ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿ ವಿಚಾರಣೆ ಎದುರಿಸುತ್ತಿರುವ ನಟ ದರ್ಶನ್ಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಲಿದೆಯಾ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ ಸದ್ಯ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೀಡಿರುವ ಹೇಳಿಕೆ.
ಇಂದು ( ಜೂನ್ 18 ) ಡಿಕೆ ಶಿವಕುಮಾರ್ ಬಿಬಿಎಂಪಿಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಮೇಲ್ವಿಚಾರಣೆಗಳ ಕಚೇರಿ ಉದ್ಘಾಟನೆ ಮತ್ತು ಬಿಬಿಎಂಪಿ ಪೌರ ಸಭಾಂಗಣ ಕಚೇರಿ ಉದ್ಘಾಟನೆ ಮಾಡಿ ಮಾಧ್ಯಮಗಳ ಜತೆ ಮಾತನಾಡುವಾಗ ರಾಜರಾಜೇಶ್ವರಿ ನಗರ ರಾಜಕಾಲುವೆ ಮೇಲೆ ನಿರ್ಮಾಣಗೊಂಡಿರುವ ದರ್ಶನ್ ಮನೆ ತೆರವಿನ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಯಾರೇ ಸ್ಟೇ ತಂದಿದ್ದರೂ ಕಾನೂನು ಪ್ರಕಾರ ಕ್ರಮವಹಿಸಿ ತೆರವು ಮಾಡಲಿದ್ದೇವೆ. ನೀನು ಸ್ಟೇ ತಂದಿದ್ದರೂ ತೆರವು ಮಾಡುತ್ತೇವೆ. ನಾನು ಸ್ಟೇ ತಂದಿದ್ದರೂ ತೆರವು ಮಾಡುತ್ತೇವೆ. ಯಾರೇ ಸ್ಟೇ ತಂದಿದ್ದರೂ ತೆರವು ಮಾಡುತ್ತೇವೆ. ಕಾನೂನು ಪ್ರಕಾರ ಏನು ಮಾಡಬೇಕೋ ಅದನ್ನು ಮಾಡುತ್ತೇವೆ ಎಂದು ಡಿಕೆ ಶಿವಕುಮಾರ್ ಹೇಳಿದರು. ಈ ಮೂಲಕ ಪರೋಕ್ಷವಾಗಿ ದರ್ಶನ್ ಮನೆ ತೆರವಿನ ಸುಳಿವು ನೀಡಿದಂತಿದೆ.
ಈ ಹಿಂದೆ ಸರ್ಕಾರ ರಾಜಕಾಲುವೆ ಮೇಲೆ ನಿರ್ಮಾಣವಾಗಿರುವ ಮನೆಗಳನ್ನು ತೆರವುಗೊಳಿಸುವಂತೆ ಸೂಚನೆ ನೀಡಿದ್ದಾಗ ನಟ ದರ್ಶನ್ ಬಫರ್ ಜೋನ್ ಮೇಲೆ ಮನೆ ನಿರ್ಮಿಸಿರುವುದು ಬೆಳಕಿಗೆ ಬಂದಿತ್ತು. ಕೂಡಲೇ ದರ್ಶನ್ ಕೋರ್ಟ್ ಮೊರೆ ಹೋಗಿದ್ದರು. ಉಚ್ಛ ನ್ಯಾಯಾಲಯ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ 2016ರಲ್ಲಿ ಸೂಚನೆ ನೀಡಿತ್ತು.