತ್ರದ ಪ್ರಚಾರ ಮಾಡುವುದರ ಜೊತೆಗೆ, ಡ್ರಗ್ಸ್ ಹಾವಳಿ ಕುರಿತು ಜಾಗೃತಿ ಮೂಡಿಸಿ ಬಂದಿದ್ದಾರೆ.

‘ಸಲಗ’ ನಂತರ ವಿಜಯ್‍ ನಿರ್ದೇಶಿಸುತ್ತಿರುವ ಎರಡನೆಯ ಕಥೆ ಇದು. ಈ ಚಿತ್ರಕ್ಕೆ ‘ದುನಿಯಾ’ ವಿಜಯ್‍ ಕಥೆ, ಚಿತ್ರಕಥೆ ಬರೆಯುವುದರ ಜೊತೆಗೆ ನಿರ್ದೇಶನವನ್ನೂ ಮಾಡಿದ್ದು, ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ. ಅವರಿಗೆ ನಾಯಕಿಯಾಗಿ ಅಶ್ವಿನಿ ನಟಿಸಿದ್ದಾರೆ. ಮಿಕ್ಕಂತೆ ಅಚ್ಯುತ್‍ ಕುಮಾರ್, ರಂಗಾಯಣ ರಘು, ರಾಘು ಶಿವಮೊಗ್ಗ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚರಣ್ರಾಜ್ ಸಂಗೀತ ಈ ಚಿತ್ರಕ್ಕಿದೆ. ‘ಭೀಮ’ ಚಿತ್ರವನ್ನು ಕೃಷ್ಣ ಸಾರ್ಥಕ್ ಮತ್ತು ಜಗದೀಶ್ ಗೌಡ ಜೊತೆಯಾಗಿ ನಿರ್ಮಿಸಿದ್ದಾರೆ.

Tags:
error: Content is protected !!